ಸುರಪುರ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ ವಿರೋಧ ಕಾನೂನು ವಿರೋಧಿಸಿ ದೆಹಲಿಯ ಸರಹದ್ದಿನಲ್ಲಿ ೧೦ಲಕ್ಷ ರೈತರು ಕಳೆದ ೫೫ ದಿನಗಳಿಂದ ನಡೆಸುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಹಾಗೂ ಕೂಡಲೇ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿ ಜ೨೬ ರಂದು ನಗರದಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ರೈತರು ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸುರಪುರ ರೈತ ಹೋರಾಟ ಸಮಿತಿ ಸಂಚಾಲಕ ಮಲ್ಲಯ್ಯ ಕಮತಗಿ ಹೆಮನೂರು ತಿಳಿಸಿದರು.
ತಾಲೂಕಿನ ಬಾದ್ಯಾಪುರ ಹಾಗೂ ವಿವಿಧ ಗ್ರಾಮಗಳಲ್ಲಿ ರ್ಯಾಲಿ ನಿಮಿತ್ತ ಹಮ್ಮಿಕೊಂಡಿರುವ ಜಾಥಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿ ಕಳೆದ ೫೫ ದಿನಗಳಿಂದ ಲಕ್ಷಾಂತರ ರೈತರು ಚಳಿ,ಮಳೆ ಲೆಕ್ಕಿಸದೇ ರಸ್ತೆಯಲ್ಲಿ ಬಿಡಾರ ಹೂಡಿ ರೈತ ಕಾನೂನುಗಳ ವಿರೋಧಿಸಿ ಹೋರಾಟ ನಡೆಸುತ್ತಿದ್ದು ಈಗಾಗಲೇ ೧೦೦ಕ್ಕೂ ಹೆಚ್ಚು ರೈತರು ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ ಆದರೆ ಕೇಂದ್ರ ಸರಕಾರ ರೈತರ ಹೋರಾಟಕ್ಕೆ ಮನ್ನಣೆ ನೀಡದೇ ಮೊಂಡುತನ ಪ್ರದರ್ಶಿಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.
ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೊಳಿಸಿರುವ ರೈತ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಬಲಪಡಿಸಬೇಕು,ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ವ್ಯವಸ್ಥೆ,ಕೃಷಿ ಒಪ್ಪಂದ ನಿಯಮಗಳನ್ನು ಉಲ್ಲಂಘಿಸಿದಲ್ಲಿ ನ್ಯಾಯಾಲಕ್ಕೆ ಹೋಗುವ ಅಧಿಕಾರ ನೀಡುವುದು,ವಿದ್ಯುತ್ ಕ್ಷೇತ್ರ ಖಾಸಗೀಕರಣ ಕೈಬಿಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಆಗ್ರಹಿಸಿದರು, ಜ೨೬ ರಂದು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಪ್ರತಿಭಟನಾ ರ್ಯಾಲಿಯಲ್ಲಿ ರೈತ,ಪ್ರಗತಿ ಪರ,ದಲಿತ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ಸಹ ಸಂಚಾಲಕರಾದ ದೇವಿಂದ್ರಪ್ಪ ಪತ್ತಾರ,ಅಹ್ಮದ ಪಠಾಣ,ಯಲ್ಲಪ್ಪ ಚಿನ್ನಾಕಾರ ಹಾಗೂ ಗ್ರಾಮದ ರೈತರು ಇತರರಿದ್ದರು.