-
ಭೂಸಂತ್ರಸ್ತರಿಗೆ 18 ಲಕ್ಷ ಪರಿಹಾರ, ಖಾಯಂ ನೌಕರಿ ನೀಡಲು ಆಗ್ರಹ
ಕಲಬುರಗಿ: ತಾಲೂಕಿನ ಫಿರೋಜಾಬಾದ್, ಹೊನ್ನಕಿರಣಗಿ ಮತ್ತು ನದಿಸಿಣ್ಣೂರ ಗ್ರಾಮಗಳಲ್ಲಿ ಉದ್ದೇಶಿತ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಭೂಮಿ ನೀಡಿದ ರೈತರಿಗೆ ಹೆಚ್ಚುವರಿಯಾಗಿ ರೂ. 18 ಲಕ್ಷ ಪರಿಹಾರ ಹಾಗೂ ಕುಟುಂಬಕ್ಕೊಂದು ಖಾಯಂ ನೌಕರಿ ನೀಡುವ ಬಗ್ಗೆ ಲಿಖಿತ ಭರವಸೆ ನೀಡಬೇಕು ಎಂದು ಆಗ್ರಹಿಸಿ ಎಪಿಎಂಸಿ ಮಾಜಿ ಸದಸ್ಯ ಹಾಗೂ ನ್ಯಾಯವಾದಿ ಮಶಾಖ ಪಟೇಲ್ ನೇತೃತ್ವದಲ್ಲಿ ಸೋಮವಾರ ಅನೇಕ ರೈತರು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕಳೆದ 2009-10 ನೇ ಸಾಲಿನಲ್ಲಿ ಉದ್ದೇಶಿತ ಕಲ್ಲಿದ್ದಲ್ಲು ಶಾಖೋತ್ಪನ್ನ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಫಲವತ್ತಾದ ಭೂಮಿ ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ರಾಜ್ಯದಲ್ಲಿ ವಿದ್ಯುತ್ ಕೊರತೆ ನೀಗಿಸಲು ರೈತರು ಸಹ ಸರ್ಕಾರದ ಕೈಜೋಡಿಸಿ ಭೂಮಿ ನೀಡಬೇಕಾಯಿತು. ಆದರೆ ಇದುವರೆಗೆ ಆ ಕಲ್ಲಿದ್ದಲ್ಲು ವಿದ್ಯುತ್ ಸ್ಥಾವರ ಸ್ಥಾಪಿಸದೆ, ಅದೇ ಜಮೀನಿನಲ್ಲಿ ಮೆಗಾ ಜವಳಿ ಪಾರ್ಕ್ ಮಾಡಲಾಗುತ್ತಿದೆ.
ಈಗಾಗಲೇ ಪಹಾಣಿ ಪತ್ರಿಕೆಯಲ್ಲಿ ವಿದ್ಯುತ್ ಸ್ಥಾವರ (ಥರ್ಮಲ್ ಫ್ಲಾಂಟ್) ಸಲುವಾಗಿ ಭೂಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ ನಮೂದಾಗಿದೆ. ಭೂಸ್ವಾಧೀನ ಕಾಯ್ದೆ 2015ರ ಪ್ರಕಾರ ಯಾವ ಉದ್ದೇಶಕ್ಕಾಗಿ ಜಮೀನು ಭೂಸ್ವಾಧೀನ ಪಡಸಿಕೊಳ್ಳಲಾಗಿದಯೇ ಅದೇ ಉದ್ದೇಶಕ್ಕಾಗಿ ಐದು ವರ್ಷದೊಳಗೆ ಬಳಸಿಕೊಳ್ಳಬೇಕು ಎಂಬ ನಿಯಮವಿದೆ.
ಒಂದು ವೇಳೆ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮೆಗಾ ಜವಳಿ ಪಾರ್ಕ್ ಶಂಕುಸ್ಥಾಪನೆಗೆ ವಿರೋಧಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನೆ ನೇತೃತ್ವವಹಿಸಿದ ನ್ಯಾಯವಾದಿ ಮಶಾಖ ಪಟೇಲ್ ಎಚ್ಚರಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಡಾ. ಉಮೇಶ ಜಾಧವ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.
ಫಿರೋಜಾಬಾದ್ನ ಪ್ರಮುಖರಾದ ಅಣವೀರಪ್ಪ ಶಿರೂರ್, ಹೊನ್ನಕಿರಣಿಯ ಲೋಹಿತ ಕೋಣಿನ್, ನದಿಸಿಣ್ಣೂರನ ಧರ್ಮರಾವ್ ಶೆಟ್ಟಿ, ರಹಿಮಾನ್ ಪೊಲೀಸ್ ಪಾಟೀಲ್, ಮಲ್ಲಿಕಾರ್ಜುನ ಧೂಳಬಾ, ಅಂತಪ್ಪ ಹಿರಣ್ಣಿ, ರೇವಪ್ಪ ಕೌಲಗಿ, ಶಮಶೀರ್ ಮತ್ತಿತರರಿದ್ದರು.