ವಾಡಿ: ಚಿತ್ತಾಪುರ ಮೀಸಲು ಮತಕ್ಷೇತ್ರದ ಬಿಜೆಪಿ ಪಕ್ಷದ ಶಕ್ತಿಯಾಗಿದ್ದ ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ ನಿಧನದಿಂದ ಕಾರ್ಯಕರ್ತರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ. ತಾಲೂಕಿನಲ್ಲಿ ಪಕ್ಷದ ಬಲವರ್ಧನೆಗಾಗಿ ದಿ.ವಾಲ್ಮೀಕಿ ನಾಯಕ ಅವರ ಪುತ್ರ ಯುವ ಮುಖಂಡ ವಿಠ್ಠಲ ನಾಯಕ ಅವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಬೇಕು ಎಂದು ಬಿಜೆಪಿ ವಾಡಿ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ರಾಜ್ಯಧ್ಯಕ್ಷ ನಳೀನಕುಮಾರ ಕಟೀಲ್ ಅವರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿದ ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರನ್ನು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದ ವೀರಣ್ಣ ಯಾರಿ, ವಾಲ್ಮೀಕಿ ನಾಯಕ ನಿಧನದಿಂದ ತಾಲೂಕಿನಲ್ಲಿ ಪಕ್ಷದ ಚಟುವಟಿಕೆಗಳು ಕ್ರೀಯಾಶೀಲತೆ ಕಳೆದುಕೊಂಡಿವೆ. ಚಿತ್ತಾಪುರ ಮತಕ್ಷೇತ್ರದ ಭಾಜಪ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕಿದೆ.
ಕೋವಿಡ್ನಂತಹ ಸಂದಿಗ್ಧ ಪರಸ್ಥಿತಿಯಲ್ಲಿ ತಾಲೂಕಿನ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವಲ್ಲಿ ಕಾರ್ಯಕರ್ತರು ಹೊಸ ಹುಮ್ಮಸ್ಸಿನಿಂದ ಮುಂದಾಗಬೇಕಿದೆ. ತಾಲೂಕು ಆಡಳಿತದ ವಿಫಲತೆಗಳ ವಿರುದ್ಧ ಗಟ್ಟಿಯಾದ ದನಿ ಮೊಳಗಿಸಲು ಪಕ್ಷಕ್ಕೆ ಓರ್ವ ನಾಯಕನ ಅವಶ್ಯಕತೆಯಿದೆ. ಆ ಜವಾಬ್ದಾರಿಯನ್ನು ವಿಠ್ಠಲ ನಾಯಕ ಅವರಿಗೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜಪಾಟೀಲ ರದ್ದೇವಾಡಗಿ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ, ಮುಖಂಡರಾದ ವಿಠ್ಠಲ ನಾಯಕ, ಚಂದ್ರಶೇಖರ ಅವಂಟಿ, ಮಲ್ಲಿಕಾರ್ಜುನ ಇಜಾರ ಇದ್ದರು.