ವಿಶ್ವವಾಣಿ ಪೇಪರೂ ಇಲ್ಲ. ಇ ಪೇಪರೂ ಇಲ್ಲ

1
378

ಸಂಬಳ ನೀಡದೆ ದುಡಿಸಿಕೊಳ್ಳೊದು ವರದಿಗಾರರ ದುರುಪಯೋಗವಲ್ಲವೇ

ಪ್ರೀತಿಯ ಸನ್ಯಾನ್ಯ ಶ್ರೀ ಯತಿರಾಜು ಸರ್ ನಮಸ್ಕಾರಗಳು.

Contact Your\'s Advertisement; 9902492681

ದುರುಪಯೋಗ ಅಂದರೆ ಹೇಗೆ, ದುರ್ಬಳಕೆ ಅಂದರೆ ಹೇಗೆ, ಜೀತ ಅಂದರೆ ಹೇಗೆ ಹೇಳ್ತೀರಾ, ಭಿಕ್ಷೆ ಅಂದರೆ ಹೇಗೆ ವಿವರಿಸ್ತೀರಾ? ವರದಿಗಾರರು ಜಾಹೀರಾತು ಹಣ ದುರುಪಯೋಗ ಪಡಿಸಿಕೊಳ್ಳೋದು ಯಾವಾಗ.
ವರದಿ ಮಾಡುವವರಿಗೆ ಜಾಹೀರಾತು ತನ್ನಿ, ರೆವಿನ್ಯೂ ತನ್ನಿ ಅನ್ನೋದು ಆಯಾಯ ಸಂಸ್ಥೆಗಳಿಗೆ ಬಿಟ್ಟದ್ದು,
ಆದರೆ, ಸಂಬಳ ನೀಡದೇ ಇದ್ದಾಗ ಜೀವನದ ಅನಿವಾರ್ಯತೆಗೆ ಜಾಹೀರಾತನ್ನ ಬಲವಂತವಾಗಿಯೋ, ಕಾಡಿಬೇಡಿಯೋ, ಕೈ ಕೈ ಮುಗಿದೋ ತಂದು ಹಾಕಿಸಿ ಸಂಬಳದಷ್ಟಾದರೂ ಹಣ ಸಿಕ್ಕರೇ ಸಾಕು ಎಂಬಂತೆ ಈಗ ವರದಿಗಾರರ ಸ್ಥಿತಿಯಾಗಿದೆ.

ಜಾಹೀರಾತು ಹಾಕೋದು ನಮ್ಮ ಸಂಬಳದಷ್ಟಾದರೂ ದುಡ್ಡು ಬರಲಿ ಎಂದು ಪಡುವ ಪಾಟಲು ಅವರಿಗೆ ಗೊತ್ತು. ಜನರಿಗೆ ಸಿಗದ ಪೇಪರ್ ನಲ್ಲಿ ನಾವು ಜಾಹೀರಾತು ತರೋದು ಅಂದರೆ ಅದು ಮರಳುಗಾಡಿನಲ್ಲಿ ನೀರು ತಂದಂತೆ. ಅದಿರಲಿ.

ವರದಿಗಾರರಿಗೂ ಹೆಂಡತಿ ಮಕ್ಕಳಿದ್ದಾರೆ. ಪ್ರತಿ ತಿಂಗಳ ಮನೆ ಬಾಡಿಗೆ, ರೇಷನ್ ಖರ್ಚು, ಮಕ್ಕಳ ಸ್ಕೂಲ್ ಫೀಜ್, ವ್ಯಾನ್ ಪೀಜು, ಆಸ್ಪತ್ರೆ ಖರ್ಚು, ನಮ್ಮ ಬೈಕಿಗೆ ಪೆಟ್ರೊಲ್, ಹೊರಗೋದರೆ ಊಟ, ತಿಂಡಿ, ಕಾಫಿ, ಮನೆಯ ಡಿಶ್, ಹಾಲು ಪೇಪರ್ ಬಿಲ್, ಮೊಬೈಲ್‍ಗೆ ಕರೆನ್ಸಿ, ಬ್ಯಾಂಕ್ ಸಾಲದ ಕಂತು. ಹೀಗೆ ತಿಂಗಳಿಗೆ ನಮ್ಮದೇ ಹದಿನೈದು ಹದಿನೆಂಟು ಸಾವಿರ ಬೇಕೇ ಬೇಕು. ಇನ್ನೂ ಸಾಲ ಜಾಸ್ತಿ ಇದ್ರೆ ಇಪ್ಪತೈದು ದಾಟುತ್ತೆ.

