ಸುರಪುರ: ಕಳೆದ ಏಳು ಚುನಾವಣೆಗಳಲ್ಲಿ ಸ್ಪರ್ಧಿಸಿ ನಾಲ್ಕು ಬಾರಿ ಶಾಸಕರಾಗಿರುವ ನಮ್ಮ ನಾಯಕರಾದ ರಾಜಾ ವೆಂಕಟಪ್ಪ ನಾಯಕ ಅವರಿಗೆ ಈಬಾರಿ ಸಚಿವಸ್ಥಾನ ನೀಡುವಂತೆ ತಾಲೂಕಿನ ಸಮಸ್ತ ದಲಿತ ಮಾದಿಗ ಸಮುದಾಯ ಒತ್ತಾಯಿಸುತ್ತದೆ ಎಂದು ದಲಿತಪರ ಹೋರಾಟಗಾರ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ರಾಜಾ ವೆಂಕಟಪ್ಪ ನಾಯಕರು ಒಬ್ಬ ಹಿರಿಯ ರಾಜಕಾರಣಿ ಅವರು ಪಕ್ಷಕ್ಕಾಗಿ ಅನೇಕ ವರ್ಷಗಳ ಸೇವೆ ಸಲ್ಲಿಸಿದ್ದಾರೆ.ನಾಲ್ಕು ಬಾರಿ ಶಾಸಕರಾಗಿದ್ದಾರೆ,ಆದ್ದರಿಂದ ಅವರಿಗೆ ಈಬಾರಿ ಸಚಿವ ಸ್ಥಾನ ನೀಡಲೆಬೇಕು,ಇದು ನಮ್ಮ ಎಲ್ಲಾ ಮಾದಿಗ ಸಮಾಜದ ಜನರ ಪರವಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು,ಕೆಪಿಸಿಸಿ ಅಧ್ಯಕ್ಷರು,ಶಾಸಕಾಂಗ ಪಕ್ಷದ ನಾಯಕರು ಹಾಗೂ ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಯುವ ಮುಖಂಡ ಬಸವರಾಜ ಮುಷ್ಠಳ್ಳಿ ಡಿ.ಸಿ ಮಾತನಾಡಿ,ರಾಜಾ ವೆಂಕಟಪ್ಪ ನಾಯಕ ಅವರಿಗೆ ಸಚಿವ ಸ್ಥಾನ ಕೊಡುವುದರ ಮೂಲಕ ಅವರ ಸೇವೆಗೆ ಕಾಂಗ್ರೆಸ್ ಪಕ್ಷ ಗೌರವ ನೀಡಬೇಕು ಎಂದು ಒತ್ತಾಯಿಸುತ್ತೇವೆ ಹಾಗೂ ಅದರಂತೆ ನಮ್ಮ ಸಮಾಜದ ಹಿರಿಯ ನಾಯಕರಾಗಿರುವ ಎಚ್.ಆಂಜನೇಯ ಅವರಿಗೆ ವಿಧಾನಪರಿಷತ್ ಸ್ಥಾನ ನೀಡಿ ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ಅಪ್ಪಾರಾವ್ ನಾಯಕ,ಸಂಜೀವಪ್ಪ ಕಟ್ಟಿಮನಿ ಆಲ್ದಾಳ,ದುರ್ಗಪ್ಪ ರುಕ್ಮಾಪುರ ಇದ್ದರು.