ಕಲಬುರಗಿ: ಕಟ್ಟಡ ಕಾರ್ಮಿಕ ಕಾರ್ಡ್ ಪಡೆದವರು ವರ್ಷದಲ್ಲಿ ಕನಿಷ್ಟ 90 ದಿನಗಳನ್ನು ಈ ವೃತ್ತಿಯಲ್ಲಿ ತೊಡಗಿಕೊಳ್ಳುವುದು ಕಡ್ಡಾಯ. ಸುಳ್ಳು ಮಾಹಿತಿ ನೀಡಿ ನಿರ್ಮಾಣ ವೃತ್ತಿಯಲ್ಲಿ ತೊಡಗದವರು ಲೇಬರ್ ಕಾರ್ಡ್ ಪಡೆದಿದ್ದಲ್ಲಿ ಅಂತಹವರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ್ ಎಚ್ಚರಿಕೆ ನೀಡಿದ್ದಾರೆ.
ಕಾರ್ಮಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಗುರುವಾರ ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ ಮಾಧ್ಯಮ ಕ್ಷೇತ್ರದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಮತ್ತು ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿಂಚಣಿ) ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮದುವೆ-ಶೈಕ್ಷಣಿಕ ಸಹಾಯ ಧನ ಸೇರಿದಂತೆ ಇನ್ನಿತರ ಹಲವಾರು ಕಲ್ಯಾಣ ಕಾರ್ಯಕ್ರಮಗಳು ಲೇಬರ್ ಕಾರ್ಡ್ ಮೂಲಕ ನೀಡಲಾಗುತ್ತಿದೆ. ಇದೀಗ ಹೊಸದಾಗಿ 45 ಕಿ.ಮೀ. ಅಂತರದೊಳಗಿನ ಪ್ರಯಾಣಕ್ಕೆ ಉಚಿತ್ ಬಸ್ ಪಾಸ್ ಸಹ ನೀಡಲಾಗುತ್ತಿದೆ. ಕೆಲವರು ತಪ್ಪು ಮಾಹಿತಿ ನೀಡಿ ಕಾರ್ಡ್ ಪಡೆಯುತ್ತಿದ್ದಾರೆ. ತಪ್ಪು ಮಾಹಿತಿ ನೀಡಿ ಕಾರ್ಡ ಪಡೆದಿದ್ದಲ್ಲಿ ಕೂಡಲೆ ಇಲಾಖೆಗೆ ಹಿಂದಿರುಗಿಸಬೇಕು. ನಿಜವಾದ ಫಲಾನುಭವಿಗಳು ಇದರ ಪ್ರಯೋಜನೆ ಪಡೆಯಬೇಕು. ಇನ್ನೂ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿಂಚಣಿ) ಯೋಜನೆಯಡಿ 18-40 ವರ್ಷದೊಳಗಿನ ಅಸಂಘಟಿಕತ ಕಾರ್ಮಿಕರು ಮಾಸಿಕ 55 ರಿಂದ 200 ರೂ. ವರೆಗೆ ವಂತಿಗೆ ಪಾವತಿಸಿದಲ್ಲಿ 60 ವರ್ಷದ ನಂತರ ಸಂಧ್ಯಾಕಾಲದಲ್ಲಿ ಮಾಸಿಕ 3,000 ರೂ. ನಿಶ್ಚಿತ ಪಿಂಚಣಿ ಪಡೆಯಬಹುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಕೆಲವರಿಗೆ ಇ-ಶ್ರಮ್ ಕಾರ್ಡ್ ಮತ್ತು ಪಿಂಚಣಿ ಕಾರ್ಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ರವಿ ಮಿರಸ್ಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ರಾಜ್ಯ ಸಮಿತಿ ಸದಸ್ಯ ಡಾ.ಶಿವರಂಜನ್ ಸತ್ಯಂಪೇಟೆ, ಉಪಾಧ್ಯಕ್ಷರಾದ ರಾಮಕೃಷ್ಣ ಬಡಶೇಷಿ, ದೇವೇಂದ್ರಪ್ಪ ಆವಂಟಿ, ಕಾರ್ಯದರ್ಶಿ ಅರುಣ ಕದಂ ಸೇರಿದಂತೆ ಇನ್ನಿತರ ಪತ್ರಕರ್ತರು ಇದ್ದರು.