ಕಲಬುರಗಿ: ಮೇ-7 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಲ್ಲಿ ಎಲ್ಲಾ ನಾಗರಿಕರು ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬ ಆಚರಿಸಿ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷ ರೇವಣಸಿದ್ದಪ್ಪ ಗೌಡರ್ ಅವರು ಹೇಳಿದರು.
ಜೇವರ್ಗಿ ಪಟ್ಟಣದಲ್ಲಿ ತಾಲೂಕ ಸ್ವೀಪ್ ಸಮಿತಿ, ವಿಶೇಷ ಚೇತನರು ಹಾಗೂ ಪುರಸಭೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿರುವ ಮತದಾನ ಜಾಗೃತಿ ರ್ಯಾಲಿಗೆ ಅವರು ಚಾಲನೆ ನೀಡಿ ಮಾತನಾಡಿದರು.
ಆಮಿಷಗಳನ್ನು ಹೊಡೆದುರುಳಿಸಿ ಮತದ ಹಕ್ಕು ಮತ್ತು ಶಕ್ತಿಯನ್ನು ಎತ್ತಿ ಹಿಡಿದು ಮತ ಚಲಾಯಿಸಿ ಎಂದು ತಿಳಿಸಿದ ಅವರು ವಿಶೇಷ ಚೇತನರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದರು.
ವಿಶೇಷ ಚೇತನರು ತ್ರಿಚಕ್ರ ವಾಹನಗಳ ಸಹಕಾರದೊಂದಿಗೆ ಮತದಾನ ಜಾಗೃತಿಯ ಘೋಷ್ಯ ವಾಕ್ಯಗಳು ಕೂಗುತ್ತ, ಇಲ್ಲಿನ ರಿಲಾಯನ್ಸ್ ಪೆಟ್ರೋಲ್ ಬಂಕ್ ನಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಬೈಕ್ ಜಾಥಾ ಮಾಡಿದರು.
ನಂತರ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ದಂಡಾಧಿಕಾರಿಗಳು ಮತದಾನ ಪ್ರತಿಜ್ಞೆ ವಿಧಿ ಬೋಧಿಸಿದರು. ತಹಶಿಲ್ದಾರ ಮಲ್ಲಣ್ಣ ಯಲಗೋಡ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ, ಸಹಾಯಕ ಚುನಾವಣೆ ಅಧಿಕಾರಿ ಕೃಷ್ಣಾ ಸಂತಪುರ, ತಾಲೂಕ ಐಇಸಿ ಸಂಯೋಜಕ ಚಿದಂಬರ ಪಾಟೀಲ, ಎಂ.ಆರ್.ಡಬ್ಲ್ಯು ನಾನಾಗೌಡ ಹಾಗೂ ವಿ.ಆರ್.ಡಬ್ಲ್ಯು ಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಎಲ್ಲಾ ವಿಶೇಷಚೇತನರು ರ್ಯಾಲಿಯಲ್ಲಿ ಭಾಗವಹಿಸಿದ್ದರು.̤