ಕಾರ್ಮಿಕ ವರ್ಗ ಸೌಲತ್ತುಗಳಿಂದ ವಂಚಿತ: ರಾಘವೇಂದ್ರ ನೊಂದಣಿ ಪತ್ರ ವಿತರಣೆ

0
71

ವಾಡಿ: ದೇಶದ ಸಂಪತ್ತು ಸೃಷ್ಠಿ ಮಾಡುತ್ತಿರುವ ಅಸಂಖ್ಯಾತ ಕಾರ್ಮಿಕರು, ಸರಕಾರದ ಸೌಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ದುಡಿಯುವ ವರ್ಗ ತನ್ನ ಹಕ್ಕು ಪಡೆದುಕೊಳ್ಳಲು ಸಂಘಟಿತರಾಗಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ರಾಘವೇಂದ್ರ ಎಂ.ಜಿ ಹೇಳಿದರು.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಹಾಗೂ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಕಟ್ಟಡ ಕಾರ್ಮಿಕರಿಗೆ ಸರಕಾರದ ನೊಂದಾಯಿತ ಫಲಾನುಭವಿ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ದೇಶದ ಸಂಪತ್ತು ಉತ್ಪಾದಿಸುವ ಶ್ರಮಜೀವಿಗಳ ಬದುಕು ಬೀದಿಯಲ್ಲಿದೆ. ಮುಗಿಲೆತ್ತರ ಮಹಲುಗಳನ್ನು ಕಟ್ಟುವ ಕಾರ್ಮಿಕರ ಕುಟುಂಬ ರಸ್ತೆ ಬದಿಯ ತಗಡಿನ ಶೆಡ್‌ಗಳಲ್ಲಿ ಉಸಿರಾಡುತ್ತಿದೆ. ಸರಕಾರದ ಯೋಜನೆಗಳು ದಲ್ಲಾಳಿಗಳ ಪಾಲಾಗುತ್ತಿರುವುದರಿಂದ ಕಾರ್ಮಿಕರು ದಿವಾಳಿಯಾಗುತ್ತಿದ್ದಾರೆ. ಅಸಂಘಟಿತ ಗಣಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗಾರ್ಮೆಂಟ್ ಕಾರ್ಮಿಕರು, ಸಿಮೆಂಟ್ ಕಂಪನಿಗಳ ಗುತ್ತಿಗೆ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು, ಆಟೋ ಚಾಲಕರು, ಬೀದಿ ವ್ಯಾಪಾರಿಗಳು ಹೀಗೆ ದುಡಿಯುವ ಎಲ್ಲ ಜನರು ಎಐಯುಟಿಯುಸಿ ನೇತೃತ್ವದಲ್ಲಿ ಸಂಘಟಿತರಾಗುವ ಮೂಲಕ ಹಕ್ಕುಗಳಿಗಾಗಿ ಹೋರಾಟಕ್ಕೆ ಮುಂದಾಗಬೇಕು ಎಂದರು.

ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ನಗರ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಮಾತನಾಡಿ, ಪೂರ್ವ ತಯ್ಯಾರಿಯಿಲ್ಲದೆ ದೇಶದಲ್ಲಿ ಹೇರಲಾದ ಲಾಕ್‌ಡೌನ್‌ನಿಂದ ಲಕ್ಷಾಂತರ ಸಂಖ್ಯೆಯ ವಲಸೆ ಕಾರ್ಮಿಕರು ಸಂಕಷ್ಟಗಳನ್ನು ಅನುಭವಿಸಿದರು. ಊಟು, ನೀರು, ಸಾರಿಗೆ ಸೌಲಭ್ಯಗಳಿಲ್ಲದೆ ಸಾವಿರಾರು ಕಿ.ಮೀ. ನಡೆದು ಹೈರಾಣಾದರು. ಅಡ್ಡ ದಾರಿಗಳ ಮೂಲಕ ನಡೆದು ಬಂದ ಹಲವು ಜನ ಕಾರ್ಮಿಕರು ಬೀದಿ ಹೆಣವಾದರು. ಕೆಲಸದ ಸಂದರ್ಭಗಳಲ್ಲಿ ಅಪಘಾತಕ್ಕೀಡಾದ ಕಟ್ಟಡ ಕಾರ್ಮಿಕರು ಕಚೇರಿಗಳನ್ನು ಅಲೆದರೂ ಪರಿಹಾರ ಸಿಗುತ್ತಿಲ್ಲ. ಬಟ್ಟೆ ನೇಯಿಯುವವರಿಗೆ ತೊಡಲು ಬಟ್ಟೆಯಿಲ್ಲ. ಕೃಷಿ ಕಾರ್ಮಿಕರಾಗಿ ಹೊಲ ಗದ್ದೆಗಳಲ್ಲಿ ಬೆವರು ಸುರಿಸಿ ದೇಹದಲ್ಲಿ ತೊಗಲು ಚರ್ಮ ಮಾತ್ರ ಉಳಿಸಿಕೊಂಡ ಅನ್ನದಾತರು, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಅಧಿಕಾರಕ್ಕೆ ಬರುವ ಯಾವೂದೇ ಪಕ್ಷಗಳಿರಲಿ ಅವು ಜನಸಾಮಾನ್ಯರ ಹಿತಾಸಕ್ತಿ ಕಾಪಾಡುವುದಿಲ್ಲ. ಕೋವಿಡ್ ಹೆಸರಿನಲ್ಲಿ ಆಸ್ಪತ್ರೆಗಳ ಮೂಲಕ ಸರಕಾರ ಸುಲಿಗೆಗೆ ನಿಂತಿದೆ. ಸೋಂಕಿತರ ಹೆಣ ಮನೆಗೆ ಬರುತ್ತಿವೆ ವಿನಹ ಆರೋಗ್ಯ ಸೌಲಭ್ಯ ಒದಗುತ್ತಿಲ್ಲ. ಬ್ರಿಟೀಷರ ಆಡಳಿತಕಿಂತಲೂ ಕ್ರೂರ ಆಡಳಿತ ಇಂದು ಭಾರತದಲ್ಲಿ ಕಾಣುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ ವೀರಭದ್ರಪ್ಪ, ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಜನರು ಧಂಗೆ ಏಳುವ ಕಾಲ ದೂರವಿಲ್ಲ ಎಂದರು.

ಎಐಯುಟಿಯುಸಿ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೇರೂರ ಅಧ್ಯಕ್ಷತೆ ವಹಿಸಿದ್ದರು. ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಭಾಗಣ್ಣ ಬುಕ್ಕಾ, ಅವಿನಾಶ ಒಡೆಯರ್, ವಿಠ್ಠಲ ರಾಠೋಡ, ಸಾಯಿನಾಥ ಚಿಟೇಲಕರ್, ಚಂದ್ರಕಾಂತ ಪಗಲಾಪುರ, ಶ್ರೀಶೈಲ ಕೆಂಚಗುಂಡಿ, ಸುನೀಲ ಕೇದಾರ, ಶರಣಪ್ಪ ಚಿತ್ತಾಪುರಕರ, ಮಲ್ಲಿಕಾರ್ಜುನ ಗೌಂಡಿ, ಗೋವಿಂದ ಎಳವಾರ ಸೇರಿದಂತೆ ನೂರಾರು ಜನ ಕಟ್ಟಡ ಕಾರ್ಮಿಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here