ಕಲಬುರಗಿ: ದೀಪಗಳು ಬೆಳಕನ್ನು ನೀಡಿ ಹೊರಗಿನ ಕತ್ತಲೆಯನ್ನು ಕಳೆಯುತ್ತವೆ. ವಚನಗಳು, ಉತ್ತಮ ಪುಸ್ತಕಗಳ ಅಧ್ಯಯನ ಮಾಡಿ, ಅವುಗಳ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಅಜ್ಞಾನ, ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ ಎಂಬ ಆಂತರಿಕ ಕತ್ತಲೆ ದೂರವಾಗುತ್ತದೆ ಎಂದು ಉಪನ್ಯಾಸಕ, ಪ್ರಗತಿಪರ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಸ್ವಾಮಿ ವಿವೇಕಾನಂದ ನಗರದಲ್ಲಿರುವ ಓಂಕಾರೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸೋಮವಾರ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ವಚನಗಳÀ ಮತ್ತು ವಿವಿಧ ಮಹಾತ್ಮರು, ಮಹನೀಯರ ಜೀವನ ಚರಿತ್ರೆಯ ಪುಸ್ತಕಗಳನ್ನು ವಿತರಿಸುವ ಮೂಲಕ “ವಚನ-ಜ್ಞಾನ ದೀಪೋತ್ಸವ” ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ವಚನಗಳಲ್ಲಿ ಪ್ರತಿಯೊಂದು ಸಮಸ್ಯೆಗೆ ಪರಿಹಾರ ದೊರಕುತ್ತದೆ. ಅವುಗಳನ್ನು ಅಧ್ಯಯನ ಮಾಡಬೇಕು. ಒಬ್ಬ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ವಚನಗಳಿದೆ. ಅವುಗಳು ಸಾಧನೆಯ ದಾರಿಯನ್ನು ತಿಳಿಸುವ ಮೂಲಕ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಮಾಡುವ ಸಾಧನಗಳಾಗಿವೆ. ನಾವು ಹೆಚ್ಚು ಓದಿದಷ್ಟು ನಮ್ಮ ಅರಿವು ಮತ್ತು ಜ್ಞಾನದ ವ್ಯಾಪ್ತಿ ಹೆಚ್ಚಾಗುತ್ತದೆ. ಹೆಚ್ಚಿನ ಅಧ್ಯಯನದಿಂದ ವ್ಯಕ್ತಿಯು, ಶಕ್ತಿಯಾಗುತ್ತಾನೆ. ಆದ್ದರಿಂದ ಅನೇಕ ಚಟಗಳನ್ನು ರೂಢಿಸಿಕೊಂಡು ಹಾಳಾಗುವ ಬದಲು, ವಚನಗಳು, ಉತ್ತಮವಾದ ಪುಸ್ತಕಗಳನ್ನು ನಿರಂತರವಾಗಿ ಓದುವ ಹವ್ಯಾಸವನ್ನು ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದರು.
ಜಿಲಾನಾಬಾದ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಧರ್ಮರಾಜ ಜವಳಿ ಮಾತನಾಡಿ, ಜ್ಞಾನಕ್ಕಿಂತ ದೊಡ್ಡ ಸಂಪತ್ತು, ಶಕ್ತಿ ಬೇರೊಂದಿಲ್ಲ. ಇದು ಯಾರಿಂದಲೂ ಕಳ್ಳತನ ಮಾಡಲಾಗದ ಸಂಪತ್ತಾಗಿದೆ. ಇಂತಹ ಅಮೂಲ್ಯವಾದ ಸಂಪತ್ತನ್ನು ಪ್ರತಿಯೊಬ್ಬರು ಪಡೆಯಬೇಕಾದರೆ ಸದಾ ಪುಸ್ತಕಗಳನ್ನು ಓದಬೇಕು. ಬಾಲ್ಯದಿಂದಲೇ ಮಹನೀಯರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಸಿದ್ದರಾಮ ತಳವಾರ, ರಾಜಶೇಖರ ಮುನ್ನಳ್ಳಿ, ದಿಗಂಬರ ಸಿಂಧೆ, ಅಮೃತ ಪೂಜಾರಿ, ರಾಮಲಿಂಗ ಸ್ವಾಮಿ, ವಿಜಯಕುಮಾರ ದುತ್ತರಗಾಂವ, ಕಲ್ಯಾಣರಾವ ಪಾಟೀಲ, ಹಲವಯ್ಯ ಸ್ವಾಮಿ, ಬಸವರಾಜ ತಳವಾರ, ಸಮೀಕ್ಷಾ ಎಸ್.ತಳವಾರ ಸೇರಿದಂತೆ ಬಡಾವಣೆಯ ನಾಗರಿಕರು, ಮಕ್ಕಳು ಭಾಗವಹಿಸಿದ್ದರು.