ನೀವು ರಾಜಕಾರಣಿಗಳ ಬಳಿ ಚುನಾವಣಾ ಪ್ಯಾಕೇಜ್ ಮಾತಾಡಿ ಎನ್ನುವುದು ನಿಮ್ಮ ಮಟ್ಟಕ್ಕೆ ಸರಿ. ಆದರೆ ನಮಗದು ಕಷ್ಟ ಅಲ್ಲವೇ. ವರದಿಗಾರ ಕೈ ಚಾಚಿದ್ರೆ ಅವ ಹಂದಿಗೆ ಸಮನಾಗಿ ಹೋಕ್ತಾನೆ. ಸ್ಥಳೀಯವಾಗಿ ದುಡ್ಡಿಗಿಂತ ಸ್ವಾಭಿಮಾನ ಮುಖ್ಯ ಅಲ್ಲವೇ ಸ್ವಾಮಿ.

ವಿಶ್ವವಾಣಿ ಪತ್ರಿಕೆ ಬರೋದೇ ಕಷ್ಟ. ಅದರಲ್ಲಿ ಬಂದ ಸುದ್ದಿಯನ್ನು ಜನ ನೋಡೋಲ್ಲ. ಯಾಕಂದ್ರೇ ಪೇಪರೇ ಸಿಗಲ್ಲ. ಇನ್ನೂ ಪೇಪರ್‍ಗೆ ಜಾಹೀರಾತು ಕೊಡುತ್ತಾರೆಯೇ ಸ್ವಾಮಿ.

ವಿಶ್ವೇಶ್ವರ ಭಟ್ ಸರ್ ನಿಮ್ಮ (ಸಿಒಒ ಯತಿರಾಜ್) ಮೇಲೆ ಅಪಾರ ನಂಬಿಕೆ ಇಟ್ಟು ಈ ಸ್ಥಾನ ನೀಡಿದ್ದಾರೆ. ಆದರೆ ತಾವು ಅವರಿಗೆ ಮಂಕುಬೂದಿ ಎರಚಿ ಅವರಿಗೆ ರೆವಿನ್ಯೂ ತೋರಿಸಿ ಸಿಬ್ಬಂದಿಗಳಿಗೆ ಉಂಡೆ ನಾಮ ಹಾಕಿದ್ದೀರಾ. ನೀವು ಹೊಟ್ಟೆ ತುಂಬಾ ಕೊಡಬೇಡಿ ಗಂಜಿಯನ್ನಾದರೂ ಕೊಡಿ.

ವಿಶ್ವವಾಣಿಯಿಂದ ಈ ಕೆಳಗಿನವರು ಬಿಟ್ಟಿದ್ಯಾಕೆ. ಇವರು ರಾಜೀನಾಮೆ ಕೊಟ್ಟರಾ ಅಥವಾ ನೀವೇ ವಜಾ ಮಾಡಿದ್ರಾ ಹೇಳಿ.?

ಸಂಪಾದಕೀಯ ವಿಭಾಗದ
ರಾಧಾಕೃಷ್ಣ ಭಡ್ತಿ ಸರ್
ಅಜಿತ್ ಹನುಮಕ್ಕನವರ್ ಸರ್
ವಿನಾಯಕ ಭಟ್ ಸರ್
ಪಿ. ತ್ಯಾಗರಾಜ್ ಸರ್
ಕೆರೆ ಮಂಜುನಾಥ್ ಸರ್
ಸಿಇಒ ಆಗಿದ್ದ ಬಸವರಾಜ್ ಸರ್
ಚಿರಂಜೀವಿ ಭಟ್
ನವೀನ್ ಸಾಗರ್
ಜಗನ್ನಾಥ್ ಸರ್
ವೇಣು ಡಿಜೈನರ್
ಸಂತೋಷ್
ಗೀರ್ವಾಣಿ ಭಟ್
ಶ್ರೀರಾಮ್ ಕಶ್ಯಪ್ (ಐಟಿ)
ಶ್ರೀಕಾಂತ ಹೆಗಡೆ
ಜೋಷಿ.
ಮತ್ತು
ಹುಬ್ಬಳ್ಳಿಯ ಹತ್ತಾರು ಪತ್ರಕರ್ತರು. ಬೆಂಗಳೂರಿನ ಇಪ್ಪತ್ತಕ್ಕೂ ಅಧಿಕ ಸಿಬ್ಬಂದಿ.

