ಕಲಬುರಗಿ: 371 ನೇ ಕಲಂ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ಮೊಳಕಾಲ್ಮೂರು ಆಗಲಿ ಯಾವುದೇ ಒಂದು ಗ್ರಾಮವಾಗಲಿ ಸೇರಿಸಲಕ ಸಾಧ್ಯವೇ ಇಲ್ಲ.ಸರಕಾರದ ನಿಲುವು ಈ ಬಗ್ಗೆ ಸ್ಪಷ್ಟ ವಾಗಿದೆ.ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಮೊಳಕಾಲ್ಮೂರು ಜನರ ಮನವಿಗೆ ಈ ಬಗ್ಗೆ ಪರಿಶಿಲನೆ ಮಾಡುವುದಾಗಿ ಹೇಳಿರುವುದು ಅವರ ವೈಯಕ್ತಿಕ ವಿಚಾರವೇ ವಿನಃ ಸರ್ಕಾರದ ನಿಲುವು ಅಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸ್ಪಷ್ಟಪಡಿಸಿದರು.
ಇಂದು ನಗರಕ್ಕೆ ಆಗಮಿಸಿದ್ದ ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರನ್ನು ಹಿರಿಯ ಹೋರಾಗಾರರಾದ ಲಕ್ಷ್ಮಣ ದಸ್ತಿ ನೇತೃತ್ವದಲ್ಲಿ ನಿಯೋಗ ಭೇಟಿಯಾಗಿ ಮೊಳಕಾಲ್ಮೂರು ಹೈ.ಕ.ವ್ಯಾಪ್ತಿಗೆ ಸೇರಿಸಬಾರದು ಈ ಕುರಿತು ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕು.
ಅದರಂತೆ ಮುಖ್ಯಮಂತ್ರಿಗಳು ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಿರುವಂತೆ 371ನೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಮಾಡುವುದು, ವಿಶೇಷ ಸ್ಥಾನಮಾನದ ವಿಶೇಷ ಕೋಶ ಪ್ರಾದೇಶಿಕ ಕಚೇರಿ ವಿಭಾಗಿಯ ಕೇಂದ್ರ ಕಲಬುರ್ಗಿಯಲ್ಲಿ ಅಸ್ತಿತ್ವಕ್ಕೆ ತರುವುದು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ವಿವರವಾಗಿ ವಿವರಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸ್ವೀಕರಿಸಿದ ಉಪಮುಖ್ಯಮಂತ್ರಿಗಳು ಆದಷ್ಟು ಶೀಘ್ರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕದ ಸಚಿವರು, ಸಂಸದರು, ಶಾಸಕರು ಪರಿಣಿತ ಹೋರಾಟಗಾರರ ಸಭೆಯನ್ನು ನಡೆಸಿ ವಿಶೇಷ ಸ್ಥಾನಮಾನದ ಅನುಷ್ಠಾನದ ಬಗ್ಗೆ ನಿರ್ಣಯಗಳ ಬಗ್ಗೆ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಬಿ.ಜಿ.ಪಾಟೀಲ,ಮಾಜಿ ಶಾಸಕ ಅಮರನಾಥ್ ಪಾಟೀಲ್ ವಿಶೇಷ ಸ್ಥಾನಮಾದ ಬಗ್ಗೆ ಉಪಮುಖ್ಯಮಂತ್ರಗಳಿಗೆ ಒತ್ತಿ ಹೇಳಿದರು.ಕನ್ನಡ ಭೂಮಿ ಜಾಗೃತಿ ಸಮಿತಿ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಇದ್ದರು.