ಶಹಾಬಾದ:ಕಳೆದ ಎರಡು ದಿನಗಳಿಂದ ಕಾಗಿಣಾ ಹಾಗೂ ಭೀಮಾ ನದಿಯಲ್ಲಿ ಉಂಟಾದ ಪ್ರವಾಹದಿಂದ ದ್ವೀಪದಂತಾಗಿದ್ದ ಹೊನಗುಂಟಾ ಹಾಗೂ ಮುತ್ತಗಾ ಗ್ರಾಮದಲ್ಲಿ ನೀರಿನಮಟ್ಟ ಸಂಪೂರ್ಣ ಇಳಿಮುಖವಾಗಿದ್ದರಿಂದ ಶುಕ್ರವಾರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ನದಿಯಲ್ಲಿ ಉಂಟಾದ ಪ್ರವಾಹದಿಂದ ಕುಡಿಯಲು ನೀರಿಲ್ಲದೇ, ಆಹಾವಿಲ್ಲದೇ ಹಾಗೂ ವಿದ್ಯುತ್ ಇಲ್ಲದೇ ಸಂಕಷ್ಟ ಪಟ್ಟಿದ್ದರು.ಅಲ್ಲದೇ ಜೀವವನ್ನು ಉಳಿಸಿಕೊಳ್ಳಲು ಮನೆಯನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದರು. ನೀರಿನ ಮಟ್ಟ ಹೆಚ್ಚಿದಂತೆ ಗ್ರಾಮಸ್ಥರಲ್ಲಿ ಎಲ್ಲಿಲ್ಲದ ಆತಂಕ ಉಂಟಾಗಿತ್ತು.ಆದರೆ ನೀರಿನ ಮಟ್ಟ ಸಂಪೂರ್ಣ ಇಳಿಮುಖವಾದ ಬಳಿಕ ಮತ್ತೊಂದು ಸಮಸ್ಯೆ ಎದುರಾಗಿದೆ. ಪ್ರವಾಹದಲ್ಲಿ ಮುಳುಗಿದ ಮನೆಯಲ್ಲಿ ಮನೆಯ ಸಾಮಾನುಗಳು ಹಾಗೂ ಆಹಾರ ಪದಾರ್ಥಗಳು ಎಲ್ಲಾ ಹಾಳಾಗಿವೆ.ಹತ್ತಾರು ಮನೆಗಳು ಬಿದ್ದರೇ, ಕೆಲವು ಮನೆಗಳ ಗೋಡೆಗಳು ಕುಸಿದಿವೆ.ಅಲ್ಲದೇ ಬಹುತೇಖ ಗ್ರಾಮದ ಮನೆಗಳಲ್ಲಿ ಕೆಸರು ತುಂಬಿಕೊಂಡಿದ್ದು, ಕೆಸರು ತೆಗೆಯಲು ಹರಸಾಹಸ ಪಡಬೇಕಾದ ಪ್ರಸಂಗ ಬಂದಿದೆ. ಹೊನಗುಂಟಾದ ಕೆಲವು ಜನರನ್ನು ನಗರದ ಹಾಸ್ಟೆಲ್ನಲ್ಲಿ ಉಳಿದುಕೊಳ್ಳು ವ್ಯವಸ್ಥೆ ಮಾಡಲಾಗಿದ್ದು, ಮುತ್ತಗಾ ಗ್ರಾಮದ ಬೀಮ ನಗರದ ಕೆಲವು ಗ್ರಾಮಸ್ಥರನ್ನು ಭಂಕೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಾಗೂ ಮುತ್ತಗಾ ಗ್ರಾಮದ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಕಾಗಿಣಾ ನದಿ ಪ್ರವಾಹ ಇಳಿಕೆ ಸಂಚಾರ ಪ್ರಾರಂಭ : ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಂಕರವಾಡಿ ಬ್ರಿಡ್ಜ ಸಂಪೂರ್ಣ ಮುಳುಗಿ ಸಂಚಾರ ವ್ಯವಸ್ಥೆ ಕಡಿತಗೊಂಡಿತ್ತು.