ಸರಕು ಸಾಗಾಣಿಕೆ ಪ್ರಕರಣ: ನ್ಯಾಯಾಲಯಕ್ಕೆ ಅಫಿಡೇವಿಟ್ ಸಲ್ಲಿಸಲು ಕೂಡಲೇ ಕ್ರಿಯಾ ಯೋಜನೆ ಸಲ್ಲಿಸಿ

0
29

ಕಲಬುರಗಿ: ಸರಕು ಸಾಗಾಣಿಕೆ ವಾಹನಗಳಲ್ಲಿ ಕಾನೂನುಬಾಹಿರವಾಗಿ ಸಾರ್ವಜನಿಕರನ್ನು ಕೊಂಡೊಯ್ಯುತ್ತಿರುವ ಕುರಿತು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರಕರಣದ ಮುಂದಿನ ವಿಚಾರಣೆಯೂ ಜೂನ್ 3,2019ಕ್ಕೆ ನಡೆಯಲಿದೆ. ಅಂದು ಪ್ರತಿವಾದಿಯಾಗಿರುವ ರಾಜ್ಯ ಸರ್ಕಾರದಿಂದ ಅಫಿಡೇವಿಟ್ ಸಲ್ಲಿಸಬೇಕಾಗಿರುವುದರಿಂದ ಜಿಲ್ಲಾ ಹಂತದಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಗಳು ಜಿಲ್ಲಾಧಿಕಾರಿಗಳ ಮೂಲಕ ಸಾರಿಗೆ ಆಯುಕ್ತರಿಗೆ ಕೂಡಲೆ ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕು ಎಂದು ಕಾರ್ಮಿಕ ಇಲಾಖೆಯ ಅಪರ ಆಯುಕ್ತ ಎಸ್.ನರಸಿಂಹಮೂರ್ತಿ ಹೇಳಿದರು.

ಸೋಮವಾರ ಕಲಬುರಗಿ ನಗರದ ಕಾರ್ಮಿಕ ಇಲಾಖೆಯ ಭವನದಲ್ಲಿ ಆಯೋಜಿಸಲಾದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕಾರ್ಮಿಕ ಸಂಘಟನೆ ಮುಖಂಡರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂವೇದನಾ ಶೀಲತೆಯನ್ನು ಮೂಡಿಸುವ ಉದ್ದೇಶದಿಂದ ನಡೆಸಲಾದ ಸಭೆಯಲ್ಲಿ ಮಾತನಾಡುತ್ತ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದೂವರೆಗೆ ತೆಗೆದುಕೊಂಡ ಕ್ರಮ ಹಾಗೂ ಮುಂದೆ ತೆಗೆದುಕೊಳ್ಳಬಹುದಾದ ಕ್ರಮದ ಕುರಿತು ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ಉಚ್ಛ ನ್ಯಾಯಾಲಯದ ನಿರ್ದೇಶನ ನೀಡಿದೆ.

Contact Your\'s Advertisement; 9902492681

ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕಳೆದ ಏಪ್ರಿಲ್ 26 ರಂದು ನಡೆಸಿದ ವಿಡಿಯೋ ಸಂವಾದದಲ್ಲಿ ಸಂಬಂಧಿಸಿದ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ವಿವರಿಸುತ್ತ ಪ್ರತಿ ಜಿಲ್ಲೆಯಿಂದ ಕ್ರಿಯಾ ಯೋಜನೆ ಸಲ್ಲಿಸುವಂತೆ ಸೂಚನೆ ನೀಡಿರುತ್ತಾರೆ. ಬಹುತೇಕ ಜಿಲ್ಲೆಗಳಲ್ಲಿ ಕರಡು ಸಹ ಸಿದ್ಧಗೊಂಡಿದೆ. ಅದರಂತೆ ಕಲಬುರಗಿ ಜಿಲ್ಲೆಯಿಂದಲೂ ಶಿಕ್ಷಣ, ಸಾರಿಗೆ, ಪೊಲೀಸ್, ಕಾನೂನು ತಜ್ಞರಿಂದ ಸಲಹೆ ಪಡೆದು ಸಕರಾತ್ಮಕ ಹಾಗೂ ಸರಳವಾಗಿ ಅನುಷ್ಠಾನ ಮಾಡಲು ಯೋಗ್ಯವಾದ ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕಾಗುತ್ತದೆ. ಈ ಕ್ರಿಯಾ ಯೋಜನೆ ಮುಂದೆ ಕಾನೂನಾಗಿ ಜಾರಿಗೆ ಬಂದರು ಅಚ್ಚರಿಯಿಲ್ಲ. ಹೀಗಾಗಿ ಯೋಜನೆ ಸಿದ್ದಪಡಿಸುವಾಗ ಸಾಧಕ-ಬಾಧಕಗಳನ್ನು ಅವಲೋಕಿಸುವುದು ಒಳ್ಳೆಯದು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ಮಾಣಿಕ್ಯ ಮಾತನಾಡಿ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣ ಮಾಡಿ ಅಪಘಾತಕ್ಕೆ ತುತ್ತಾದಲ್ಲಿ ಯಾವುದೇ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ ಎಂಬುದನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ಇಂತಹ ವಾಹನಗಳಲ್ಲಿ ಸಾರ್ವಜನಿಕರ ಪ್ರಯಾಣವನ್ನು ತಡೆಯಬೇಕಾದರೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸವುದು ಅವಶ್ಯಕ. ಸರಕು ವಾಹನಗಳಲ್ಲಿ ಪ್ರಯಾಣ ತಡೆಗಟ್ಟಲು ಆಂದೋಲನ ರೂಪದಲ್ಲಿ ಕಾರ್ಯಾಚರಣೆ ನಡೆಸಬೇಕಾಗಿದ್ದು, ಪೊಲೀಸ್, ಸಾರಿಗೆ ಇಲಾಖೆಯೊಂದಿಗೆ ಇನ್ನಿತರ ಇಲಾಖೆಗಳು ಸಹ ಕೈಜೋಡಿಸಬೇಕಾಗಿದೆ ಎಂದರು.

ಸಭೆಯಲ್ಲಿ ಕಲಬುರಗಿ ವಿಭಾಗದ ಉಪ ಕಾರ್ಮಿಕ ಆಯುಕ್ತ ಗಿರೀಶ ಎಸ್.ಪಾಟೀಲ, ಸಹಾಯಕ ಕಾರ್ಮಿಕ ಆಯುಕ್ತ ಶ್ರೀಹರಿ ದೇಶಪಾಂಡೆ, ಸಂಚಾರ ಉಪ ವಿಭಾಗದ ಎಸಿಪಿ ವಿರೇಶ, ಎನ್.ಸಿ.ಎಲ್.ಪಿ. ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಸೇರಿದಂತೆ ಆರ್.ಟಿ.ಓ., ಈ.ಕ.ರ.ಸಾ.ಸಂಸ್ಥೆ, ಕಾರ್ಖಾನೆ ಮತ್ತು ಬಾಯ್ಲರಗಳ ಇಲಾಖೆ, ಪಂಚಾಯತ್ ರಾಜ್ ಇಂಜಿನೀಯರಿಂಗ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರು ಹಾಗೂ ಕಾರ್ಮಿಕ ಸಂಘನೆಯ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here