ಕಲಬುರಗಿ: ಹಿರಿಯ ಸಾಹಿತಿ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು 75 ವರ್ಷ ಪೂರೈಸಿದ ಪ್ರಯುಕ್ತ ಸಾತ್ವಿಕ ಅಭಿನಂದನ ಸಂಪುಟ ಹಾಗೂ ಐದು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಜೂ.11ರಂದು ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬೆಳಗ್ಗೆ 10.30ಕ್ಕೆ ಜರುಗಲಿದೆ ಎಂದು ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಡಾ. ಸುಭಾಷ ಎನ್. ಕಮಲಾಪುರೆ ತಿಳಿಸಿದರು.
ಹಾರಕೂಡ ಹಿರೇಮಠ ಸಂಸ್ಥಾನದ ಡಾ. ಚನ್ನವೀರ ಶಿವಾಚಾರ್ಯರು ಗ್ರಂಥ ಲೋಕಾರ್ಪಣೆ ಮಾಡಲಿದ್ದು, ಚಿಂಚನಸೂರ ಕಲ್ಮಠದ ಸಿದ್ಧಮಲ್ಲ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಶರಣಬಸವೇಶ್ವರ ಸಂಸ್ಥಾನದ ಚೇರ್ ಪರ್ಸನ್ ಮಾತೋಶ್ರೀ ದಾಕ್ಷಾಯಣಿ ಅವ್ವ ನೇತೃತ್ವ ವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಸಮಾರಂಭ ಉದ್ಘಾಟಿಸಲಿದ್ದು, ರಾಜ್ಯಸಭೆ ಮಾಜಿ ಸದಸ್ಯ ಬಸ್ವರಾಜ ಪಾಟೀಲ ಸೇಡಂ ಅಧ್ಯಕ್ಷತೆ ವಹಿಸಲಿದ್ದಾರೆ. ಮೂರು ಕೃತಿಗಳನ್ನು ಶಾಸಕ ಬಿ.ಆರ್. ಪಾಟೀಲ, ಎರಡು ಕೃತಿಗಳನ್ನು ಶಾಸಕ ಬಸವರಾಜ ಮತ್ತಿಮಡು ಬಿಡುಗಡೆಗೊಳಿಸಲಿದ್ದಾರೆ ಎಂದು ಹೇಳಿದರು.
ಪೆÇ್ರ.ಶಿವರಾಜ ಪಾಟೀಲ ಅಭಿನಂದನ ನುಡಿಗಳನ್ನಾಡಲಿದ್ದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪ್ಪರಾವ ಅಕ್ಕೋಣೆ, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ಡಾ. ಸುಭಾಷ ಕಮಲಾಪುರೆ, ಪ್ರಕಾಶಕ ಬಸವರಾಜ ಕೊನೇಕ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಡಾ. ವಿಜಯಕುಮಾರ ಪರೂತೆ, ಎಸ್.ಎಸ್. ಪಾಟೀಲ, ಡಾ. ಶರಣಬಸವ ವಡ್ಡನಕೇರಿ ಇದ್ದರು.
ಸಾತ್ವಿಕ ಗ್ರಂಥದೊಳಗೆ ಏನಿದೆ?; ಸಾತ್ವಿಕ ಗ್ರಂಥವು 780 ಪುಟಗಳನ್ನು ಒಳಗೊಂಡಿದ್ದು, ವ್ಯಕ್ತಿ ಸಂಪದ, ಕೃತಿ ಸಂಪದ, ಸಾಹಿತ್ಯ ಸಂಪದ, ಸಂಕೀರ್ಣ ಸಂಪದ ಹಾಗೂ ಚಿತ್ರ ಸಂಪದ ಎಂಬ ಐದು ವಿಭಾಗಗಳಿದ್ದು, ಗ್ರಂಥದ ಮುಖಬೆಲೆ ಸಾವಿರ ರೂ. ಆಗಿದ್ದು, ಕಶೆಟ್ಟಿಯವರ ವ್ಯಕ್ತಿ ಚಿತ್ರದ ಜೊತೆಗೆ ಅವರ 32 ಕೃತಿಗಳ ವಿಮರ್ಶೆ, ವಚನ, ದಾಸ, ತತ್ವಪದ, ಕಥೆ, ಕಾದಂಬರಿ, ನಾಟಕ, ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಈ ಕೃತಿ ಒಳಗೊಂಡಿದೆ ಎಂದು ಗ್ರಂಥದ ಸಂಪಾದಕ ಡಾ. ವಿಜಯಕುಮಾರ ಪರೂತೆ ತಿಳಿಸಿದರು.