ಬೆಂಗಳೂರು: ಯುವಬಲ ಜಾಗೃತಿ ಪರಿಷದ್ ವತಿಯಿಂದ ಮಾ. 15ರಂದು ‘ಜೈ ಜವಾನ್ ಜೈ ಕಿಸಾನ್ ಸನ್ಮಾನ ಪ್ರಶಸ್ತಿ – 2023’ ಸಮಾರಂಭ ಆಯೋಜಿಸಲಾಗಿದೆ.
ನಗರದ ಜೆ.ಸಿ.ರಸ್ತೆಯ ಸರ್. ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಸಂಜೆ 4 ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ರೈತರು ಹಾಗೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ 60 ಮಂದಿಗೆ ‘ಜೈ ಜವಾನ್ ಜೈ ಕಿಸಾನ್ ಸನ್ಮಾನ ಪ್ರಶಸ್ತಿ – 2023’ಪ್ರದಾನ ಮಾಡಿ ಗೌರವಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಪ್ರಾಚೀಗೌಡ ತಿಳಿಸಿದ್ದಾರೆ.
ಸಮಾರಂಭದಲ್ಲಿ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಗೌರಿಗದ್ದೆಯ ದತ್ತ ಆಶ್ರಮದ ಅವಧೂತ ಶ್ರೀ ವಿನಯ ಗುರೂಜಿ, ವಿಧಾನಪರಿಷತ್ ಅಧ್ಯಕ್ಷ ಬಸವರಾಜ್ ಹೊರಟ್ಟಿ, ಸಚಿವರಾದ ಮುರುಗೇಶ್ ಆರ್. ನಿರಾಣಿ, ಡಾ. ಕೆ. ಸುಧಾಕರ್, ಡಾ. ನಾರಾಯಣಗೌಡ, ಶಾಸಕ ರಾಮಲಿಂಗ ರೆಡ್ಡಿ ಮೊದಲಾದವರು ಭಾಗವಹಿಸಲಿದ್ದಾರೆ.
ಶಾಸಕ ದೊಡ್ಡಗೌಡ್ರು ಮಹಾಂತೇಶ್ ಬಸವಂತರಾಯ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ, ಭಕುನಿ ಮೇಜರ್ ಜನರಲ್ ವಿ.ಪಿ.ಎಸ್., ನಟ ಆರ್ಯನ್ ಸಂತೋμï, ಗ್ರಂಥಾಲಯ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ, ಬಿಬಿಎಂಪಿ ಅಪಿರೆನ್ಸ್ ಕಮಿಟಿ ಮಾಜಿ ಅಧ್ಯಕ್ಷ ಬಿ.ಮೋಹನ್, ನಿರ್ಮಾಪಕ ಕೆ.ಆರ್. ಕೃಷ್ಣ ಇತರರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದಿದ್ದಾರೆ.
ಯುವಬಲ ಜಾಗೃತಿ ಪರಿಷದ್ ಸ್ಥಾಪನೆಯಾಗಿ ಐದು ವರ್ಷಗಳಾಗಿದ್ದು, ಇದೇ ಮೊದಲ ಬಾರಿಗೆ ಕೃಷಿ ಹಾಗೂ ಸೇನೆಯಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ‘ಜೈ ಜವಾನ್ ಜೈ ಕಿಸಾನ್ ಸನ್ಮಾನ ಪ್ರಶಸ್ತಿ – 2023’ನೀಡಲಾಗುತ್ತಿದೆ.
ಸಂಸ್ಥೆಯ ಮೂಲಕ ಅಧ್ಯಕ್ಷೆ ಪ್ರಾಚೀಗೌಡ, ಕಳೆದ ಐದು ವರ್ಷಗಳಿಂದ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜಿಸಿ ವಿಶ್ವ ದಾಖಲೆ ನಿರ್ಮಿಸಿದೆ. ಏಷಿಯನ್ ಎಜುಕೇಷನ್ ಸಮಿಟ್ ಆಯೋಜನೆ, ಕೋವಿಡ್ ಸಂದರ್ಭದಲ್ಲಿ 5 ಸಾವಿರಕ್ಕೂ ಹೆಚ್ಚು ಬಡವರಿಗೆ ಆಹಾರ ಮತ್ತು ಔಷಧೀಯ ಕಿಟ್ ವಿತರಣೆ ಮಾಡಿದ್ದಾರೆ. ಇದೀಗ ಯುವಜನರನ್ನು ವ್ಯಸನಮುಕ್ತರಾಗಿಸಲು ಕರ್ನಾಟಕ ವ್ಯಸನ ಮುಕ್ತ ಯುವಕರ ಅಭಿಯಾನ ಆರಂಭಿಸಿ ಶಾಲಾ ಕಾಲೇಗಳಿಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.