ಸುರಪುರ: ಮತ ಕ್ಷೇತ್ರದ ಸುರಪುರ ಮತ್ತು ಹುಣಸಗಿ ತಾಲೂಕುಗಳಲ್ಲಿ ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಭತ್ತ, ಹತ್ತಿ ಮತ್ತು ತೊಗರಿ ಸೇರಿ ವಿವಿಧ ಬೆಳೆಗಳು ಹಾನಿಯಾಗಿ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಕೊಡಲೆ ತಹಸೀಲ್ದಾರರು ಬೆಳೆ ಹಾನಿಯ ಸಮೀಕ್ಷೆಯನ್ನು ನಿಷ್ಪಕ್ಷಪಾತವಾಗಿ ಕೈಗೊಂಡು ಸೂಕ್ತ ಪರಿಹಾರ ನೀಡುವಂತೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದೆ ಹಾನಿಯಾಗಿದ್ದ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರು ವರದಿ ನೀಡುವಲ್ಲಿ ಪಕ್ಷಪಾತವಾಗಿ ಸಮೀಕ್ಷೆಯ ವರದಿ ಸಲ್ಲಿಸಿದ್ದರಿಂದ ಅನೇಕ ರೈತರು ಪರಿಹಾರ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಅಲ್ಲದೆ ಇನ್ನೂ ಕೂಡ ಬಹಳಷ್ಟು ರೈತರ ಖಾತೆಗೆ ಪರಿಹಾರ ಹಣ ಸಿಕ್ಕಿರುವುದಿಲ್ಲಾ. ಶುಕ್ರವಾರ ರಾತ್ರಿ ಸುರಿದ ಗಾಳಿ ಮಳೆಗೆ ಅವಳಿ ತಾಲೂಕಿನಲ್ಲಿ ಬೆಳೆದ ಭತ್ತ ಬೆಳೆಯು ಸಂಪೂರ್ಣವಾಗಿ ನೆಲಕಚ್ಚಿದೆ. ಕಟಾವಿನ ಹಂತದಲ್ಲಿರುವ ಭತ್ತವು ನೆಲಕಚ್ಚಿರುವುದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಅವರ ಜೀವನವನ್ನು ಚಿಂತಾಜನಕ ಸ್ಥಿತಿಗೆ ದೂಡಿದೆ ಹೀಗಾಗಿ ಈ ಬಾರಿಯಾದರು ಗ್ರಾಮ ಲೆಕ್ಕಿಗರು ನಿಷ್ಪಕ್ಷಪಾತವಾಗಿ, ತಾರತಮ್ಯ ನೀತಿ ಅನುಸರಿಸದೆ ಬೆಳೆ ಹಾನಿಯ ಸಮೀಕ್ಷೆ ನಡೆಸಿ ಕಷ್ಟದÀಲ್ಲಿರುವ ರೈತರಿಗೆ ಪರಿಹಾರ ನೀಡುವತ್ತ ಕ್ರಮವಹಿಸಬೇಕು.
ಕಾರಣ ಮಳೆಯಿಂದ ಉಂಟಾದ ಬೆಳೆ ಮತ್ತು ಮನೆಗಳ ಹಾನಿಯನ್ನು ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ತಾರತಮ್ಯ ನೀತಿ ಅನುಸರಿಸದೆ ಕಷ್ಟದಲ್ಲಿರುವ ಜನರಿಗೆ ನ್ಯಾಯುತವಾಗಿ ಪರಿಹಾರವನ್ನು ಒದಗಿಸಲು ಕ್ರಮವಹಿಸಬೇಕು ಮತ್ತು ಕಳೆದಬಾರಿಯ ಹಾಗೂ ಸಧ್ಯದ ಹಾನಿ ಪರಿಹಾರವನ್ನು ಪಕ್ಷಾತೀತವಾಗಿ ಸಮೀಕ್ಷೆ ನಡೆಸಿ ಅತೀ ಶೀಘ್ರವಾಗಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರು ಮತ್ತು ಜನರೊಂದಿಗೆ ಧರಣಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸುತ್ತಾ, ರೈತರಿಂದ ಮತ್ತು ಜನರಿಂದ ಯಾವುದೇ ರೀತಿಯ ದೂರುಗಳು ಬರದಂತೆ ಅಧಿಕಾರಿಗಳು ಖುದ್ದಾಗಿ ಹಾನಿ ಪ್ರದೇಶಕ್ಕೆ ಬೇಟಿನೀಡಿ ಪಕ್ಷಾತೀತವಾಗಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಲು ಕ್ರಮವಹಿಸುವಂತೆ ಪತ್ರಿಕಾ ಪ್ರಕಟಣೆ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.