ಇವರು ವಿಶ್ವವಾಣಿಯಿಂದ ದೂರಾಗಲೂ ಯತಿರಾಜ ನೆಂಬ ಒಂದಕ್ಷರ ಬರೆಯದ ಸುದ್ದಿ ಸಂಪಾದಕ ಅರ್ಥಾತ್ ವಿಶ್ವವಾಣಿ ಸಿಒಒ ಯತಿರಾಜ ನೆಂಬ ಸೂಪರ್ ಜರ್ನಲಿಸ್ಟ್ ಕಾರಣ ಅಂತ ಅನೇಕರು ಹೇಳ್ತಾ ಇದಾರೆ ಅದು ನಮಗೆ ಸಂಬಂಧಿಸದ ವಿಚಾರ.

ಊರು ಅಂದ ಮೇಲೆ ಹೊಲಗೇರಿ ಇದ್ದೆ ಇರುತ್ತೆ. ಪತ್ರಿಕೋದ್ಯಮ ಅಂದಮೇಲೆ ಜನ ಮಾತಾಡೋದು ಸಾಮಾನ್ಯ. ಆದರೆ ನನಗೆ ನಿಮ್ (ಯತಿರಾಜ್) ಬಗ್ಗೆ ಅಪಾರ ಗೌರವ ಇದೆ. ಯಾಕಂದ್ರೆ ನೀವು ವಿಶ್ವವಾಣಿಗೆ ಒಂಥರಾ ಸೂಪರ್ ಸಂಪಾದಕರು.

ಸ್ವಾಮಿ ತಾವು ದಯಮಾಡಿ ಈ ಪ್ರಶ್ನೆಗಳಿಗೆ ಉತ್ತರಿಸಿ. ನಾನು ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸುವೆ

1) ಕಾರ್ಮಿಕರಂತೆ ದುಡಿಯುವ ಜಿಲ್ಲಾ ವರದಿಗಾರರಿಗೆ ಆರು ತಿಂಗಳಿನಿಂದ ಸಂಬಳ ನೀಡಿಲ್ಲ ಏಕೆ? ಸಂಬಳ ನೀಡದೇ ಅವರು ಕೆಲಸ ಮಾಡಿದ್ದಾರೆ ಎಂದರೆ ನಮ್ಮ ಮನೆಯಲ್ಲಿ ಊಟ ಮಾಡಿ ನಿಮ್ಮ ಮನೆಯಲ್ಲಿ ಕೆಲಸ ಮಾಡಿದಂತೆ ಅಲ್ಲವೇ.

2) ಎಲ್ಲಾ ಪತ್ರಿಕೆಯಲ್ಲಿ ಎಕ್ಸ್ ಪೆನ್ಸ್ ಅಂತ ಪೆಟ್ರೋಲ್, ಇಂಟರ್‍ನೆಟ್, ಮೊಬೈಲ್ ಗೆ ಕೊಡ್ತಾರೆ ತಾವು ಈ ವೆಚ್ಚವನ್ನು ನೀಡಿಲ್ಲ ಏಕೆ? ಬೈಕ್‍ ಪ್ರೆಟ್ರೋಲ್ ಇಲ್ಲದೆ ಮುಂದೋಗಲ್ಲ ಪಾಪ. ಇಂಟರ್ ನೆಟ್ ಇಲ್ಲದೆ ಸುದ್ದಿ ಹಾಕೋಕೆ ಆಗಲ್ಲ . ಮೊಬೈಲ್ ಕರೆನ್ಸಿ ಇಲ್ಲದೆ ಏನೂ ಆಗಲ್ಲ.

3) ಎಲ್ಲಾ ಜಿಲ್ಲೆಯ ಕ್ಯಾಮರಾಮನ್‍ಗಳು ಅಲೆದಾಡಿ ಸುತ್ತಾಡಿ ಕೊಡುವ ಪೊಟೋಗೆ 50 ರೂ ಇತ್ತು. ಅದನ್ನು ನೀವು ನೀಡಲೇ ಇಲ್ಲ. ಇತ್ತಿಚೆಗೆ ಕ್ಯಾಮರಾಮನ್‍ಗಳೇ ಬೇಡ ಎಂದ ಮೇಲೆ ಅವರ ಹಳೇ ಬಾಕಿ ವೇತನ ನೀಡಿಲ್ಲ ಏಕೆ?

