ಕಲಬುರಗಿ: ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿ ಮಾಡಿ, ಪ್ರತಿಯೊಂದಕ್ಕೂ ಯಾವುದಾದರೂ ಒಂದು ಸರ್ಕಾರಿ ನೌಕರಿ ಬೇಕು ಎಂದು ಹೇಳವ ಪಾಲಕರು ಏಕೆ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತೀರಿ’ ಸರ್ಕಾರಿ ಶಾಲೆ ಬಗ್ಗೆ ಮುಜುಗರ ಬೇಡಾ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ಜಗದೇವ ಕುಂಬಾರ ಹೇಳಿದರು.
ತಾಲೂಕಿನ ಕದ್ದರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಎಲ್.ಎಲ್ಎಲ್ಎಫ್ ಸಂಸ್ಥೆ ಹಮ್ಮಿಕೊಂಡಿದ್ದ ಶಾಲಾ ದಾಖಲಾತಿ ಆಂದೋಲನ ಅಂಗವಾಗಿ ಮಂಗಳವಾರ ನಡೆದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆರು ವರ್ಷದ ಮೇಲ್ಪಟ್ಟ ಹೆಣ್ಣಿರಲಿ, ಗಂಡಿರಲಿ ತಪ್ಪದೇ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ನೋಂದಾಯಿಸಿ ಮಕ್ಕಳ ಶಿಕ್ಷಣ ಕಲಿಕೆಗೆ ಪಾಲಕರು ಸಹಕರಿಸಬೇಕು.
ಶಾಲಾ ಮಕ್ಕಳಿಗಾಗಿ ಉಚಿತ ಸಮವಸ್ತ್ರ, ಹಾಲು, ಪುಸ್ತಕ, ಬಿಸಿಯೂಟ, ಶೂಭಾಗ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದರು.
ಎಎಲ್.ಎಲ್ಎಲ್ಎಫ್ ಸಂಸ್ಥೆಯು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ. ಇಂದು ನಮ್ಮ ಶಾಲೆಯಲ್ಲಿ ನಡೆದ ಈ ದಾಖಲಾತಿ ಆಂದೋಲನ ಸಾಕ್ಷಿಯಾಗಿದೆ ಎಂದು ಹೇಳಿದರು.
ಶಾಲಾ ಮುಖ್ಯಗುರುಗಳಾದ ಚಂದ್ರಕಾಂತ ಐನಾಪೂರ ಮಾತನಾಡಿ ರಜೆ ಕಳೆದಿರುವ ಮಕ್ಕಳು ಶಾಲಾ ಆರಂಭದ ದಿನಗಳಲ್ಲಿ ಶಾಲೆಗೆ ಬರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಎತ್ತಿನಗಾಡಿ ಮೆರವಣಿಗೆ ಮಾಡುವ ಮೂಲಕ ಗ್ರಾಮದಲ್ಲಿ ದಾಖಲಾತಿ ಆಂದೋಲನ ಮತ್ತು ಶಾಲೆಗೆ ಮಕ್ಕಳನ್ನು ಕಳುಹಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಈಶ್ವರ್ ಜೀವಣಗಿ, ದೇವೆಂದ್ರಪ್ಪ ಭಾಗೋಡಿ, ಶ್ರೀಮತಿ ವಿಜಯಲಕ್ಷ್ಮಿ ಮಾಡಬೂಳ, ಎಸ್ಡಿಎಂಸಿ ಅಧ್ಯಕ್ಷ ಶ್ರೀಶೈಲ,ಮುಖ್ಯ ಅತಿಥಿಗಳಾದ ವೆಂಕಟೇಶ್ ರಾವೂರ, ಪ್ರದೀಪ್ ಪೂಜಾರಿ, ಎಎಲ್. ಎಲ್ಎಲ್ಎಫ್ ಸಂಸ್ಥೆಯ ಎಸ್ಆರ್ ಪಿ ರೇಷ್ಮಾ, ಶಿಕ್ಷಕರಾದ ನಾಗಮ್ಮ ಕುಂಬಾರ, ಸಂಪಣ್ಣಗೌಡ, ಸಂಸ್ಥೆಯ ಸಂಪನ್ಮೂಲ ಶಿಕ್ಷಕರಾದ ಸರೀತಾ ಜೀವಣಗಿ, ಹಣಮಂತ ಕುಂಬಾರ, ಗೌತಮಿ, ಮಲ್ಲಮ್ಮ ಮುಡಬೂಳ, ಸುವರ್ಣ, ತಿಪ್ಪಣ್ಣ ಭಾಗೋಡಿ, ಶಿವಲಿಂಗಪ್ಪ, ಗ್ರಾಮದ ಮುಖಂಡರಾದ ಸುಭಾಷ್ ಚಂದ್ರ ಬೆಳಗುಂಪಿ, ಬಸಂತ್ ಗುತ್ತೇದಾರ್, ದಶರಥ್, ಸೇರಿದಂತೆ ಇತರರು ಇದ್ದರು.