ಸುರಪುರ: ಕಳೆದ ಅಕ್ಟೋಬರ್ 13 ರಂದು ಕಡೂರು ಪೊಲೀಸ್ ತರಬೇತಿ ಕೇಂದ್ರದಿಂದ ಕಾಣೆಯಾಗಿದ್ದ ಇಲ್ಲಿಯ ಪೊಲೀಸ್ ಠಾಣೆಯ ಎಎಸ್ಐ ಶಿವಪ್ಪ ಮಾಲಿ ಪಾಟೀಲ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು,ಅವರ ಸಾವಿಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಠಾಣೆಯ ಪಿಐ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಪೊಲೀಸ್ ಠಾಣೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದರು.
ಸಭೆಯ ಆರಂಭದಲ್ಲಿ ಮೃತ ಶಿವಪ್ಪ ಮಾಲಿ ಪಾಟೀಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮೇಣದ ಬತ್ತಿಯನ್ನು ಬೆಳಗಿ ಪುಷ್ಪಾರ್ಚನೆ ಮಾಡಿ ನಂತರ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಆತ್ಮಕ್ಕೆ ಶಾಂತಿ ಕೋರಿದರು.
ಈ ಸಂದರ್ಭದಲ್ಲಿ ಪಿಐ ಸುನೀಲಕುಮಾರ ಮೂಲಿಮನಿ ಮಾತನಾಡಿ,ಶಿವಪ್ಪ ಮಾಲಿ ಪಾಟೀಲ್ ಅವರು ಠಾಣೆಯಲ್ಲಿ ಒಬ್ಬ ಉತ್ತಮ ಕೆಲಸಗಾರರಾಗಿದ್ದರು,ಅವರ ಸೇವೆ ನಮ್ಮೆಲ್ಲರಿಗೂ ಸದಾಕಾಲ ನೆನಪಲ್ಲಿ ಉಳಿಯಲಿದೆ.ಅವರ ಸಾವು ನಿಜಕ್ಕೂ ನಮಗೆ ತುಂಬಾ ನೋವನ್ನುಂಟು ಮಾಡಿದೆ.ಅವರ ಸಾವು ಹೇಗಾಯಿತು ಎಂಬುದು ತಿಳಿಯಬೇಕಿದೆ.ಇಲ್ಲಿರುವ ಎಲ್ಲ ನಮ್ಮ ಸಿಬ್ಬಂದಿಗಳಿಗೆ ಶಿವಪ್ಪ ಅವರ ಸೇವೆ ಮಾದರಿಯಾಗಿದೆ ಎಂದರು.
ಇ ಸಂದರ್ಭದಲ್ಲಿ ಪಿಎಸ್ಐಗಳಾದ ಕೃಷ್ಣಾ ಸುಬೇದಾರ್,ನಬಿಲಾಲ ಮಕಾಂದಾರ,ಸಿದ್ದಣ್ಣ ಹಾಗೂ ಎಎಸ್ಐ ಸೇರಿ ಎಲ್ಲಾ ಪೊಲೀಸ್ ಪೇದೆಗಳು ಹಾಗೂ ಮಹಿಳಾ ಪೇದೆಗಳು ಭಾಗವಹಿಸಿದ್ದರು.
ಶಿವಪ್ಪ ಮಾಲಿ ಪಾಟೀಲ್ ಅಂತ್ಯ ಸಂಸ್ಕಾರ: ಶನಿವಾರ ಕಡೂರಿನಲ್ಲಿ ನಿಧನರಾಗಿದ್ದ ಸುರಪುರ ಠಾಣೆಯ ಎಎಸ್ಐ ಆಗಿದ್ದ ಶಿವಪ್ಪ ಮಾಲಿ ಫಾಟೀಲ್ ಅವರ ಅಂತ್ಯ ಸಂಸ್ಕಾರವನ್ನು ದೇವದುರ್ಗ ತಾಲೂಕಿನ ಅವರ ಸ್ವಗ್ರಾಮ ಯರಗುಡ್ಡದಲ್ಲಿ ನೆರವೇರಿಸಲಾಯಿತು.
ಸೋಮವಾರ ಬೆಳಿಗ್ಗೆ ನಡೆದ ಅಂತ್ಯ ಸಂಸ್ಕಾರದಲ್ಲಿ ಪಿಐ ಸುನೀಲಕುಮಾರ ಮೂಲಿಮನಿ ಹಾಗೂ ಪಿಎಸ್ಐಗಳು ಮತ್ತು ಎಲ್ಲಾ ಪೊಲೀಸ್ ಪೇದೆಯವರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಮೃತ ದೇಹವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೂ ಇಡಲಾಗಿತ್ತು,ನಂತರ ಸಕಲ ಸರಕಾರಿ ಗೌರವಗಳೊಂದಿಗೆ ಪೊಲೀಸ್ ಇಲಾಖೆಯ ಗೌರವ ವಂದನೆಯೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.