4) ಜಿಲ್ಲಾ ಕೇಂದ್ರಗಳಲ್ಲಿ ವರದಿಗಾರರು ಮಾಡಿದ ಕಚೇರಿ ಬಾಡಿಗೆ ಹಣ ಕಟ್ಟಿಲ್ಲ. ಸಂಬಳದಲ್ಲೆ ಬಾಡಿಗೆಯನ್ನು ಕಟ್ಟಿದ್ದಾಗಿದೆ. ಉಳಿದಂತೆ ಜಾಹೀರಾತು ಸಂಗ್ರಹಿಸಿ ತಂದ ಹಣದಿಂದಲೇ ಬಾಡಿಗೆ ಕಟ್ಟಬೇಕಲ್ಲವೇ? ಸಂಬಳವೂ ಇಲ್ಲ ಎಕ್ಸ್ ಪೆನ್ಸೂ ಇಲ್ಲ, ಬಾಡಿಗೆಯೂ ಇಲ್ಲ. ಆದರೂ ಬೇಕು ಅನ್ನೋದು ಮದುವೆ ಗಂಡಿಗೆ ಅದೇ ಇಲ್ಲ ಅಂದಂಗಾತು.

5) ಜಿಲ್ಲಾ ಸಹಾಯಕ ವರದಿಗಾರರಿಗೆ ಇಲ್ಲಿವರೆಗೂ ಬಿಡಿಕಾಸು ಸಿಕ್ಕಿಲ್ಲ. ಸಾಲ ಮಾಡಿ ಜೀವಿಸಬೇಕಿದೆ. ಅವರಿಗೆ ವೇತನ ನೀಡಿಲ್ಲ ಏಕೆ.

6) ತಾಲೂಕು ಮಟ್ಟದ ಸ್ಟ್ರಿಂಜರ್‍ಗಳಿಗೆ ನೂರು ರೂ. ಕೂಡಾ ಗೌರವ ಧನವೂ ಇಲ್ಲ. ಜಾಹೀರಾತು ತಂದರೆ ಸೂಕ್ತ ಕಮೀಷನ್ನೂ ಇಲ್ಲ. ಪೇಪರ್ ಕಮಿಷನ್ನು ಇಲ್ಲ ಏಕೆ?

7) ಕೇಂದ್ರ ಕಚೇರಿ ಸೇರಿದಂತೆ ಎಲ್ಲಾ ಸಿಬ್ಬಂದಿಗಳ ವೇತನಕ್ಕೆ ನೀಡುವ ಪಿಎಫ್ ನೀಡಿಲ್ಲ ಏಕೆ? ಪಿ.ಎಫ್ ಇಲ್ಲದ ಜೀವನ ಜೀವನವೇ. ಇದು ಅಕ್ಷಮ್ಯ ಅಪರಾಧ ಅಲ್ಲವೇ.? ಕಾರ್ಮಿಕರಿಗೆ ಮೋಸ ವಂಚನೆ ಮಾಡುವುದು ಕಾನೂನು ರಿತ್ಯ ಅಪರಾಧ ಅಲ್ಲವೇ ಸ್ವಾಮಿ.

8) ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಯುವಕರು ಯುವತಿಯರು (ಎಳೆ ನಿಂಬೆಕಾಯಿಗಳು) ಸಂಬಳ ಇಲ್ಲದೆ, PG ಬಾಡಿಗೆ ಕಟ್ಟಲಾಗದೆ ಊಟ ಇಲ್ಲದೆ ವಿಶ್ವವಾಣಿ ಸಹವಾಸವೇ ಬೇಡ ಎಂದು ಹೋದರಲ್ಲ ಇದಕ್ಕೆ ಯಾರು ಹೊಣೆ ?

9) ವಿಶ್ವವಾಣಿ ಪತ್ರಿಕೆ ಒಂದೇ ವರ್ಷದಲ್ಲಿ ಎಬಿಸಿ ಸರ್ಟಿಫಿಕೇಟ್ ಇಲ್ಲದಂತೆ ಆಗಿದೆ. ಆದರೂ ನಾವು ಹತ್ತು ಪಟ್ಟು ಸರ್ಕುಲೇಷನ್ ಇದೆ ಎಂದು ಸುಳ್ಳು ಹೇಳಿ ಸುತ್ತಾಡೋದು ಯಾರಿಗೂ ಗೊತ್ತಿಲ್ವೇ ಅಲ್ಲದೇ ಜಿಲ್ಲಾ ವರದಿಗಾರ ರನ್ನು ಅಪ್ಪಟ ಸುಳ್ಳುಗಾರ ರನ್ನಾಗಿ ಮಾಡಿದ ಕೀರ್ತಿ ತಮ್ಮದು. ಸುಳ್ಳಿನ ಕತೆ ಕಟ್ಟಿ ತಂದ ಜಾಹೀರಾತುಗಳ ಯೋಗ್ಯತೆಗಾದರೂ ಪೇಪರ್ ಬರುತ್ತಿಲ್ಲ ಏಕೆ? ಜಾಹೀರಾತು ಹಾಕಿದವರಿಗೆ ಮಾತ್ರ ಐದು ಪೇಪರ್ ಕೊಡೋದು ಅವರಿಗೆ ಹತ್ತು ಜನರಿಂದ ನಾವೇ ಫೋನ್ ಮಾಡಿಸಿ “ಅಣ್ಣ ಏನಣ್ಣಾ ವಿಶ್ವವಾಣಿಯಲ್ಲಿ ಜಾಹೀರಾತು ಚೆನ್ನಾಗಿಬಂದಿದೆ” ಎಂದು ಹೇಳಿಸೋದು ಎಷ್ಟರ ಮಟ್ಟಿಗೆ ಸರಿ ಹೇಳಿ ದೇವ್ರು.

