ವಾಡಿ: ರಾಮಾಯಣದಂತಹ ಶ್ರೇಷ್ಠ ಮಹಾಕಾವ್ಯವನ್ನು ಮನುಕುಲಕ್ಕೆ ಕೊಟ್ಟು ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲಿದ ಮಹರ್ಷಿ ವಾಲ್ಮೀಕಿ ಓರ್ವ ಕೊಲೆಗಡುಕ ದರೋಡೆಕೋರ ಎಂದೆಲ್ಲ ಕಟ್ಟು ಕಥೆಗಳನ್ನು ಸೃಷ್ಠಿಸಿ ಅಪಮಾನಿಸಲಾಗುತ್ತಿದೆ. ಇದು ನಿಲ್ಲದಿದ್ದರೆ ಕೋರ್ಟ್ ಮೊರೆ ಹೋಗುವುದಾಗಿ ಮಹರ್ಷಿ ವಾಲ್ಮೀಕಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಗಪ್ಪ ಸೇದಿಮನಿ ಎಚ್ಚರಿಸಿದರು.
ರವಿವಾರ ಪಟ್ಟಣದ ಇಂದ್ರಾನಗರದ ಭಾರತ ಕ್ವಾರಿ ಬಡಾವಣೆಯಲ್ಲಿ ವಾಲ್ಮೀಕಿ ಮಹಿಳಾ ಸ್ವ-ಸಹಾಯ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಉಪನ್ಯಾಸ ನೀಡಿದರು. ಋಷಿಮುನಿಗಳ ಗುರುಕುಲ ವ್ಯವಸ್ಥೆಯ ಕಾಲ ಘಟ್ಟದಲ್ಲಿ ಮಹರ್ಷಿ ವಾಲ್ಮೀಕಿ ಸುಸಂಸ್ಕøತ ಮನೆತನದಲ್ಲಿ ಜನಿಸಿದ್ದರು.
ಕುಟುಂಬಗಳಲ್ಲಿ ಅಣ್ಣ ತಮ್ಮಂದಿರು, ತಾಯಿ ತಂದೆಯರು, ಬಂದುಗಳು ಅನುಸರಿಸಬೇಕಾದ ಮೌಲ್ಯಗಳು ಯಾವವು ಎಂಬುದನ್ನು ರಾಮಾಯಣ ಮಹಾಕಾವ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ. ಅಂತಹ ಮಹಾನ್ ಋಷಿಯೊಬ್ಬ ಕೊಲೆಗಡುಕನಾಗಿರಲು ಸಾಧ್ಯವಿಲ್ಲ. ನಾರದಮುನಿ ನೀಡಿದ ಉಪದೇಶದಿಂದಲೇ ವಾಲ್ಮೀಕಿ ತಪಸ್ಸು ಮಾಡಿದರು ಎಂಬ ಹಸಿ ಸುಳ್ಳನ್ನು ನಂಬಿಸಿದ ಮೂಲಭೂತವಾದಿಗಳು, ಮಹರ್ಷಿ ವಾಲ್ಮೀಕಿಯ ಇತಿಹಾಸವನ್ನೇ ತಿರುಚಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ನಗರ ಶಕ್ತಿಕೇಂದ್ರ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ವಾಲ್ಮೀಕಿ ಸಮುದಾಯ ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಸಂಘಟನಾತ್ಮಕವಾಗಿಯೂ ಹಿನ್ನಡೆ ಅನುಭವಿಸಿದೆ. ಮಹಿಳೆಯರು ವಿದ್ಯಾವಂತರಾಗದ ಹೊರೆತು ದೇಶದ ಪ್ರಗತಿ ಅಸಾಧ್ಯ. ಆದ್ದರಿಂದ ವಾಲ್ಮೀಕಿ ಸಮಾಜ ಎದುರಿಸುತ್ತಿರುವ ಬಡತನ ಹಾಗೂ ಅನಕ್ಷರತೆಯ ಸಂಕಟ ಕೊನೆಗಾಣಿಸಲು ಬೇಡ ಸಮುದಾಯದ ಪ್ರತಿಯೊಂದು ಮಗು ಶಿಕ್ಷಣ ಪಡೆಯುವಂತಾಗಬೇಕು. ಜ್ಞಾನ ಸಂಪತ್ತು ನಮ್ಮ ಸ್ವತ್ತಾದರೆ ಸಂವಿಧಾನದ ಹಕ್ಕುಗಳು ದಕ್ಕುತ್ತವೆ ಎಂದರು.
ವಾಲ್ಮೀಕಿ ಸಮಾಜದ ಚಿತ್ತಾಪುರ ತಾಲೂಕು ಅಧ್ಯಕ್ಷ ಭೀಮರಾವ ದೊರೆ ಹಾಗೂ ಕಾಂಗ್ರೆಸ್ ಮುಖಂಡ ಸಾಬಣ್ಣ ಮುಸ್ಲಾ ಮಾತನಾಡಿದರು.
ವಾಲ್ಮೀಕಿ ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ಲಕ್ಷ್ಮೀ ಗೊವಿಂದ ದೊರೆ, ವಾಲ್ಮೀಕಿ ಸಮಾಜದ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ ಮಾಲಗತ್ತಿ, ಶಹಾಬಾದ ತಾಲೂಕು ಅಧ್ಯಕ್ಷ ಜಗನ್ನಾಥ ಸುಬೇದಾರ, ಶಿಕ್ಷಕ ಶಂಕ್ರೆಪ್ಪ ಜುಮಲಾಪುರ, ಎಸ್ಸಿ ಮೋರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘದ ಅಧ್ಯಕ್ಷೆ ಸುಮಿತ್ರಾ ಬಿ.ದೊರೆ, ಮುಖಂಡರಾದ ಭೀಮಣ್ಣ ಹವಾಲ್ದಾರ, ಆನಂದ ಇಂಗಳಗಿ, ಬಾಲಮ್ಮ, ಶಾಂತಾಬಾಯಿ, ಭಾಗಣ್ಣ ದೊರೆ, ಶರಣು ಕಪ್ರಿ ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದರು. ಹುಸನಪ್ಪ ಮಗ್ದಂಪುರ ಸ್ವಾಗತಿಸಿದರು. ಸಿದ್ದಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿದರು. ಲಕ್ಷ್ಮೀ ಗೋವಿಂದ ವಂದಿಸಿದರು.