ಕಲಬುರಗಿ: ಪ್ರಕೃತಿ ವಿಕೋಪ ಹಾಗೂ ನೆಟೆರೋಗದಿಂದ ತೊಗರಿ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು, ಬೆಳೆಸಾಲ ಮತ್ತು ಹೈನುಗಾರಿಕೆಗೆ ಮಂಜೂರಾದ ಸಾಲ ಕೂಡ ಡಿಸಿಸಿ ಬ್ಯಾಂಕ್ ನೀಡುತ್ತಿಲ್ಲ. ಹೀಗಾಗಿ ರೈತರಿಗೆ ಸರಳ ರೀತಿಯಲ್ಲಿ ಸಾಲ ಕೊಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.
ಡಿಸಿಸಿ ಬ್ಯಾಂಕ್ನ ರೈತ ವಿರೋಧಿ ನೀತಿಯಿಂದಾಗಿ ರೈತರಿಗೆ ತುಂಬಾ ಅನ್ಯಾಯ ಮಾಡುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರು ತಮ್ಮ ತವರು ಕ್ಷೇಥ್ರ ಸೇಡಂ ಹಾಗೂ ಉಳಿದ ತಾಲ್ಲೂಕುಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಡಿಸಿಸಿ ಬ್ಯಾಂಕ್ನವರು ಅಫೆಕ್ಸ್ ಬ್ಯಾಂಕಿನಲ್ಲಿ ಸಾಲ ತಂದು ಸಾಲ ಬಾಕಿ ಉಳಿಸಿಕೊಂಡಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, ಸಾಲಮನ್ನಾ ಆದ ರೈತರ ಹಣವನ್ನು ಅಫೆಕ್ಸ್ ಬ್ಯಾಂಕಿವರು ನೇರವಾಗಿ ಮುರಿದುಕೊಂಡಿರುವುದರಿಂದ ರೈತರು ಸಾಲದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ರೈತರ ಬದುಕಿಗೆ ಬರೆ ಎಳೆದಂತಾಗಿದೆ ಎಂದು ಅವರು ತಿಳಿಸಿದರು.
ಡಿಸಿಸಿ ಬ್ಯಾಂಕ್ ಮೂಲಕ ವಿಎಸ್ಎಸ್ಎನ್ ಸೋಸೈಟಿಗಳಲ್ಲಿ ರೈತರಿಗೆ ಸಾಲ ಮಂಜೂರು ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದರೂ ರೈತರ ಖಾತೆಗೆ ಹಣ ಜಮೆಯಾಗಿರುವುದಿಲ್ಲ. ಹೀಗಾಗಿ ರಾಜ್ಯಪಾಲರಿಗೆ ಬ್ಯಾಂಕ್ ನ ಈ ನೀತಿಯ ವಿರುದ್ಧ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಾಯಬಣ್ಣ ಗುಡುಬಾ, ದಿಲೀಪಕುಮಾರ, ಮಲ್ಲಿಕಾರ್ಜುನ, ಶಿವಾನಂದ, ರೇವಣಸಿದ್ದಯ್ಯ ಸ್ವಾಮಿ, ದತ್ತಾತ್ರೇಐ, ನಾಗಣ್ಣ, ಶಿವರುದ್ರ, ರುದ್ರಯ್ಯ ಸ್ವಾಮಿ ಕುಡಚಿ ಇತರರಿದ್ದರು.