ಕಲಬುರಗಿ: ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ನಗರದ ಅನನ್ಯ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಕಾಲೇಜಿನ ಅಧ್ಯಕ್ಷೆ ಸುಷ್ಮಾವತಿ ಎಸ್. ಹೂನಗೇಜಿ ಮಾತನಾಡುತ್ತಾ 12 ನೇ ಶತಮಾನದ ವಚನಕಾರ ಬಸವಾದಿ ಶಿವಶರಣರ ಮಹಾಕ್ರಾಂತಿಯಲ್ಲಿ ಹೊರಹೊಮ್ಮಿದ ತನ್ನ ದಿಟ್ಟ ನಡೆ ನುಡಿಯಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ ಅಪರೂಪದ ಶರಣ ಶ್ರೀ ಅಂಬಿಗರ ಚೌಡಯ್ಯನವರು ನಿಷ್ಠುರ ವಚನಗಳ ಮೂಲಕ ಶಿವಶರಣರ ರಿಂದ ಲೇವೀರಗಣಾಚಾರಿ ಎಂದು ಕರೆಯಿಸಿಕೊಂಡವರು ಆ ಮಹಾಪುರುಷರ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಪುಣ್ಯದ ಫಲವಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಶರಣು ಬಿ ಹೊನ್ನಗೆಜ್ಜಿ ಮಾತನಾಡಿ ಚೌಡಯ್ಯನವರ ಕಾಯಕದ ಮಹತ್ವತೆಯನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕನ್ನಡ ಉಪನ್ಯಾಸಕಿ ಡಾ. ಸರಿತಾ ಕರಿಗುಡ್ಡ ಅವರು ಮಾತನಾಡಿ ಅಂಬಿಗರ ಚೌಡಯ್ಯನವರ ವಚನಗಳ ವಸ್ತು, ಶೈಲಿ,ಭಾಷೆ ಮತ್ತು ಕೆಚ್ಚೆದೆಯ ನೇರ, ನ್ಯಾಯ, ನಿಷ್ಠುರವಾದ ವಚನಗಳನ್ನು ವಿಶ್ಲೇಷಿಸಿದರು.
ಚೌಡಯ್ಯ ಅವರ ಕಾಯಕ, ಕಸುಬು ಕುರಿತು ಅವರು ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟ ಹಾಕುವ ಅಂಬಿಗ ಮಾತ್ರವಲ್ಲ ಭವಸಾಗರದಲ್ಲಿ, ಹುಟ್ಟಹಾಕುವ ಕೌಶಲವುಳ್ಳವರು ಎಂಬುದಾಗಿ ವಿದ್ಯಾರ್ಥಿಗಳಿಗೆ ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಆಶಾರಾಣಿ ವಿ. ಕಲಕೋರಿ, ಗೌರಿ ಬೇಟಗೇರಿ, ರಾಜೇಶ್ವರಿ ಕಿರಣಗಿ, ಡಾ. ಸರಿತಾ ಕರಿಗುಡ್ಡ, ಶಿಲ್ಪಾ ಲಿಂಗದ, ಮೇಘಾ ಪಾಟೀಲ, ಶ್ವೇತಾ, ಬೋಧಕೇತರ ಸಿಬ್ಬಂದಿ ಪೂರ್ಣಿಮಾ ಸಾಳುಂಕೆ, ಮತ್ತು ಸುಜಾತಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.