ಕಲಬುರಗಿ: ಬೆಂಗಳೂರಿನ ಟೌನ್ ಹಾಲ್ ಸಭಾಂಗಣದಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪನೆಗೆ ಶ್ರಮಿಸಿದ ದ.ಸಂ.ಸ ಕಾರ್ಯಕರ್ತರಿಗೆ ಅಭಿನಂದನ ಸಮಾರಂಭ ಭೀಮ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಡಾ. ಡಿ.ಜಿ. ಸಾಗರ, ಅರ್ಜುನ ಭದ್ರೆ ತಿಳಿಸಿದರು.
ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸ್ಫೂರ್ತಿಧಾಮ ಅಧ್ಯಕ್ಷ ಎಸ್.ಮರಿಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಗೃಹ ಸಚಿವ ಡಾ. ಜಿ.ಪರಮೇಶ್ವರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ. ಎಚ್.ಸಿ. ಮಹಾದೇವಪ್ಪ, ಸತೀಶ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಜಮೀರ್ ಅಹ್ಮದ್ ಖಾನ್, ಶಿವರಾಜ ತಂಗಡಗಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಡಾ.ಡಿ.ಜಿ.ಸಾಗರ ಪ್ರಾಸ್ತಾವಿಕ ಮಾತನಾಡಲಿದ್ದು, ಇಂದೂಧರ ಹೊನ್ನಾಪುರ ಅವರು ಮುನ್ನೋಟದ ಮಾತುಗಳನ್ನಾಡಲಿದ್ದಾರೆ. ಈ ಸಮಾವೇಶದಲ್ಲಿ 2500ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಎಸ್.ಆರ್. ಕೊಲ್ಲೂರ, ಸುರೇಶ ಹಾದಿಮನಿ, ಅರ್ಜುನ ಗೊಬ್ಬೂರ, ಎಸ್.ಪಿ.ಸುಳ್ಳದ, ವಿ.ಸಿ. ವಾಲಿ, ಎಚ್. ಶಂಕರ ಇತರರಿದ್ದರು.
ಬುದ್ಧ, ಬಸವ, ಕನಕ, ಟಿಪ್ಪು ಹಾಗೂ ಅಂಬೇಡ್ಕರ್ ಜನಿಸಿದ ಈ ನಾಡಿನಲ್ಲಿ ಕೋಮುವಾದ ಬೆಳೆಯಕೂಡದು. ಬಿಜೆಪಿ ಸರ್ಕಾರದ ಮನುವಾದ ತಿರಸ್ಕರಿಸಿರುವ ಜನತೆ ಕಾಂಗ್ರೆಸ್ ಸರ್ಕಾರವನ್ನು ಅಸ್ತಿತ್ವಕ್ಕೆ ತರಲಾಗಿದೆ. ಕಾಂಗ್ರೆಸ್ ಸರ್ಕಾರ ಎಲ್ಲರನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. -ಡಿ.ಜಿ.ಸಾಗರ, ಕಲಬುರಗಿ