10) ವಿಶ್ವವಾಣಿ ಪತ್ರಿಕೆ ದಿನವೂ ಮುದ್ರಣವಾಗುತ್ತಿಲ್ಲ. ಬಂದರೂ ಅದರ ಮುದ್ರಣ ಸರಿಯಾಗಿಲ್ಲ. ಇನ್ನೂ ವಿಶ್ವವಾಣಿ ರಾಜ್ಯಮಟ್ಟದ ಪತ್ರಿಕೆಯಾಗಿ ಗುರುತಿಸಿಕೊಂಡಿಲ್ಲ ಇದು ಯಾರ ದೋಷ?

11) ರಾಜ್ಯದ ಎಲ್ಲಾ ಬ್ಯೂರೋಗಳ ಸಹವಾಸ ಬೇಡ. ದಾವಣಗೆರೆ ಬ್ಯೂರೋದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಪ್ರತಿದಿನದ ಪತ್ರಿಕೆಯ ಪೇಪರ್ ಪೈಲ್ ಕಾಫಿ ಇದೆಯಾ? ಇದ್ದರೇ ಒಂದೊಂದು ಪತ್ರಿಕೆಯನ್ನು ಕೊಡಿ. ಪೈಲ್ ಕಾಫಿ ತೋರಿಸಿ.

12) ವರದಿಗಾರರು ನೀಡಿದ ಜಾಹೀರಾತು ಪ್ರಕಟವಾಗಿರುವ ಐದು ಪತ್ರಿಕೆ ಹಾಗೂ ಅಂದೇ ನೀವು ನೀಡಿದ ಗ್ರಾಹಕರಿಗೆ ನೀಡಿದ ಬಿಲ್ ಕೋರಿಯರ್ ಮಾಡಿದ ಸ್ಲಿಪ್ ಹಾಗೂ ಅದರ ದಿನಾಂಕದ ಸಹಿತ ವೋಚರ್ ಕೊಡಿ.

13) ರಾಜ್ಯ ಸರಕಾರಿ ಜಾಹೀರಾತುಗಳನ್ನ ನೀಡುವುದು ಜನರಿಗೆ ತಲುಪಲಿ ಎಂದು ಆದರೆ ಇಲಾಖೆಗಳಿಗೆ ಐದು ಪೇಪರ್ ಕೂಡಾ ಮುಟ್ಟುತ್ತಿಲ್ಲ. ಇನ್ನೂ ಜನರಿಗೆ ಮುಟ್ಟುತ್ತವೆಯೇ! ಸರಕಾರಿ ಜಾಹೀರಾತು ಹಣ ಪಡೆಯುವ ನೀವು ಜನರಿಗೆ ಮುಟ್ಟದಷ್ಟು ಕಡಿಮೆ ಪ್ರಸಾರಾಂಗ ಇದ್ದ ಮೇಲೆ ಇದು ರಾಜ್ಯ ಪತ್ರಿಕೆ ಹೇಗಾದೀತು ಹೇಳಿ.

14) ಎಲ್ಲಾ ರಾಜ್ಯ ಮಟ್ಟದ ಪತ್ರಿಕೆಗಳ ಜಿಲ್ಲಾ ವರದಿಗಾರರಿಗೆ ಮಾಧ್ಯಮ ಮಾನ್ಯತಾ ಪತ್ರ ಇರುತ್ತದೆ. ವಿಶ್ವವಾಣಿಗೆ ಏಕೆ ನೀಡುತ್ತಿಲ್ಲ ಹೇಳಿ. ಇಲ್ಲಿ ಪ್ರಸಾರಾಂಗವೇ ಇಲ್ಲ ಇನ್ನೂ ಮಾನ್ಯತೆ ಹೇಗೆ ಸಿಗುತ್ತೆ? ಸಾಮಿ. ತಾಳಿ ಕಟ್ಟಿದ ಗಂಡ ರೇಷನ್ ತಂದಿಲ್ಲ ಅಂದರೆ ಹೆಂಡತಿನೇ ಬೆಲೆ ಕೊಡೋಲ್ಲ. ಅಕ್ರಿಡೇಶನ್ ಕಾರ್ಡ್ ಇಲ್ಲದ ವಿಶ್ವವಾಣಿಗೆ ಮಾನ್ಯತೆ, ಮರ್ಯಾದೆ ಯಾರ್ ಕೊಡ್ತಾರೆ ಹೇಳಿ ಸರ್.

