ಕಲಬುರಗಿ: ಅಪ್ಪಟ ಬಸವತತ್ವದ ಅನುಯಾಯಿ ಹಾಗೂ ತಮ್ಮ ಪ್ರವಚನಗಳ ಮೂಲಕ ನಾಡಿನಾದ್ಯಂತ ಬಸವತತ್ವದ ಪರಿಮಳ ಪಸರಿಸಿದ್ದ ಅಕ್ಕ ಅನ್ನಪೂರ್ಣತಾಯಿಯವರ ಅಗಲಿಕೆ ಬಸವ ಪರಂಪರೆಯ ವಿಸ್ತರಣೆಗೆ ಬಲವಾದ ಪೆಟ್ಟು ಬಿದ್ದಂತಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಕಲಬುರಗಿ ಜಿಲ್ಲಾಧ್ಯಕ್ಷ ರಾಜಶೇಖರ ಯಂಕಂಚಿ ಅಭಿಪ್ರಾಯಪಟ್ಟರು.
ಅಕ್ಕ ಅನ್ನಪೂರ್ಣ ತಾಯಿಯವರ ನಿಧನ ಪ್ರಯುಕ್ತ ನಗರದ ಬಸವೇಶ್ವರ ವೃತ್ತದಲ್ಲಿ ಗುರುವಾರ ಸಂಜೆ ಬಸವಪರ ಸಂಘಟನೆಗಳ ಪರವಾಗಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ನಡೆದ ಪ್ರವಚನ ಕಾರ್ಯಕ್ರಮದ ಮೂಲಕ ಬಸವತತ್ವ ಗಟ್ಟಿಗೊಳಿಸಿದ್ದರು. ಅವರ ಅಗಲಿಕೆ ಬಸವತತ್ವಾನುಯಾಯಿಗಳಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಎಪಿಎಂಸಿ ಮಾಜಿ ಉಪಾಧ್ಯಕ್ಷ ರಾಜಕುಮಾರ ಕೋಟಿ ಮಾತನಾಡಿ, ಅಕ್ಕ ಅವರ ಅಗಲಿಕೆಯಿಂದ ಇಡೀ ನಾಡಿಗೆ ದುಃಖ ಮಡುಗಟ್ಟಿದಂತಾಗಿದೆ. ಅವರ ಬಸವ ಸೇವೆ ಸ್ಮರಣೀಯ ಎಂದು ಹೇಳಿದರು.
ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ, ರವೀಂದ್ರ ಶಾಬಾದಿ, ಆರ್.ಜಿ. ಶೆಟಗಾರ, ಕಲ್ಯಾಣಪ್ಪ ಪಾಟೀಲ, ಜಗನ್ನಾಥ ರಾಚಟ್ಟೆ, ಶಿವಶರಣಪ್ಪ ದೇಗಾಂವ, ಮಲ್ಲಿಕಾರ್ಜುನ ವಡ್ಡನಕೇರಿ, ಜಗದೀಶ ಪಾಟೀಲ, ಜ್ಯೋತಿ ಯಂಕಂಚಿ, ವಿಜಯಲಕ್ಷ್ಮೀ ಗೊಬ್ಬೂರ, ನಿರ್ಮಲಾ ಕೋಟಿ, ನೀಲಾಂಬಿಕಾ, ಗಂಗಾಂಬಿಕಾ ಕೋಟೆ, ಶೋಭಾ ಡಂಬಳ, ರವಿ ಸಜ್ಜನ, ಅಪ್ಪು ಕಣಕಿ ಇತರರಿದ್ದರು.