ಶಹಾಬಾದ: ನಾಡಿನ ಪ್ರಮುಖ ಹಬ್ಬ ಹಾಗೂ ರೈತನ ಸಂತಸದ ಸಮಯವನ್ನು ಎಳ್ಳು ಅಮಾವಾಸ್ಯೆಯಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ ಉತ್ತರ ಕರ್ನಾಟಕದ ಹಬ್ಬವಾದ ಎಳ್ಳ ಅಮಾವಾಸ್ಯೆಯನ್ನು ತಾಲ್ಲೂಕಿನಾದ್ಯಂತ ಶನಿವಾರ ಸಡಗರ ಸಂಭ್ರಮದಿಂದ ಎಲ್ಲೆಡೆ ಭೂದೇವಿಗೆ ಚರಗ ಚಲ್ಲುವ ಮೂಲಕ ಆಚರಿಸಲಾಯಿತು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಸಡಗರ ಸಂಭ್ರಮದಿಂದ ಹಬ್ಬದ ಆಚರಣೆಯಲ್ಲಿ ತೊಡಗಿರುವುದು ಕಂಡು ಬಂದಿತು. ಮನೆ ಸದಸ್ಯರು ನೆಂಟರಿಷ್ಟರು, ಸ್ನೇಹ ಸಂಬಂಧಿಗಳನ್ನು ಆಹ್ವಾನಿಸಿ ವಿಶೇಷ ಖಾದ್ಯಗಳನ್ನು ತಯಾರಿಸಿ ಜಮೀನುಗಳಿಗೆ ತೆರಳಿದರು.ಹೊಲದಲ್ಲಿರುವ ಪಾಂಡವರಿಗೆ ಪೂಜೆ ಸಲ್ಲಿಸಿ, ಭೂತಾಯಿಗೆ ಚರಗ ಚೆಲ್ಲಿದರು.
ವಿಶೇಷವಾಗಿ ತಯಾರಿಸಿದ ವಿವಿಧ ಬಗೆಯ ಖಾದ್ಯಗಳನ್ನು ಭಜ್ಜಿ, ಪುಂಡೆಪಲ್ಲ್ಯಾ, ರೊಟ್ಟಿ, ಜೋಳದ ಅನ್ನ, ಹುಗ್ಗಿ, ಅಂಬಲಿ, ಸಜ್ಜೆ ಗಡುಬು, ಹೋಳಿಗೆಯನ್ನು ಎಲ್ಲರೂ ಒಂದಾಗಿ ಕೂತು ಸ್ನೇಹ ಸಂಬಂಧಿಗಳೊಂದಿಗೆ ಊರಿನ ಹೊಲಗಳಿಗೆ ಹಾಗೂ ಪಟ್ಟಣದ ಹೊರ ವಲಯದಲ್ಲಿನ ಸಾಯಿ ಮಂದಿರಕ್ಕೆ ಸಾಮೂಹಿಕವಾಗಿ ತೆರಳಿ, ಗ್ರಾಮೀಣ ಶೈಲಿಯ ಸವಿರುಚಿಯ ಊಟ ಸವಿದು ಸಂಭ್ರಮಿಸಿದರು.