15) ವಾರ್ತಾ ಇಲಾಖೆಗೆ ಮತ್ತು ಎಲ್ಲಾ ಸರಕಾರಿ ಕಚೇರಿಗಳಿಗೆ ಸರ್ಕುಲೇಷನ್ ಇಲ್ಲದೆ ವಂಚಿಸುವ ನೀವು. ನಿಮ್ಮ ಸಿಬ್ಬಂದಿಗಳಿಗೆ ನೀಡಿದ ಅಪಾಯಿಂಟ್ ಮೆಂಟ್ ಲೆಟರ್‍ಗಳನ್ನ ರಿನಿವಲ್ ಮಾಡಿಲ್ಲ ಏಕೆ.?

16) ಅನಗತ್ಯ ಯಾರನ್ನೋ ಬೆದರಿಸುವ ಗದರಿಸುವ ಪ್ರಮೇಯ ಬೇಡ. ಇಲ್ಲಿವರೆಗೂ ಕಷ್ಟವೋ ಸುಖವೋ ವಿಶ್ವವಾಣಿಯನ್ನು ಹಾಗೂ ವಿಶ್ವೇಶ್ವರ ಭಟ್ ಸರ್ ಅವರನ್ನು ನಂಬಿದ್ದ ಅನೇಕರು ನೀವು ಬಂದ ಮೇಲೆ ಶೋಷಣೆಗೆ ಒಳಗಾಗಿದ್ದಾರೆ.

ವಿಶ್ವೇಶ್ವರ ಭಟ್ ಸರ್ ಅವರ ಆಶಯದಂತೆ ನಾವು ಕನಸು ಕಟ್ಟಿ ಕೊಂಡು ಬಂದವರು ಅನೇಕರು. ಇಲ್ಲಿದ್ದ ಅನೇಕರು ಬಿಟ್ಟರೂ ನಾವು ಬಿಡಲಿಲ್ಲ. ನಿಮ್ಮ ವಿಶೇಷ ಕಾಳಜಿ ಪ್ರೀತಿಯಿಂದಾಗಿ ವರದಿಗಾರರು ಹಸಿವಿನಿಂದ ಬಳಲುವಂತಾಗಿದೆ.

ಹೌದು, ಇದು ಸದ್ಯ ವಿಶ್ವವಾಣಿ ಪರಿಸ್ಥಿತಿ. ಹೆಂಗಿದೆ ಅಂದರೆ ಅದು ಖುದ್ದು ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರಿಗೂ ತಿಳಿದಿಲ್ಲ. ಭಟ್ಟರೂ ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ ಎಂದು ಭಾವಿಸಿದ್ದಾರೆ. ಆದರೆ ಅಲ್ಲಿ ಇರೋದೆ ಬೇರೆ.
ಸದ್ಯ ಆರು ತಿಂಗಳಿನಿಂದ ವಿಶ್ವವಾಣಿಯಲ್ಲಿ ಸಂಬಳ ಇಲ್ಲ. ಒಂದ್ ತಿಂಗಳದ್ದು ಹಾಕಿ ನಾಕು ತಿಂಗಳು ತಳ್ಳೋದು. ಅಥವಾ ಇನ್ನೂ ಮೂರ್ ತಿಂಗಳು ಸಂಬಳ ಕೊಡೋಲ್ಲ ಎಂಬ ಫರ್ಮಾನನ್ನು ಖುದ್ದು ಸಿಒಒ ಅಂದರೆ ಚೀಫ್ ಆಪರೇಟಿಂಗ್ ಆಫೀಸರ್ ಖುರ್ಚಿ ಯಲ್ಲಿರುವ ಯತಿರಾಜ್ ಅವರು ಹೊರಹಾಕಿದ್ದಾರೆ. ಇಲ್ಲಿ ಸಂಬಳವೂ ಇಲ್ಲ ಅಂದ ಮೇಲೆ ಪಾಪ ಎಳೆ ನಿಂಬೆಹಣ್ಣಿನಲ್ಲಿ ರಸ ಎಲ್ಲಿಂದ ಬರಬೇಕು. ಇನ್ನೂ ಬಲಿತ ಅನೇಕ ನಿಂಬೆಹಣ್ಣುಗಳಲ್ಲಿ ಬೀಜ ಇಲ್ಲದೆ “ಸೀಡ್ ಲೆಸ್ ಲೆಮನ್ ಆಗೀದಾರೆ.
ಹೀಗಾದ್ರೆ ವರದಿಗಾರರಿಗೆ ಅನ್ನ ಹೆಂಗೆ ಸಿಗಬೇಕು ದೇವರೇ.

