ನಿತಿನ್ ಗುತ್ತೇದಾರ ನಡೆ ಎತ್ತ ಕಡೆ?; ‘ಲೋಕ’ ಚುನಾವಣಾ ಸಮರಕ್ಕೆ ಬಿಜೆಪಿ, ಕಾಂಗ್ರೆಸ್ ರಣತಂತ್ರ!

0
240

ಕಲಬುರಗಿ: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಹೋದರ ಮಾಲಿಕಯ್ಯ ಗುತ್ತೇದಾರಗೆ ಸವಾಲು ಹಾಕಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 50 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ರಾಜ್ಯದ ಗಮನ ಸೆಳೆದಿರುವ ಯುವ ಮುಖಂಡ ನಿತಿನ್ ಗುತ್ತೇದಾರ್ ಅವರನ್ನು ತಮ್ಮ ಕಡೆ ಸೆಳೆಯಲು ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯವರು ರಣತಂತ್ರ ಅವರ ನಡೆಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ 52 ಸಾವಿರ ಮತಗಳನ್ನು ಪಡೆಯುವ ಮೂಲಕ ಸಹೋದರನನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದಿರುವ ಅವರಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್! ವೈಯಕ್ತಿಕವಾಗಿ 20-30 ಸಾವಿರ ಮತದಾರರ ಬೆಂಬಲ ಹೊಂದಿರುವ ನಿತಿನ್ ಗುತ್ತೇದಾರ ನಡೆ ಯಾವ ಕಡೆ ಎನ್ನುವುದು ಇನ್ನೂ ನಿಗೂಢವಾಗಿದೆ.

Contact Your\'s Advertisement; 9902492681

ಒಂದು ಮೂಲಗಳ ಪ್ರಕಾರ ನಿತಿನ್ ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದರೆ, ಇನ್ನೊಂದು ಮೂಲದ ಪ್ರಕಾರ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದುವೇಳೆ ಅವರು ಬಿಜೆಪಿ ಸೇರಿದರೆ ಅವರ ಸಹೋದರ ಮಾಲಿಕಯ್ಯ ಗುತ್ತೇದಾರ ರಾಜಕೀಯ ಭವಿಷ್ಯದ ಮೇಲೆ ತುಂಬಾ ಪರಿಣಾಮ ಬೀರಲಿದೆ. ಅದರಂತೆ ಅವರು ಕಾಂಗ್ರೆಸ್ ಸೇರಿದರೆ ಎಂ.ವೈ. ಪಾಟೀಲ ಹಾಗೂ ಅವರ ಪುತ್ರ ಅರುಣಕುಮಾರ ಪಾಟೀಲ ಅವರ ರಾಜಕೀಯ ಭವಿಷ್ಯದ ಮೇಲೂ ಪ್ರತಿಕೂಲ ಪರಿಣಾಮ ಉಂಟು ಮಾಡಲಿದೆ. ಒಟ್ಟಾರೆಯಾಗಿ ಹೇಳಬೇಕಾದರೆ ನಿತಿನ್ ಗುತ್ತೇದಾರ ಯಾವ ಪಕ್ಷ ಸೇರಿದರೂ ಅಫಜಲಪುರ ಮತಕ್ಷೇತ್ರದ ಮೇಲೆ ತುಂಬಾ ಗಂಭೀರ ಪರಿಣಾಮ ಉಂಟು ಮಾಡುವುದಂತೂ ಸತ್ಯ.

ಹೀಗಾಗಿ ನಿತಿನ್ ಗುತ್ತೇದಾರ ಈಗ ಎರಡೂ ಪಕ್ಷಗಳಿಗೆ ಬೇಕು ಬೆಲ್ಲವಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ಹಾಗೂ ಕಾಂಗ್ರೆಸ್‍ಗೆ ಬಿಸಿ ತುಪ್ಪವಾಗಿ ಕೂಡ ಪರಿಣಮಿಸಿದ್ದಾರೆ. ಆದ್ದರಿಂದ ಎರಡೂ ಪಕ್ಷಗಳ ಮುಖಂಡರು ನಿತಿನ್ ಅವರನ್ನು ತಮ್ಮತ್ತ ಸೆಳೆಯಲು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

ಕಲಬುರಗಿ ಮೀಸಲು ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿನ ರುಚಿ ಉಣಿಸಿದ ಡಾ. ಉಮೇಶ ಜಾಧವ ಅವರು ತಮ್ಮ ಐದು ವರ್ಷದ ಅವಧಿಯಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡದಿರುವುದು ಮತ್ತು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮ ಮತದಾರರ ಮೇಲಾಗಿರುವುದರಿಂದ ನಿತಿನ್ ತಮ್ಮ ಪಕ್ಷಕ್ಕೆ ಬಂದರೆ ಬಿಜೆಪಿ ಗೆಲುವಿಗೆ ತುಂಬಾ ಅನುಕೂಲವಾಗಲಿದೆ ಎಂದು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಇದರಿಂದಾಗಿ ಪಕ್ಷಕ್ಕಾಗಿ ದುಡಿದ ಬಿಜೆಪಿಯ ಹಿರಿಯ ಮುಖಂಡ ಮಾಲಿಕಯ್ಯ ಗುತ್ತೇದಾರ ಮುನಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ಅದೇರೀತಿಯಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಅಫಜಲಪುರ ಕ್ಷೇತ್ರದಲ್ಲಿ 35 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದ ಬಿಜೆಪಿಯನ್ನು ಮಣಿಸಲು ನಿತಿನ್ ಗುತ್ತೇದಾರ ಅವರನ್ನು ತಮ್ಮೆಡೆಗೆ ಸೆಳೆಯಲು ಕಾಂಗ್ರೆಸ್‍ನವರು ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದರಿಂದಾಗಿ ಶಾಸಕ ಎಂ.ವೈ. ಪಾಟೀಲ ಹಾಗೂ ಅವರ ಪುತ್ರ ಅರುಣಕುಮಾರ ಪಾಟೀಲ ಅವರ ರಾಜಕೀಯ ಭವಿಷ್ಯದ ಮೇಲೆ ಕರಿ ನೆರಳು ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮೇಲಿನ ಈ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿ ನಿತಿನ್ ಗುತ್ತೇದಾರ ಅವರನ್ನು ನೆಚ್ಚಿಕೊಂಡಿರುವುದಂತೂ ಸತ್ಯ. ಆದರೆ ಅವರೆತ್ತ ಹೋಗುತ್ತಾರೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.

ವಿಧಾನಸಭೆ ಚುನಾವಣೆ ಸೋತ ಮರುದಿನದಿಂದ ನಾನು ಜನರ ಸೇವೆಯಲ್ಲಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಮತ್ತು ಕಾರ್ಯಕರ್ತರ ಹಿತ ಕಾಪಾಡುವ ಪಕ್ಷಕ್ಕೆ ಬೆಂಬಲಿಸುವ ನಿರ್ಣಯ ಕೈಗೊಳ್ಳಲಾಗುವುದು.
– ನಿತಿನ್ ಗುತ್ತೇದಾರ, ಯುವ ಮುಖಂಡ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here