ಶಹಾಬಾದ: ಕಾನೂನಿನ ಜ್ಞಾನ ಪಡೆದುಕೊಂಡರೇ ಪ್ರತಿಯೊಬ್ಬರಿಗೂ ಲಾಭಯಿದೆ ಆದರೆ ನಷ್ಟವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಕಲಬುರಗಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಹಾಗೂ ಕಲಬುರಗಿಯ ಜಿಲ್ಲಾ ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಕೃಷ್ಣಾಜಿರಾವ.ಬಿ.ಪಾಟೀಲ ಹೇಳಿದರು.
ಅವರು ರವಿವಾರ ನಗರದ ತಾಪಂ ಆವರಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು,ಜಿಲ್ಲಾ ಕಾನೂನು ಸೇವಾ ಸಮಿತಿ ಕಲಬುರಗಿ,ತಾಲೂಕಾ ಸೇವಾ ಸಮಿತಿ ಚಿತ್ತಾಪೂರ,ನ್ಯಾವಾದಿಗಳ ಸಂಘ, ಕಂದಾಯ, ತಾಪಂ,ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಹಕ್ ಹಮಾರಾ ಭೀ ತೋ ಹೈ 75 ರ ಅಭಿಯಾನದ ಸಮಾರೋಪ ಸಮಾರಂಭದ ಕಾನೂನು –ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನಿನ ಜ್ಞಾನವಿಲ್ಲದಿರುವುದರಿಂದ ಇಂದು ನ್ಯಾಯಾಲಯದಲ್ಲಿ ವ್ಯಾಜ್ಯಗಳ ಸಂಖ್ಯೆ ಹೆಚ್ಚುತ್ತಿವೆ.ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಡಿ, ಹೊಡೆದಾಡಿ ನ್ಯಾಯಾಲಯಕ್ಕೆ ಬಂದು ಹಣವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ.ದ್ವೇಷ ಮಾಡುವುದರಿಂದ ಏನು ಸಾಧನೆ ಮಾಡುವುದಕ್ಕೆ ಆಗೋದಿಲ್ಲ.ಅದರ ಬದಲಾಗಿ ಯಾವುದು ಸರಿ-ತಪ್ಪು ಎಂದು ತಿಳಿದು, ಕಾನೂನಿನ ಪಾಲನೆ ಮಾಡಿದರೆ ತೊಂದರೆಗಳು ಕಡಿಮೆ ಆಗುತ್ತವೆ ಎಂದರು.12ನೇ ಶತಮಾನದಲ್ಲಿಯೇ ಬಸವಣ್ಣನವರು ಕಳಬೇಡ,ಕೊಲಬೇಡ, ಹುಸಿಯ ನುಡಿಯಲು ಎಂಬ ಸಪ್ತ ಸೂತ್ರದ ವಚನಗಳಲ್ಲಿ ಕಾನೂನನ್ನೇ ತಿಳಿಸಿಕೊಟ್ಟಿದ್ದಾರೆ.ಅದರ ಪಾಲನೆ ಮಾಡುವುದು ನಮ್ಮ ಕರ್ತವ್ಯ ಎಂದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧಿಶ ಹಾಗೂಕಲಬುರಗಿ ಜಿಲ್ಲಾ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಸುಶಾಂತ.ಎಂ.ಚೌಗಲೆ ಮಾತನಾಡಿ, ಯಾವುದು ಸರಿ-ತಪ್ಪು ಎಂದು ತಿಳಿದುಕೊಳ್ಳುವುದೇ ಕಾನೂನು. ಇತ್ತಿಚ್ಚಿಗೆ ಜಿಲ್ಲೆಯ ಆಳಂದ ಹಾಗೂ ಚಿಂಚೋಳಿ ಮಹಿಳೆಯ ಮೇಲೆ ಅತ್ಯಾಚಾರ(ಪೋಸ್ಕೋ ಪ್ರಕರಣಗಳು) ಹೆಚ್ಚುತ್ತಿವೆ.ಇದೊಂದು ಹೇಯ ಕೃತ್ಯ.ಇದಕ್ಕೆ ಶಿಕ್ಷೆ ನೀಡಿದರೆ ಮುಕ್ತಾಯವಾಗುವುದಿಲ್ಲ.ಜನರು ಇಂತಹ ಸನ್ನಿವೇಶಗಳು ಕಂಡು ಬಂದರೆ ಚಿವುಟುವ ಕೆಲಸ ಮಾಡಬೇಕು. ಸಾರ್ವಜನಿಕರು ಇಂತಹ ಪ್ರಕರಣಗಳು ಆಗದಂತೆ ಪಣತೋಡಬೇಕೆಂದು ಹೇಳಿದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧಿಶ ಹಾಗೂ ಚಿತ್ತಾಪೂರ ತಾಲೂಕಾ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಸಂತೋಷ ಪಲ್ಲೇದ್ ಮಾತನಾಡಿ, ಪ್ರತಿಯೊಬ್ಬರೂ ಅರಿತು ನಡೆದರೆ ತೊಂದರೆಯಾಗುವುದಿಲ್ಲ.ಸಣ್ಣ ಪುಟ್ಟ ವಿಷಯಕ್ಕೆ ಗಲಾಟೆ ಬಾಯಿ ಮಾತಿನಿಂದ ಹೊಡೆದಾಟಕ್ಕೆ ಇಳಿದು ಕೊನೆಗೆ ನ್ಯಾಲಯಕ್ಕೆ ಬರುತ್ತಾರೆ.ಗೊತ್ತಿಲ್ಲದೇ ಹಾಗೂ ಗೊತ್ತಿದ್ದು ಜಗಳವಾಡುತ್ತಾರೆ.ಅದರ ಬದಲಿಗೆ ರಾಜೀಸಂಧಾನ ಮಾಡಿಕೊಂಡರೇ ಯಾರಿಗೂ ತೊಂದರೆಯಾಗುವುದಿಲ್ಲ ಎಂದರು.
ನಗರದ ಸಿವಿಲ್ ನ್ಯಾಧೀಶರಾದ ಮಲ್ಲೇಶಿ ಪರಶುರಾಮ ಮೋಹಿತೆ, ಅಧ್ಯಕ್ಷತೆ ವಹಿಸಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ, ನ್ಯಾಯವಾದಿ ರವೀಂದ್ರ ಕಟ್ಟಿಮನಿ ಮಾತನಾಡಿದರು. ತಹಸೀಲ್ದಾರ ಸುರೇಶ ವರ್ಮಾ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್.ಶಿಂಧೆ, ಪಿಐ ರಾಘವೇಂದ್ರ.ಎಸ್.ಹೆಚ್,ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ,ಸಹಾಯಕ ಸರಕಾರಿ ಅಭಿಯೋಜಕರಾದ ಸುನೀತಾ.ಎಸ್.ಗುಟ್ಟು ವೇದಿಕೆಯ ಮೇಲಿದ್ದರು.
ಈರಪ್ಪ ಎಸ್.ಬಮ್ಮನಳ್ಳಿ ಸ್ವಾಗತಿಸಿದರು, ನ್ಯಾಯವಾದಿ ರಘುವೀರಸಿಂಗ ಠಾಕೂರ ನಿರೂಪಿಸಿ, ವಂದಿಸಿದರು.