ಲಾಸ್ಟ್ ಸಿಪ್: ನೂರಾರು ಯುವಕರ ಗುರುಗಳಾದ ವಿಶ್ವೇಶ್ವರ ಭಟ್ ಸರ್ ಸಂಪಾದಕರಾಗಿದ್ದ ವೇಳೆ ಉತ್ತಮವಾದ ಸಂಬಳ ಕೊಡಿಸಿದ ಮಹಾತ್ಮರು. ಆದರೆ ಅವರು ಮಾಲೀಕರು ಆದ ಮೇಲೆ ಕಷ್ಟ ಬಂದದ್ದು ಸರಿ.‌ ಅದನ್ನು ಅವರು ನಿಭಾಯಿಸಲು ಸಿದ್ದರಿದ್ದರು. ‌ಆದರೆ ಯತಿರಾಜ್ ಎಂಬ ತಮ್ಮ ಉಸ್ತುವಾರಿ ಬಂದ ಮೇಲೆ ಕಷ್ಟ ಸಂಕಷ್ಟ, ಶೋಷಣೆಯೇ ಜಾಸ್ತಿ ಆಗಿದೆ ಅಂತ ಪ್ರೆಸ್ ಕ್ಲಬ್ ಟೇಬಲ್ ಗಳು ಮಾತಾಡ್ತಾ ಇವೆ.

ಬರೆಯುವ ಸಂಪಾದಕರು, ನೂರಾರು ಪುಸ್ತಕಗಳ ಬರೆದ ನಮ್ ಬಾಸ್ ಜತೆ ಇರೋವಾಗಲಾದರೂ ಒಂದು ಪುಸ್ತಕ ಬೇಡ ಒಂದ್ ಸಂಪಾದಕೀಯ ಬರೆದು ವಿಶ್ವವಾಣಿ ಮರ್ಯಾದೆ ಉಳಿಸಿ.

ಯಾರದೋ ಸಾಮಾನಿಗೆ ನೀವು ಕಾಂಡೋಮ್ ಹಾಕಿದ್ರೆ ಜನಸಂಖ್ಯೆ ನಿಯಂತ್ರಣ ಆಗಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳ ಮಾತು ನೆನಪಾತು.

ನಾನು ಎಂಎ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಎಂಎ ರಾಜ್ಯಶಾಸ್ತ್ರ, ಬಿಎಡ್, ಕಾನೂನು ಪದವಿ ಡಿಪ್ಲೊಮಾ ಕನ್ನಡ, ಡಿಪ್ಲೊಮಾ ಜರ್ನಲಿಸಂ ಓದಿದ್ದೇನೆ. ಈಗ ಪಿಎಚ್ ಡಿ ಸಂಶೋಧನೆ ನನ್ನ ಗುರಿ.
ನಾವೂ ಮೇಷ್ಟ್ರಾಗಿಯೋ, ಪದವಿ ಕಾಲೇಜ್ ಗೆ ಉಪನ್ಯಾಸಕರಾಗಿಯೋ, ಕೊ‌ನೆಗೆ ಕರಿಕೋಟು ಹಾಕಿ ಲಾಯರ್ ಆಗಿಯೋ ಏನಾದರೂ ಆಗಿ ಜೀವನ ಮಾಡ್ತೇನೆ. ಆದರೆ ಮೋಸ ಮಾಡಲ್ಲ, ಪಾಪ ಉಳಿದ ರಿಪೋರ್ಟರ್ ಸ್ಥಿತಿ ದೇವರೇ ಗತಿ.

ನಾನೀಗ, ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ. ನಮಗೂ ಜವಾಬ್ದಾರಿ ಇವೆ. ಪತ್ರಕರ್ತರ ಹಿತರಕ್ಷಣೆ ನಮ್ಮ ಹೊಣೆ. ಪತ್ರಕರ್ತರ ಹಿತರಕ್ಷಣೆ ಕಾಪಾಡದೇ ಸತ್ತಾಗ RIP ಹಾಕಿ ಸುಮ್ಮನಾಗೋದು ನಮ್ ಚಾಳಿ ಅಲ್ಲ. ಸಾಯೋದ್ ಒಂದೇ ಸಾರಿ ಒಳ್ಳೇದು ಮಾಡಿ ಸಾಯೋಣ. ಸರ್.

