ಶಹಾಬಾದ:ಮಾನವೀಯತೆ, ಆಚಾರ-ವಿಚಾರ, ಸಂಸ್ಕಾರ, ಗುರು-ಹಿರಿಯರನ್ನು ಗೌರವಿಸುವದು, ಹೃದಯವಂತಿಕೆ, ದೇಶಪ್ರೇಮ ಸೇರಿದಂತೆ ಮುಂತಾದ ಮಾನವೀಯ, ಸಾಮಾಜಿಕ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಹೊಂದಿರುವ ಜಾನಪದವು ಸಂಸ್ಕøತಿ, ಪರಂಪರೆಯ ತಾಯಿಬೇರಾಗಿದ್ದು, ಅದನ್ನು ಉಳಿಸಿ, ಮುಂದಿನ ಪೀಳಿಗೆಗೆ ಮುಟ್ಟಿಸುವ ಕಾರ್ಯವಾಗಬೇಕಾಗಿದೆ ಎಂದು ತಾಲೂಕಾ ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ ಅಭಿಮತಪಟ್ಟರು.
ಅವರು ಬುಧವಾರ ಶ್ರೀಮತಿ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟಿ ಶಾಲೆಯಲ್ಲಿ ‘ಕನ್ನಡ ಜಾನಪದ ಪರಿಷತ್’ನ ತಾಲೂಕಾ ಘಟಕದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ “ಜಾನಪದ ನಡೆ-ಶಾಲೆಯೆಡೆ” ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ದೇಶದ ಭವ್ಯ ಸಂಸ್ಕøತಿ, ಪರಂಪರೆ ಉಳಿದಿದೆ ಎಂದರೆ, ಅದು ಜಾನಪದದಿಂದ ಮಾತ್ರ ಎಂಬುದು ಮರೆಯಬಾರದು. ವಿದೇಶಿ ಸಂಸ್ಕøತಿ ಬೇಡ. ದೇಶದ ಮೂಲ ಸಂಸ್ಕøತಿಯಾದ ಜಾನಪದ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಳ್ಳಿ. ಜಾನಪದ ಸಂಸ್ಕøತಿ ಪರಿಸರ, ನಿಸರ್ಗದೊಂದಿಗಿನ ಅವಿನಾಭಾವ ಹೊಂದಿದ್ದು, ಪ್ರಗತಿಕೆ ಪೂರಕವಾಗಿದೆ ಎಂದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಮಗು ಜನಿಸಿದಾಗ ಐದೇಶಿಯಿಂದ ಆರಂಭಗೊಂಡು, ವ್ಯಕ್ತಿಯ ಜೀವನದ ಕೊನೆಯವರೆಗೆ ವಿವಿಧ ಸಂಸ್ಕಾರಗಳನ್ನು ನೀಡಲಾಗುತ್ತದೆ. ಪ್ರತಿಯೊಂದು ಸಂಸ್ಕಾರಕ್ಕೆ ತನ್ನದೇ ಆದ ಹಿನ್ನಲೆ, ಅರ್ಥವನ್ನು ಒಳಗೊಂಡಿದೆ. ಆದರೆ ಪ್ರಸ್ತುತವಾಗಿ ಇಂತಹ ಆಚರಣೆಗಳು ಕಡಿಮೆಯಾಗುತ್ತವೆ. ಜಾನಪದ ಪರಂಪರೆಯನ್ನು ಎಲ್ಲೆಡೆ ಪಸರಿಸಬೇಕು ಎಂಬ ಉದ್ದೇಶದಿಂದ ನಮ್ಮ ಪರಿಷತ್ ನಿರಂತರವಾಗಿ ಕಾರ್ಯ ಮಾಡುತ್ತಿದೆ ಎಂದರು.
ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಸಂಘಟನಾ ಕಾರ್ಯದರ್ಶಿ ಸಾಯಬಣ್ಣ ಹೋಳ್ಕರ್, ತಾಲೂಕಾಧ್ಯಕ್ಷ ರಾಜಶೇಖರ ದೇವರಮನಿ, ಶಾಲೆಯ ಮುಖ್ಯ ಶಿಕ್ಷಕಿ ದಾನಮ್ಮ ಎಂ.ಹಿರೇಮಠ, ಸಹ ಶಿಕ್ಷಕರಾದ ಆರತಿ ನಾಲವಾರ, ಪಾರ್ವತಿ ಚಟ್ಟಿ, ನಿರ್ಮಲಾ ಬಿರಾದಾರ, ಆರತಿ ವಿ., ಸುಜಾತಾ, ಸೌಮ್ಯ, ಉಜ್ಮಾ, ಪ್ರಮುಖರಾದ ಮಲ್ಲಿಕಾರ್ಜುನ ಎಂ., ವೀರೇಶ ಮೋರೆ ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಾನಪದ ಗೀತೆಗಳನ್ನು ಹಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.