ಸುರಪುರ: ಇಲ್ಲಿಯ ತಾಲೂಕು ಪಂಚಾಯಿತಿ ಸಭಾಂಗಣದ ಮುಂದೆ ಕಳೆದ ಐದು ದಿನಗಳಿಂದ ನಡೆದ ತಾಲೂಕಿನ ಆಲ್ದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಧ್ಯಕ್ಷ ಮತ್ತು ಸದಸ್ಯರು ನಡೆಸಿದ ಧರಣಿ ಅಂತ್ಯಗೊಳಿಸಲಾಗಿದೆ.
ಗ್ರಾಮ ಪಂಚಾಯಿತಿಗೆ ಸರಕಾರ ದಿಂದ ಬಂದಿದ್ದ ೧೫ನೇ ಹಣಕಾಸು ಯೋಜನೆಯ ೧೩ ಲಕ್ಷ ೩೦ ಸಾವಿರದ ೧೦೦ ರೂಪಾಯಿ ಹಣ ವಂಚಿಸಿದ್ದಾರೆ ಎಂದು ಆರೋಪಿಸಿ ಕಳೆದ ಐದು ದಿನಗಳಿಂದ ಧರಣಿ ನಡೆಸಿದ್ದರು.ಶುಕ್ರವಾರ ಸಂಜೆ ಧರಣಿ ಅಂತ್ಯಗೊಳಿಸಿ ಮಾತನಾಡಿದ ಮುಖಂಡರು,ನಮ್ಮ ಗ್ರಾಮ ಪಂಚಾಯಿತಿಯ ಅನುದಾನ ದುರಪಯೋಗ ಮಾಡಿಕೊಂಡ ಹಣವನ್ನು ಅಭಿವೃಧ್ಧಿ ಅಧಿಕಾರಿಯವರು ಮರಳಿ ಪಂಚಾಯಿತಿ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ.ಅಲ್ಲದೆ ಪಿಡಿಓ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.ಆದ್ದರಿಂದ ನಮ್ಮ ಬಹುತೇಕ ಭೇಡಿಕೆಗಳು ಈಡೇರಿದ್ದರಿಂದ ಧರಣಿಯನ್ನು ಅಂತ್ಯಗೊಳಿಸುತ್ತಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಆಲ್ದಾಳ ಗ್ರಾಮ ಪಂಚಾಯಿತಿಯ ಅನುದಾನದ ಹಣ ದುರಪಯೋಗ ಮಾಡಿಕೊಂಡಿದ್ದರ ಕುರಿತು ಸಮಗ್ರ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಮನವಿಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವರ್ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಶ್ರೀನಿವಾಸ ದೋರನಹಳ್ಳಿ,ಉಪಾಧ್ಯಕ್ಷೆ ನರಸಮ್ಮ ಹಣಮಂತ್ರಾಯ ಕಟ್ಟಿಮನಿ,ಮುಖಂಡರಾದ ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ ಸೇರಿದಂತೆ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ಗ್ರಾಮದ ಅನೇಕರು ಭಾಗವಹಿಸಿದ್ದರು.