ಬೀಗ ಹಾಕದೇ ಬೀದಿಗೆ ತಂದ್ರೆ ಹೆಂಗೆ: ಅನೇಕ ಟಿವಿಗಳು ಆರ್ಥಿಕ ಸಂಕಷ್ಟ ತೋರಿಸಿ ಬಾಗಿಲು ಹಾಕಿ ಪತ್ರಕರ್ತರನ್ನು ಬೀದಿಗೆ ತಂದರೆ ವಿಶ್ವವಾಣಿ ಬೀಗ ಹಾಕದೇ ಸುದ್ದಿಗಾರರನ್ನು ಬೀದಿಗೆ ತಂದಿದೆ. ಇದು ಯಾರ ಕೃಪೆ. ನಾನು ನೋವುಂಡ ಎಲ್ಲಾ ಜಿಲ್ಲಾ ವರದಿಗಾರರ ಧ್ವನಿಯಷ್ಟೆ. ಸುಮ್ಮನಿರೋ ಚಾಳಿ ನನ್ನದಲ್ಲ. ಕಾನೂನು ಹೋರಾಟಕ್ಕೆ ಬಂದರೆ ನಾನೇ ವಕಾಲತ್ತು ಮಾಡ್ತೇನೆ. ನಮ್ಮ ಸಂಘಟನೆ ಪತ್ರಕರ್ತರ ಧ್ವನಿಯಾಗಿರುತ್ತೆ.20 ವರ್ಷಗಳ ಪತ್ರಿಕೋದ್ಯಮದಲ್ಲಿ ಇಷ್ಟು ಸಂಕಷ್ಟ ನೋವನ್ನು ಯಾರೂ ಕಂಡಿರಲಿಕ್ಕಿಲ್ಲ

ಅಕ್ಷರ ಕಲಿಸಿದ ಗುರು ವಿಶ್ವೇಶ್ವರ ಭಟ್ ಸರ್ ಗೆ ನಮಿಸುತ್ತಾ

ಸದಾ ಪ್ರೀತಿಯೊಂದಿಗೆ.
ವಂದನೆಗಳೊಂದಿಗೆ


ಮಾಲತೇಶ್ ಅರಸ್ ಹರ್ತಿಕೋಟೆ
MA,.MCJ,.BEd,
LLB,.PGDJ (PhD)
ಸೀನಿಯರ್ ಸ್ಟಾಫ್ ಕರೆಸ್ಪಾಡೆಂಟ್ , ವಿಶ್ವವಾಣಿ
ರಾಜ್ಯ ಪ್ರಧಾನ ಕಾರ್ಯದರ್ಶಿ
ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ. ಬೆಂಗಳೂರು.

1 ಕಾಮೆಂಟ್

  1. ವಿಶ್ವವಾಣಿಯಲ್ಲಿ ಕೆಲಸ ಮಾಡಿದ ಎಲ್ಲರಿಗೆ ಹಾಕಿದೆ ಉಂಡೆ ನಾಮದ ವಿವರ ಚೆನ್ನಾಗಿಯೆ ವಿವರಿಸಿದ್ದೀರಿ ಸರ್.ನಾನು ಕೂಡ ಇದೇ ವಿಶ್ವವಾಣಿಯಲ್ಲಿ ಎರಡುವರೆ ವರ್ಷದಿಂದ ತಾಲ್ಲೂಕು ವರದಿಗಾರನಾಗಿ ಕೆಲಸ ಮಾಡಿ ಬಿಡಿಗಾಸು ಕಂಡಿಲ್ಲ,ಅಲ್ಲದೆ ವರದಿಗಾರರೆ ಏಜೆನ್ಸಿ ತೆಗೆದುಕೊಂಡಿದ್ದರಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದೆವೆ‌.ಇದ್ಯಾವುದರ ಬಗ್ಗೆ ಒಂದು ಸೌಜನ್ಯದ ಮಾತು ಆಡದ ಇಡೀ ಸಂಸ್ಥೆಯ ಮಂಡಳಿ ನನ್ನಂತ ನೂರಾರು ಜನರಿಗೆ ಸಾಲದಿಂದ ಕಣ್ಣಲ್ಲಿ ನೀರು ತರಿಸಿದೆ.ಎಲ್ಲ ಸ್ಟ್ರೀಂಜರ್‌ಗಳು ಹಿಡಿಶಾಪ ಹಾಕಿದ್ದೆವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here