ಕಲಬುರಗಿ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜನಸಂದಣಿ ಆಗದಂತೆ ಎಚ್ಚರವಹಿಸಿ ಲಾಕ್ಡೌನ್ ಯಶಸ್ವಿಗೊಳಿಸಲು ನಿತ್ಯ ಹಗಲಿರುಳು ಶ್ರಮಿಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಮಾಧ್ಯಮದವರಿಗೆ ಜಿಲ್ಲಾ ವಿಶ್ವಕರ್ಮ ಹೋರಾಟ ಸಮಿತಿ ವತಿಯಿಂದ ಅಧ್ಯಕ್ಷ-ಹೋರಾಟಗಾರ ದೇವೇಂದ್ರ ದೇಸಾಯಿ ಕಲ್ಲೂರ ಅವರು ಸ್ವಯಂಪ್ರೇರಣೆಯಿಂದ ಢ್ರೈ ಫುಡ್ಸ್, ಕುಡಿಯುವ ನೀರು, ಮಾಸ್ಕ್ಗಳನ್ನು ಕೊಡುವ ಮೂಲಕ ವಿಶೇಷ ಗಮನ ಸೆಳೆದರು.
ನಂತರ ಮಾತನಾಡಿದ ಜನಪರ ಹೋರಾಟಗಾರ ದೇವೇಂದ್ರ ದೇಸಾಯಿ ಕಲ್ಲೂರ, ನಾವಿದ್ದಷ್ಟು ದಿನ ಸಮಾಜದ ನೋವಿಗೆ ಸ್ಪಂದಿಸುವ ಪ್ರವೃತ್ತಿ ಹೊಂದಿರಬೇಕು. ಕಷ್ಟ ಎಲ್ಲರಿಗೂ ಬರುತ್ತೆ ಸಧ್ಯದ ಪರಿಸ್ಥಿತಿ ಗಂಭೀರವಾಗಿ ಪರಿಗಣಿಸಿ ಉಳ್ಳವರು ಇರಲಾರದವರಿಗೆ ಸಹಾಯ ಮಾಡುವುದೇ ನಿಜವಾದ ಬದುಕು ಎಂದು ಹೇಳಿದರು.
ಸಾಂಸ್ಕøತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಪೊಲೀಸರು ತಮ್ಮ ಪ್ರಾಣ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಾಕ್ಡೌನ್ ಜಾರಿಗೆ ಮತ್ತು ಜನರ ನಿಯಂತ್ರಣಕ್ಕೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ.
ಪೊಲೀಸರು ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸ್ತಾ ಪ್ರಾಣ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಅಂಥ ಪೊಲೀಸ್ ಅಧಿಕಾರಿಗಳ ಬಗ್ಗೆ ಕಾಳಜಿ ವಹಿಸಿ ದೇವೇಂದ್ರ ದೇಸಾಯಿ ಕಲ್ಲೂರ ಅವರು, ಪೌಷ್ಠಿಕಾಂಶವುಳ್ಳ ಢ್ರೈ ಫುಡ್ಸ್ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಡಿ.ಬಡಿಗೇರ, ಪ್ರಮುಖರಾದ ಸಿದ್ಧಾರೂಢ ಕಲ್ಲೂರ, ಓಂಕಾರ ಕಲ್ಲೂರ , ಶಿವಲಿಂಗ ಹಳಿಮನಿ ಸೇರಿದಂತೆ ಪೊಲೀಸ್ ಇಲಾಖೆಯ ಅನೇಕ ಹಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಪತ್ರಕರ್ತರು ಉಪಸ್ಥಿತರಿದ್ದರು.