ಸುರಪುರ: ಯುವ ಸಬಲೀಕರಣ, ಅರೋಗ್ಯ ಜೀವನಶೈಲಿ,ಲೈಂಗಿಕತೆ ಮತ್ತು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು ಭಾವನೆಗಳ ನಿಭಾಯಿಸುವಿಕೆ,ನೆನಪಿನ ಶಕ್ತಿ,ಏಕಾಗ್ರತೆ , ಶಿಕ್ಷಣದ ಒತ್ತಡ ನಿಭಾಯಿಸುವಿಕೆ ಮುಂತಾದ ವಿಷಯಗಳಿಗೆ ಪರಿಹಾರ ಒದಗಿಸುವುದೇ ಯುವ ಸ್ಪಂದನ ಅರಿವು ಕಾರ್ಯಕ್ರಮದ ಉದ್ದೇಶ ಎಂದು ಯುವ ಪರಿವರ್ತಕ ತಾಯಪ್ಪ ಯಾದವ್ ಹೇಳಿದರು.
ಜನ ಆರೋಗ್ಯ ಕೇಂದ್ರ ನಿಮ್ಹಾನ್ಸ್ ಬೆಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ಯುವ ಸ್ಪಂದನ ಕೇಂದ್ರ ಯುವಜನ ಸಂಬಂಧಿ ವಿಷಯಗಳ ಮಾರ್ಗದರ್ಶನ ಕೇಂದ್ರವಾಗಿದೆ ಎಂದು ತಿಳಿಸಿದ ಅವರು 15 ರಿಂದ 35ವರ್ಷ ಒಳಗಿನ ಯುವಕ ಮತ್ತು ಯುವತಿಯರ ಮಾನಸಿಕ,ದೈಹಿಕ ಹಾಗೂ ಕೌಟುಂಬಿಕಸಮಸ್ಯೆಗಳಿಗೆ ಯುವ ಸ್ಪಂದನ ಕೇಂದ್ರದಲ್ಲಿ ಸಮಾಲೋಚನೆ ನಡೆಸಿ ಪರಿಹಾರ ಸೂಚಿಸಲಾಗುವುದು ಎಂದು ತಿಳಿಸಿದರು .
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮಕ್ಕಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣ ಮತ್ತು ಉದ್ಯೋಗದ ಕುರಿತು ಮಾಹಿತಿ ನೀಡಲಾಯಿತು.
ಮುಖ್ಯೋಪಾಧ್ಯಾಯಿನಿ ಸಂಗಮ್ಮ ನಾಗಾವಿ,ಶಿಕ್ಷಕರಾದ ಸಾಹೇಬಗೌಡ,ಚಿಂತಾಮಣಿ,ಚಂದ್ರಕಾಂತ ಕುಲಕರ್ಣಿ,ಸಣ್ಣಕೆಪ್ಪ ಪೂಜಾರಿ,ಮಾನಪ್ಪ, ವೈಶಾಲಿ,ಉಪೇಂದ್ರ ಪತ್ತಾರ ಇತರರಿದ್ದರು.