ಶಹಾಬಾದ: ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷಯಲ್ಲಿ ಕುಳಿತ ವಿದ್ಯಾರ್ಥಿಗಳಿಗೆ ಹಳೆ ಪಠ್ಯಕ್ರಮದ ಪ್ರಶ್ನೆ ಪತ್ರಿಕೆ ನೀಡಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ಕೊಠಡಿ ಮೇಲ್ವಿಚಾರಕರು ಎಡವಟ್ಟು ಮಾಡಿದ ಘಟನೆ ತಡವಾಗಿ ಬಳಕಿಗೆ ಬಂದಿದೆ.
ಇದು ಜೂನ್ ೨೭ ರಂದು ಭಂಕೂರ ಗ್ರಾಮದ ಬಸವ ಸಮಿತಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಗಣಿತ ಪರೀಕ್ಷೆಯಲ್ಲಿ ಪ್ರಸಕ್ತ ವರ್ಷದ ವಿದ್ಯಾರ್ಥಿಗಳಿಗೆ ಕೊಡಬೇಕಾದ ಪ್ರಶ್ನೆ ಪತ್ರಿಕೆ ನೀಡದೇ, ಹಳೆ ಪಠ್ಯಕ್ರಮದ ಹಳೆ ವಿದ್ಯಾರ್ಥಿಗಳಿಗೆ ನೀಡುವ ಪ್ರಶ್ನೆ ಪತ್ರಿಕೆ ನೀಡಿದ್ದಾರೆ. ಸುಮಾರು ಒಂಬತ್ತು ವಿದ್ಯಾರ್ಥಿಗಳಿಗೆ ಈ ರೀತಿಯ ಹಳೆ ಪ್ರಶ್ನೆ ಪಠ್ಯಕ್ರಮದ ಪ್ರಶ್ನೆ ಪತ್ರಿಕೆ ನೀಡಿದ್ದರಿಂದ ಮಕ್ಕಳಿಗೆ ತಿಳಿಯದೇ ಇರದಿರುವುದರಿಂದ ಅದನ್ನೇ ಬರೆದಿದ್ದಾರೆ. ಪರೀಕ್ಷೆ ಬರೆದ ನಂತರ ಒಬ್ಬ ವಿದ್ಯಾರ್ಥಿ ಪರೀಕ್ಷಾ ಕೇಂದ್ರದ ಅಧೀಕ್ಷಕರಾದ ಸುನಂದಾ ಅವರಿಗೆ ನಮಗೆ ಕೊಡಬೇಕಾದ ಪ್ರಶ್ನೆ ಪತ್ರಿಕೆ ನೀಡದೇ ಹಳೆ ಪ್ರಶ್ನೆ ಪತ್ರಿಕೆ ಬಂದಿದೆ.ಅದನ್ನೇ ನಾವು ಬರೆದಿದ್ದೆವೆ ಎಂದು ತಿಳಿಸಿದ್ದಾರೆ.
ಆದರೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ಸುನಂದಾ ಅವರು ಏನು ಆಗೋದಿಲ್ಲ. ಪಾಸಾಗ್ತಿಯ ಎಂದು ಹೇಳಿ ಕಳಿಸಿದ್ದಾರೆ. ನಂತರ ಕೆಲವು ವಿದ್ಯಾರ್ಥಿಗಳು ಬಸ್ನಲ್ಲಿ ಹೋಗುತ್ತಿರುವಾಗ ಸಹಪಾಠಿಗಳ ಪ್ರಶ್ನೆ ಪತ್ರಿಕೆ ನೋಡಿದಾಗ ಗಾಬರಿಗೊಂಡಿದ್ದಾರೆ. ಬೇರೆ ಬೇರೆ ಪತ್ರಿಕೆ ಹೇಗೆ ಬಂದಿದೆ ಎಂದು ತಿಳಿಯದೇ ತಮ್ಮ ಪಾಲಕರಿಗೆ ತಿಳಿಸಿದ್ದಾರೆ.ಅಲ್ಲದೇ ಒಂದು ದಿನದ ನಂತರ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಕರೆ ಮಾಡಿ ಮೌಖಿಕ ದೂರು ಸಲ್ಲಿಸಿದ್ದಾರೆ.ಅಲ್ಲದೇ ನಮ್ಮ ಮಕ್ಕಳ ಭವಿಷ್ಯದ ಪ್ರಶ್ನೆಯಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು.ನಮ್ಮ ಮಕ್ಕಳ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಸಮಸ್ಯೆ ಬಗೆಹರಿಸದಿದ್ದರೇ ಪರೀಕ್ಷೆ ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಪಾಲಕರು ನೀಡಿದ ದೂರಿನನ್ವಯ, ಕೇಂದ್ರಕ್ಕೆ ಹೋಗಿ ಪರಿಶೀಲಿಸಿದಾಗ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ಕೊಠಡಿ ಮೇಲ್ವಿಚಾರಕರು ಲೋಪ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ಆಯುಕ್ತರಿಗೆ, ಡಿಡಿಪಿಐ ಅವರಿಗೆ ಲೋಪದ ಬಗ್ಗೆ ತಿಳಿಸಿದ್ದು, ಈಬಗ್ಗೆ ಲಿಖಿತ ವರದಿ ಸಲ್ಲಿಸಿದ್ದೆನೆ. – ಶಂಕ್ರಮ್ಮ ಢವಳಗಿ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ತಾಪೂರ.
ವಿಷಯ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ ಪಾಲಕರಿಗೆ ಮನವೊಲಿಸಿ, ಮರುದಿನ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರಿಶೀಲಿಸಿದಾಗ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ಸುನಂದಾ ಹಾಗೂ ಕೊಠಡಿ ಮೇಲ್ವಿಚಾರಕರಾದ ಶಶಿಕಾಂತ, ಪ್ರಶಾಂತ ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಲೋಪ ಕಂಡು ಬಂದಿದೆ. ತಕ್ಷಣವೇ ಪರೀಕ್ಷಾ ಕೇಂದ್ರದ ಅಧೀಕ್ಷಕರಾದ ಸುನಂದಾ ಹಾಗೂ ಇಬ್ಬರು ಕೊಠಡಿ ಮೇಲ್ವಿಚಾರಕರನ್ನು ತೆಗೆದು ಹಾಕಿ, ಮತ್ತೊಬ್ಬರಿಗೆ ನಿಯೋಜಿಸಿದ್ದಾರೆ.
ಮಕ್ಕಳಿಗೆ ಹಳೆಪ್ರಶ್ನೆ ಪತ್ರಿಕೆ ನೀಡಿ ಎಡವಟ್ಟು ಮಾಡಿದವರ ಮೇಲೆ ಕ್ರಮಕೈಗೊಳ್ಳಬೇಕು. ಅಲ್ಲದೇ ಒಂಬತ್ತು ವಿದ್ಯಾರ್ಥಿಗಳ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳಬೇಕು.ಇಲ್ಲದಿದ್ದರೇ ಹೋರಾಟ ಕೈಗೊಳ್ಳಲಾಗುವುದು ಅನಿವಾರ್ಯ. – ಅಶೋಕ ಮ್ಯಾಗೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪ್ರಾಂತ ರೈತ ಸಂಘ ಕಲಬುರಗಿ.
ಅಲ್ಲದೇ ಮಕ್ಕಳ ಭವಿಷ್ಯ ಹಾಳಾಗದಂತೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು. ನೀವು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ ಎಂದು ಪಾಲಕರಿಗೆ ತಿಳಿಸಿ ಸಮಸ್ಯೆಯನ್ನು ಸರಳವಾಗಿ ತಿಳಿಗೊಳಿಸಿದ್ದಾರೆ.