ಸುರಪುರ: ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿಕೊಳ್ಳುವಂತೆ ಜಾಗೃತಿ ಮೂಡಿಸಲು ನಗರದಲ್ಲಿ ತಾಲೂಕು ಆಡಳಿತ ದಿಂದ ಕಾರ್ಯಕ್ರಮ ನಡೆಸಲಾಯಿತು.
ಮೊದಲಿಗೆ ನಗರದ ಡಾ:ಬಿ.ಆರ್.ಅಂಬೇಡ್ಕರ್ ವೃತ್ತ ದಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರು ಜಾಥಾಕ್ಕೆ ಚಾಲನೆ ನೀಡಿದರು.
ಮಹಾತ್ಮ ಗಾಂಧಿ ವೃತ್ತ,ಹನುಮಾನ ಟಾಕೀಸ್ ಮಾರ್ಗವಾಗಿ,ವೇಣುಗೋಪಾಲಸ್ವಾಮಿ ದೇವಸ್ಥಾನ ದಿಂದ ಸರದಾರ ವಲ್ಲಭಬಾಯಿ ಪಟೇಲ್ ವೃತ್ತ,ದರಬಾರ ರಸ್ತೆ ಮಾರ್ಗವಾಗಿ ಗರುಡಾದ್ರಿ ಕಲಾ ಮಂದಿರದಲ್ಲಿ ಜಾಥಾ ಸಮಾಪ್ತಿಗೊಳಿಸಲಾಯಿತು.
ನಂತರ ಗರುಡಾದ್ರಿ ಕಲಾ ಮಂದಿರದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ, 17 ವರ್ಷ ಮೇಲ್ಪಟ್ಟ ಎಲ್ಲರಿಗೂ ಈಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿಕೊಳ್ಳಲು ಸರಕಾರ ಅವಕಾಶ ನೀಡಿದೆ,ಮೊದಲು ವರ್ಷಕ್ಕೆ ಎರಡು ಬಾರಿ ಮಾತ್ರ ಇಂತಹ ಅವಕಾಶ ಇರುತ್ತಿತ್ತು,ಅಲ್ಲದೆ 18 ವರ್ಷ ತುಂಬಿರುವವರಿಗೆ ಅವಕಾಶವಿತ್ತು,ಆದರೆ ಈಗ 17 ವರ್ಷ ತುಂಬಿದ ಎಲ್ಲರಿಗೂ ಅಂತಹ ಅವಕಾಶವಿದೆ,ಅದು ವರ್ಷಕ್ಕೆ ನಾಲ್ಕು ಬಾರಿ ಅವಕಾಶ ನೀಡಲಾಗುತ್ತಿದ್ದು,17 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಲ್ಲಿ ತಪ್ಪದೆ ತಮ್ಮ ಹೆಸರು ನೊಂದಾಯಿಸಿಕೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್ ಮಾತನಾಡಿದರು.ಕಾರ್ಯಕ್ರಮದ ವೇದಿಕೆ ಮೇಲೆ ಬಿಇಓ ಮಹೇಶ ಪೂಜಾರಿ,ಸಮಾಜ ಕಲ್ಯಾಣ ಇಲಾಖೆ ಎಡಿ ಸತ್ಯನಾರಾಯಣ ದರಬಾರಿ,ಕ್ಷೇತ್ರ ಸಂಪನ್ಮೂಲ ಅಧಿಕಾರಿ ಪಂಡೀತ ನಿಂಬೂರ,ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ಅಕ್ಷರದಾಸೋಹ ಇಲಾಖೆ ಎಡಿ ಮೌನೇಶ ಕಂಬಾರ,ಪಿಎಸ್ಐ ನಬಿಲಾಲ ಸೇರಿದಂತೆ ಇತರಾ ಅಧಿಕಾರಿಗಳು ಹಾಗೂ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.