ಆದರೆ ಶುಕ್ರವಾರ ಬೆಳಿಗ್ಗೆ ನೀರಿನ ಮಟ್ಟ ಕಡಿಮೆಯಾಗಿದೆ. ಸೇತುವೆಗಿಂತ 4 ಅಡಿ ನೀರಿನ ಮಟ್ಟ ಕೆಳಗಿಳಿದಿದೆ.ನೀರಿನ ಪ್ರವಾಹದಿಂದ ಕುಡಿಯುವ ನೀರಿನ ಪೈಪುಗಳು ಒಡೆದು, ಕಾಂಕ್ರೀಟ ಸಮೇತ ಸೇತುವೆ ಮಧ್ಯದಲ್ಲಿ ಬಿದ್ದಿವೆ.ಅಲ್ಲದೇ ರಸತೆ ಕಳಚಿ ಹೋಗಿದೆ.ಎಲ್ಲೆಂದರಲ್ಲಿ ತಗ್ಗುಗಳ ನಿರ್ಮಾಣವಾಗಿದ್ದರಿಂದ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗಿತ್ತು.ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದಲ್ಲದೇ, ಸೇತುವೆ ಮೇಲಿನ ರಸ್ತೆಯನ್ನು ಸಂಪೂರ್ಣ ದುರಸ್ತಿಗೊಳಿಸಿದ ನಂತರ ಮಧ್ಯಾಹ್ನ 3 ಗಂಟೆಯ ನಂತರ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಯಿತು.
ಪ್ರವಾಹಕ್ಕೆ 60 ಕುರಿಗಳ ಸಾವು: ಭಂಕೂರ ಗ್ರಾಮದ ಹೊರವಲಯದಲ್ಲಿರುವ ಮುತ್ತಗಾ ರಸ್ತೆಯಲ್ಲಿನ ಕುರಿಗಳ ಫಾರ್ಮನಲ್ಲಿ ಪ್ರಹಾದಿಂದ ನೀರು ತುಂಬಿಕೊಂಡಿದ್ದರಿಂದ ಅಲ್ಲಿದ್ದ, ಕುರಿ ಮಾಲೀಕನನ್ನು ಮಂಗಳವಾರ ಸಂಜೆ ಅಗ್ನಿಶಾಮಕ ದಳದವರು ಭೋಟ್ ಮೂಲಕ ರಕ್ಷಣೆ ಮಾಡಿದ್ದಾರೆ.ಆದರೆ ಕತ್ತಲಾಗುತ್ತಿದ್ದರಿಂದ ಕುರಿಗಳನ್ನು ತೆಗೆಯಲು ಆಗದೇ ಹೋಯಿತು.ಶುಕ್ರವಾರ ಪ್ರವಾಹ ಕಡಿಮೆಯಾಗಿ ನೀರು ಸಂಪೂರ್ಣ ಇಳಿಮುಖವಾದ ನಂತರ ಮುಖಂಡ ಗಿರಿರಾಜ ಪವಾರ ಅವರು ಕುರಿ ಫಾರ್ಮ ಹೋಗಿ ನೋಡಿದಾಗ ನೀರಿನಲ್ಲಿ ಮುಳುಗಿ ಎಲ್ಲಾ ಕುರಿಗಳು ಸತ್ತ ದೇಹ ಕಂಡವು.ಸುಮಾರು 60 ಕುರಿಗಳು ಸತ್ತಿದ್ದರಿಂದ ಕುರಿ ಮಾಲೀಕನಿಗೆ ಎಲ್ಲಿಲ್ಲದ ಸಂಕಷ್ಟ ಎದುರಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು. ಕುರಿ ಫಾರ್ಮ ಮಾಲೀಕನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸರಕಾರಕ್ಕೆ ಗಿರಿರಾಜ ಪವಾರ ಒತ್ತಾಯಿಸಿದ್ದಾರೆ.