ಸುರಪುರ: ನಗರದ ರಂಗಂಪೇಟೆಯ ದೊಡ್ಡ ಬಜಾರದ ಸರ್ವೇ ನಂಬರ್ ೭೩/೨ ರಲ್ಲಿ ಅಂದಾಜು ೬ ಎಕರೆ ಸರಕಾರಿ ಗೌಠಾಣ ಭೂಮಿಯನ್ನು ಒತ್ತುವರಿ ಮಾಡಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಗೋಗಿಪೇಠ ಅವರು ಲೋಕಾಯುಕ್ತರಿಗೆ ದೂರುನೀಡಿದ್ದರ ಹಿನ್ನಲೆಯಲ್ಲಿ ಗುರುವಾರ ಬೆಳಿಗ್ಗೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ದೊಡ್ಡ ಬಜಾರ ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಕಾರ್ಯ ನಡೆಸಿದರು.
ತಹಶೀಲ್ದಾರರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಸ್ಥಳಿಯ ಜನರು ಆಗಮಿಸಿ ನಾವು ಇಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದೇವೆ. ಇಲ್ಲಿ ಬಂದು ಯಾಕೆ ಸರ್ವೇ ಮಾಡುತ್ತಿದ್ದೀರಾ ಎಂದು ಜನರು ವಿರೋಧದ ಮಾತುಗಳನ್ನಾಡಲು ಆರಂಭಿಸುತ್ತಿದ್ದಂತೆ,ತಹಸೀಲ್ದಾರರು ಪ್ರತಿಕ್ರೀಯೆ ನೀಡಿ ಸಾಮಾಜಿಕ ಕಾರ್ಯಕರ್ತರು ಲೋಕಾಯುಕ್ತಕ್ಕೆ ದೂರು ನೀಡಿದ್ದರಿಂದ ಪ್ರಾದೇಶಿಕ ಆಯುಕ್ತರ ಆದೇಶದಂತೆ ಸರ್ವೇ ನಡೆಸಲಾಗಿದ್ದು ತಾವು ಯಾರೂ ಸರ್ವೇ ಕಾರ್ಯದ ಕುರಿತು ಅಡ್ಡಿಪಡಿಸುವ ಮಾತನಾಡಬೇಡಿ.ಸರಕಾರದ ಆದೇಶದಂತೆ ಸರ್ವೇ ಮಾಡಲಾಗುತ್ತದೆ.ಇದು ಕಂದಾಯ ಇಲಾಖೆಯ ಸ್ಥಳವಾಗಿದ್ದರೆ ಇದರ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.ಅಲ್ಲದೆ ತಾವು ಯಾರಾದರೂ ವಿನಾಃ ಕಾರಣ ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಿದಲ್ಲಿ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅನೇಕ ಜನರು ಆಗಮಿಸಿ ನಾವು ಅನೇಕ ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ,ಅಲ್ಲದೆ ವ್ಯಾಪಾರ ಮಾಡಿಕೊಂಡಿದ್ದೇವೆ. ನಾವು ಪ್ರತಿ ವರ್ಷ ನಗರಸಭೆಗೆ ತೆರಿಗೆಯನ್ನು ಪಾವತಿಸುತ್ತಿರುವುದಾಗಿ ತಿಳಿಸಿದರು.ಆದರೆ ಇದ್ಯಾವುದಕ್ಕೂ ಕೇರ್ ಮಾಡದೆ ಸರ್ವೇ ಕಾರ್ಯ ಮುಂದುವರೆಸಲಾಯಿತು.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ವೆಂಕಟೇಶ ಕಲಬುರಗಿಕರ್,ಕಂದಾಯ ನಿರೀಕ್ಷಕರು ,ಸಿರಸ್ಥೆದಾರ ಸೋಮನಾಥ ನಾಯಕ, ಶ್ವೇತಾ,ಕರ ವಸೂಲಿಗಾರ ಮಕ್ಸೂದ್ ಬುಖಾರಿ,ಗ್ರಾಮ ಲೆಕ್ಕಾಧಿಕಾರಿ ಮಲ್ಲಮ್ಮ,ಭೂಮಾಪಕರಾದ ಶಿವಾನಂದ ಗೋಗಿ,ತಹಸೀಲ್ ಕಚೇರಿಯ ಚನ್ನಬಸವ,ಸಹಾಯಕರಾದ ಶಿವಶರಣಪ್ಪ ಸಜ್ಜನ್,ಮಲ್ಲಪ್ಪ ರತ್ತಾಳ ಸೇರಿದಂತೆ ಅನೇಕರಿದ್ದರು.