ಶಹಾಭಾದ: ಬಡವರ, ರೈತರ ಹಾಗೂ ಕಾರ್ಮಿಕರ ಸಮಸ್ಯೆಗಳಿಗೆ ಧ್ವನಿಯಾಗಿದ್ದ ಏಕೈಕ ನಾಯಕರೆಂದರೆ ಮಾರುತಿ ಮಾನ್ಪಡೆ ಅವರು. ಅವರ ನಿಧನ ಮತ್ತು ಅವರು ಮಾಡಿದ ಹೋರಾಟ ಕಲ್ಯಾಣ ಕರ್ನಾಟಕದ ಹೋರಾಟಗಾರರಿಗೆ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಚಿತ್ತಾಪೂರ ಸಿಐಟಿಯು ತಾಲೂಕಾಧ್ಯಕ್ಷೆ ಶೇಖಮ್ಮ ಕುರಿ ಹೇಳಿದರು.
ಅವರು ಗುರುವಾರ ನಗರದ ಸಿಪಿಐಎಮ್(ಎಮ್) ಕಚೇರಿಯಲ್ಲಿ ಆಯೋಜಿಸಲಾದ ಕಾಮ್ರೆಡ್ ಮಾರುತಿ ಮಾನ್ಪಡೆ ಅವರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಸುಮಾರು 30-35 ದಶಕಗಳಿಂದ ರಾಜ್ಯದ ಯಾವ ಮೂಲೆಯಲ್ಲಿಯೇ ಅನ್ಯಾಯ, ಅತ್ಯಾಚಾರ, ಮೋಸ ನಡೆದಿದ್ದರೂ ಇವುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಾರುತಿ ಮಾನ್ಪಡೆ ಕಲ್ಯಾಣ ಕರ್ನಾಟಕದ ಹೋರಾಟದ ಧ್ವನಿಯಾಗಿದ್ದರು. ರೈತ, ಕೃಷಿ, ಕೂಲಿ, ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿಭಟನೆ, ಹೋರಾಟ ಹಮ್ಮಿಕೊಳ್ಳುತ್ತಿದ್ದ ಇವರು ಒಬ್ಬ ಜನಪರ ಹೋರಾಟಗಾರರಾಗಿದ್ದರು ಎಂದು ಹೇಳಿದರು.
ಸಿಐಟಿಯು ಹಿರಿಯ ಮುಖಂಡ ಮಲ್ಲಣ್ಣ ಕಾರೊಳ್ಳಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ರಾಯಪ್ಪ ಹುರಮುಂಜಿ ಮಾತನಾಡಿ,ಅವರೊಬ್ಬ ನೊಂದವರ ಧ್ವನಿಯಾಗಿದ್ದರು. ಯಾವುದೇ ಸಮಸ್ಯೆಗಳಿಗೆ ಧುಮಿಕದರೂ, ಗುರಿ ಮುಟ್ಟುವ ತನಕ ಹಿಡಿದ ಹಠ ಬಿಡುತ್ತಿರಲಿಲ್ಲ. ಅನೇಕ ಬಾರಿ ಪೆÇಲೀಸರ ಲಾಠಿ ರುಚಿ ಕೂಡ ಉಂಡಿದ್ದರು. ಹೀಗೆ ಜನಪರ, ಜೀವಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಇವರು ತಾವು ನಂಬಿದ ತತ್ವ, ಸಿದ್ಧಾಂತಕ್ಕೆ ಸದಾ ಅಂಟಿಕೊಂಡಿರುತ್ತಿದ್ದರು. ಆ ತತ್ವ, ಸಿದ್ಧಾಂತಗಳಿಗೆ ಸ್ವಲ್ಪ ಕುಂದುಂಟಾದರೂ ಸಾಕು, ಅವರ ವಿರುದ್ಧ ಸೆಟೆದು ನಿಲ್ಲುತ್ತಿದ್ದರು. ಅವರ ಹಾಗೇ ನಾವು ಕೂಡ ಜನಪರವಾದ ಹೋರಾಟಕ್ಕಾಗಿ ಶ್ರಮಿಸಬೇಕಿದೆ ಎಂದರು.
ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಮು ಜಾಧವ, ಭೀಮಶಾ ಗೋಳಾ,ನಿಂಗಣ್ಣ ಇಂಗಳಗಿ, ವಿಶ್ವರಾಜ ಫಿರೋಜಾಬಾದ,ಸೇರಿದಂತೆ ಅನೇಕ ಕೂಲಿ ಕಾರ್ಮಿಕರು ಹಾಗೂ ಮಾನ್ಪಡೆ ಅಭಿಮಾನಿ ಬಳಗದವರು ಹಾಜರಿದ್ದರು.