ಆಳಂದ: ಅಕ್ಟೋಬರ್ 23ರಂದು ಪಟ್ಟಣದ ತಾಲೂಕು ಆಡಳಿತ ಸೌಧ ಆವರಣದಲ್ಲಿ ವಿಶ್ವಗುರು ಬಸವೇಶ್ವರರ ಅಶ್ವರೂಢ ಪ್ರತಿಮೆಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಲೋಕಾರ್ಪಣೆ ನಡೆಯಲಿದೆ, ನಿಕಟಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ರಾಜ್ಯದ ನಾಯಕರು ಭಾಗವಹಿಸಲಿದ್ದಾರೆ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಹೇಳಿದರು.
ತಾಲೂಕಿನ ನೆಲ್ಲೂರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭದಲ್ಲಿ ಗ್ರಾಮಸ್ಥರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಆಳಂದ ಆಡಳಿತಸೌಧ ಆವರಣದಲ್ಲಿ ಈ ಹಿಂದೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸಿಎಂ ಬೊಮ್ಮಾಯಿ ಅವರು ಅನಾವರಣ ಕೈಗೊಂಡಿದ್ದರು. ಈಗ ಅವರಿಂದಲೇ ಬಸವೇಶ್ವರ ಪ್ರತಿಮೆಯೂ ಸಹ ಅನಾವರಣ ನಡೆಯಲಿದೆ. ಈ ಕುರಿತು ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿಮೆ ಅನಾವರಣ ಬಳಿಕ ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಬೃಹತ್ ಸಮಾರಂಭ ಹಮ್ಮಿಕೊಳ್ಳಲಾಗಿದೆ, ಅನೇಕ ನಾಯಕರು, ಮಠಾಧೀಶರು ಪಾಲ್ಗೊಳ್ಳಲಿದ್ದು, ಈ ಸಮಾರಂಭದ ಯಶಸ್ವಿಗೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಮೊದಲು ಲಾಡಚಿಂಚೋಳಿ ಕ್ರಾಸ್ನಿಂದ ನೆಲ್ಲೂರ ಗ್ರಾಮದವರೆಗೆ 5 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ, ಗ್ರಾಮದಲ್ಲಿ ಜಲ ಜೀವನ ಮಿಷನ್ ಅಡಿಯಲ್ಲಿ 77ಲಕ್ಷ ರೂ. ವೆಚ್ಚದಲ್ಲಿ ಪ್ರತಿಮನೆಗೆ ನಲ್ಲಿ ನೀರು ಪೂರೈಕೆ ಕಾಮಗಾರಿ ಹಾಗೂ 10 ಲಕ್ಷ ವೆಚ್ಚದಲ್ಲಿ ಶಾಲಾ ಆವರಣಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಸಿಎಂ ಬೊಮ್ಮಾಯಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದರಿಂದ ಕಾಮಗಾರಿಗಳು ನಡೆಯುತ್ತಿವೆ. ಮುಂದೆಯೂ ಇನ್ನೂ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಆಶೀರ್ವದಿಸಬೇಕು ಎಂದು ಕೋರಿದರು.
ಜೆಸ್ಕಾಂ ನಿರ್ದೇಶಕ ಈರಣ್ಣಾ ಮಂಗಾಣೆ, ನಿವೃತ್ತ ಸೈನಿಕರ ಸಂಘದ ಜಿಲ್ಲಾ ಮುಖಂಡ ಬಸವರಾಜ ಬಿರಾದಾರ ಅವರು ಮಾತನಾಡಿ, ರಸ್ತೆ, ನೀರಾವರಿ, ಸಮುದಾಯ ಭವನ ಶಾಲೆ, ಕಾಲೇಜುಗಳ ಕಟ್ಟಡ ಮಂಜೂರಾತಿ ಶ್ರಮಿಸಿದ್ದ ಶಾಸಕರು ಮತ್ತೆ ಅಧಿಕಾರಕ್ಕೆ ತರಲು ಅವರ ಕೈಬಲಪಡಿಸಬೇಕು ಎಂದು ಹೇಳಿದರು.
ಲೋಕೋಪಯೋಗಿ ಎಇಇ ಶಶೀಧರ್, ಜೆಇ ಶರಣಯ್ಯಾ ಹಿರೇಮಠ, ಜೆಜೆಎಂ ಎಇ ಚಂದ್ರಕಾಂತ, ಶಿವಶರಣಪ್ಪ ಬಿರಾದಾರ, ಸುಬಣ್ಣಾ ಬಿರಾದಾರ, ಗುತ್ತಿಗೆದಾರ ಹಣಮಂತ ರೆಡ್ಡಿ, ಕೆ.ಟಿ. ರಾಠೋಡ ಸೇರಿದಂತೆ ಹಿರಿಯ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.