ಶಹಾಬಾದ:ನಿಮ್ಮ ಆಶೀರ್ವಾದ ಇಲ್ಲದಿದ್ದರೆ ಖರ್ಗೆ ಸಾಹೇಬರು ದಿಲ್ಲಿಗೆ ಹೋಗಲು ಆಗುತ್ತಿರಲಿಲ್ಲ, ನಾನು ಶಾಸಕನಾಗಿ, ಸಚಿವನಾಗಿ ಇರುತ್ತಿರಲಿಲ್ಲ. ಹಾಗೆ, ನಿಮ್ಮೆಲ್ಲರ ಆಶೀರ್ವಾದವಿದ್ದರೆ ರಾಧಾಕೃಷ್ಣ ಸಂಸತ್ತಿಗೆ ಹೋಗುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಅವರು ಗುರುವಾರ ಹೊನಗುಂಟಿ ಗ್ರಾಮದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನಿಮ್ಮೆಲ್ಲರ ಆಶೀರ್ವಾದದಿಂದಲೇ ಖರ್ಗೆ ಸಾಹೇಬರು ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371(ಎ) ಕಲಂ ಜಾರಿಗೆ ತರಲು ಶ್ರಮಿಸಿದ್ದಾರೆ ಎಂದ ಸಚಿವರು, ಈ ವಿಶೇಷ ಸೌಲಭ್ಯದಿಂದಾಗಿ ಕಕ ಭಾಗದ ಮೂಲಭೂತ ಸೌಕರ್ಯ ಒದಗಿಸಲು ಪ್ರತಿವರ್ಷ ವಿಶೇಷ ಅನುದಾನ ಸಿಗುತ್ತದೆ. ಇದೇ ಅನುದಾನದಲ್ಲಿ ಇದೂವರೆಗೆ 30,000 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸಿಗುತ್ತದೆ.
ಪರಿಣಾಮವಾಗಿ ಇದೂವರೆಗೆ 2.22 ಲಕ್ಷ ವಿದ್ಯಾರ್ಥಿಗಳು ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟು ಪಡೆದುಕೊಂಡಿದ್ದಾರೆ. ಇದೇ ವರ್ಷ 900 ಸೀಟುಗಳು ಸಿಕ್ಕಿವೆ. ಇದಲ್ಲದೇ 1.10 ಲಕ್ಷ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ. ಈ ಎಲ್ಲ ವಿಶೇಷ ಸೌಲಭ್ಯಗಳು ಎಲ್ಲ ಜಾತಿ ಧರ್ಮದವರಿಗೆ ಸಿಗುತ್ತದೆ. ಸರ್ಕಾರಗಳು ಬದಲಾದರೂ ಕೂಡಾ ಈ ಸೌಲಭ್ಯಗಳು ಬದಲಾಗುವುದಿಲ್ಲ ಎಂದರು.
ಸರ್ಕಾರದ ಐದು ಗ್ಯಾರಂಟಿಗಳಿಗೆ ಬಿಜೆಪಿ ಅಪಸ್ವರ ಎತ್ತಿದ್ದು ಈ ಎಲ್ಲ ಯೋಜನೆಗಳಿಂದಾಗಿ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಜೆಡಿಎಸ್ ನಾಯಕರು ಹೇಳುತ್ತಾರೆ. ಮಹಿಳೆಯರು ಯಾರೂ ದಾರಿ ತಪ್ಪಿಲ್ಲ ಬದಲಿಗೆ ಅವರ ಮಕ್ಕಳೇ ದಾರಿ ತಪ್ಪಿದ್ದಾರೆ ಎಂದು ಟಾಂಗ್ ಕೊಟ್ಟರು.
ಈ ಹಿಂದಿನ ಮೋದಿ ಅವರ ಭರವಸೆಗಳನ್ನು ನೆನಪಿಸಿಕೊಂಡ ಖರ್ಗೆ ಎರಡು ಕೋಟಿ ಉದ್ಯೋಗ, ರೈತರ ಆದಾಯ ದ್ವಿಗುಣ, ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಎಲ್ಲ ಗ್ಯಾರಂಟಿಗಳು ಏನಾದವು? ಯಾವ ಗ್ಯಾರಂಟಿಗಳನ್ನು ಈಡೇರಿಸಿಲ್ಲ. ಆದರೂ ಈಗ ಮತ್ತೆ ಮೋದಿ ಹೊಸ ಗ್ಯಾರಂಟಿಗಳೊಂದಿಗೆ ಬರುತ್ತಿದ್ದಾರೆ. ಅವರ ಗ್ಯಾರಂಟಿಗಳಿಗೆ ಯಾವುದೇ ವಾರೆಂಟಿ ಇರುವುದಿಲ್ಲ. ಕಳೆದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರ ನಿರ್ಲಕ್ಷಿಸಿರುವ ಜಾಧವ್ ಮತ್ತೆ ಮತ ಕೇಳಲು ಬರುತ್ತಿದ್ದಾರೆ. ಅವರ ಸುಳ್ಳುಗಳಿಗೆ ಹಾಗೂ ಬಣ್ಣದ ಮಾತುಗಳಿಗೆ ಮರುಳಾಗಬೇಡಿ ಎಂದು ಎಚ್ಚರಿಸಿದ ಪ್ರಿಯಾಂಕ್ ಈ ಬಾರಿ ಕಾಂಗ್ರೆಸ್ ಗೆ ಬೆಂಬಲಿಸಿ ಎಂದು ಮನವಿ ಮಾಡಿದರು.
ವೇದಿಕೆಯ ಮೇಲೆ ಮರಿಯಪ್ಪ ಹಳ್ಳಿ, ಶಿವಾನಂದ ಪಾಟೀಲ ಮರತೂರ, ಮೆಹಬೂಬ ಪಟೇಲ್,ಭೀಮಣಗೌಡ, ಶಿವಾನಂದ ಹೊನಗುಂಟಿ, ರುದ್ರಗೌಡ ಪಾಟೀಲ, ಪೀರಪಾಶಾ,ದೇವೆಂದ್ರ ಕಾರೊಳ್ಳಿ, ಪೂಜಪ್ಪ.ಮೇತ್ರೆ, ಆನಂದ ಕೊಡಸಾ, ಸಾಯಿಬಣ್ಣ ಕೊಲ್ಲೂರ್, ರೇವಣಸಿದ್ದ ವಾರಕರ್ ಸೇರಿದಂತೆ ಹಲವರಿದ್ದರು.