ವಿಜಯಪುರ: ವಿಜಯಪುರ ಜಿಲ್ಲೆಯ ಶ್ರಮಿಕ ಮಹಿಳೆಯರ ಜಿಲ್ಲಾ ಸಮಾವೇಶ ಜ. 22 ರಂದು ಇಂಡಿ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆಯಲಿದೆ ಎಂದು ವಲಸೆ ಮಹಿಳಾ ಕಾರ್ಮಿಕರ ಒಕ್ಕೂಟ ಮತ್ತು ಅಭ್ಯುದಯ ಪೌಂಡೇಷನ್ ಸದಸ್ಯೆ ಡಾ. ಭುವನೇಶ್ವರಿ ಕಾಂಬಳೆ ತಿಳಿಸಿದರು.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಿಳೆಯರಲ್ಲಿ ಎಲ್ಲಾ ಸಾಮರ್ಥ್ಯ ಇದ್ದಾಗಲೂ ಭಾರತೀಯ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರನ್ನು ನಿರಂತರವಾಗಿ ಶೋಷಣೆ ಮಾಡುತ್ತಲೇ ಮುಖ್ಯವಾಹಿನಿಯಿಂದ ಅಂಚಿಗೆ ತಳ್ಳಲಾಗಿದೆ. ಹಾಗಾಗ, ಈಗ ಲಿಂಗ, ಜಾತಿ, ಧರ್ಮವನ್ನು ಮೀರಿದ ಸಮ ಸಮಾಜ ಕಟ್ಟುವ ಆಶಯದೊಂದಿಗೆ ವಲಸೆ ಮಹಿಳಾ ಕಾರ್ಮಿಕರ ಒಕ್ಕೂಟ, ಅಭ್ಯುದಯ ಫೌಂಡೇಶನ್ ಮೈಸೂರು ಹಾಗೂ ರೂಪಾಂತರ ವೇದಿಕೆ ಬೆಂಗಳೂರು ಇವರ ಸಹಯೋಗದಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಮಾವೇಶವನ್ನು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಸಿಂಧೆ ಉದ್ಘಾಟಿಸಲಿದ್ದಾರೆ. ಮನರೇಗಾ ಮತ್ತು ಮಾನವ ಹಕ್ಕುಗಳು ಹಾಗೂ ಸಮುದಾಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕುರಿತು ಮಹಿಳಾ ಜಾಗೃತಿ ವೇದಿಕೆಯ ಶಾರದಾ ಗೋಪಾಲ, ಡಾ. ಸುರೇಖಾ ರಾಠೋಡ, ಡಾ. ಸುಕನ್ಯಾ ಹಾವನೂರ, ಸುವರ್ಣಾ ಕುಠಾಳೆ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಇಂಡಿ ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ, ಬಬಲಾದ ಗ್ರಾ.ಪಂ. ಅಧ್ಯಕ್ಷೆ ಸುನಂದಾ ಬಿರಾದಾರ, ಉಪಾಧ್ಯಕ್ಷ ಸಿದರಾಯಗೌಡ ಬಿರಾದಾರ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಿದರಾಯ ಬಿರಾದಾರ ಸೇರಿದಂತೆ ಗ್ರಾ.ಪಂನ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಹಾವಿನಾಳ, ಗೋಡಿಹಾಳ, ಸಾವಳಸಂಗ, ಕೂಡಗಿ, ಭೈರುಣಗಿ, ಹಳಗುಣಕಿ, ಹೋರ್ತಿ ಹಾಗೂ ಸ್ಥಳೀಯ ಅನೇಕ ವಲಸೆ ಮಹಿಳಾ ಕಾರ್ಮಿಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಒಕ್ಕೂಟದ ಡಾ. ಭುವನೇಶ್ವರಿ ಕಾಂಬಳೆ ತಿಳಿಸಿದರು.