ಸುರಪುರ: ನಗರದ ರಂಗಂಪೇಟೆಯ ಹಸನಾಪುರ ಸರ್ವೇ ನಂಬರ್ ೭೩/೧ ಹಾಗು ೭೩/೨ ರಲ್ಲಿ ಜಾಗ ಅತಿಕ್ರಮಣವಾಗಿರುವ ಕುರಿತು ಪ್ರಾದೇಶಿಕ ಆಯುಕ್ತರಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲಿಸಿರುವ ದೂರಿನ ಅನ್ವಯ ಕಳೆದ ಎರಡು ದಿನಗಳ ಹಿಂದೆ ಸ್ಥಳ ಪರಿಶೀಲನೆ ಕಾರ್ಯ ನಡೆಸಲಾಗಿತ್ತು.ಅದರ ಮುಂದುವರೆದ ಭಾಗವಾಗಿ ಸೋಮವಾರ ಬೆಳಿಗ್ಗೆ ನಗರಸಭೆ ಸಿಬ್ಬಂದಿಗಳು ರಂಗಂಪೇಟೆಯ ದೊಡ್ಡ ಬಜಾರದಲ್ಲಿ ಅತಿಕ್ರಮಣ ಮಾಡಿಕೊಂಡಿರುವವರಿಗೆ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.
ಸರ್ವೇ ನಂಬರ್ ೭೩/೧ ಮತ್ತು ೭೩/೨ ರಲ್ಲಿ ಮನೆ ಅಂಗಡಿ ಹಾಗು ಶಾದಿಮಹಲ್ ಸೇರಿದಂತೆ ವಿವಿಧ ಕಟ್ಟಡಗಳನ್ನು ನಿರ್ಮಿಸಿರುವವರಿಗೆ ನಗರಸಭೆ ಸಿಬ್ಬಂದಿಗಳು ಮನೆ ಮನೆ ಭೇಟಿ ನೀಡಿ ನೋಟಿಸ್ ನೀಡುವ ಮೂಲಕ ಮೂರು ದಿನಗಳಲ್ಲಿ ನಿಮ್ಮಲ್ಲಿರುವ ದಾಖಲೆಗಳನ್ನು ನಗರಸಭೆಗೆ ಸಲ್ಲಿಸಬೇಕು,ಇಲ್ಲವಾದಲ್ಲಿ ಮುಂದಿನ ಎಲ್ಲಾ ಆಗುಹೋಗುಗಳಿಗೆ ನೀವೆ ಜವಬ್ದಾರರಾಗುವಿರಿ ಎಂಬ ಎಚ್ಚರಿಕೆಯುಳ್ಳ ನೋಟಿಸ್ ನೀಡಲಾಗುತ್ತಿದೆ.
ಇನ್ನೂ ಕೆಲ ಮನೆಗಳು ಮತ್ತು ಅಂಗಡಿ ಕಟ್ಟಡಗಳಲ್ಲಿ ಯಾರೂ ಇಲ್ಲದಿರುವ ಮನೆಗಳಿಗೆ ನಗರಸಬೆ ಸಿಬ್ಬಂದಿಗಳು ನೋಟಿಸ್ ಅಂಟಿಸುವ ಮೂಲಕ ಮನೆಯವರಿಗೆ ಸೂಚನೆ ನೀಡಿದ್ದಾರೆ.ಅನೇಕ ಮನೆಗಳ ಜನರು ನೋಟಿಸ್ಗಳನ್ನು ಪಡೆದುಕೊಂಡು ಮೂರು ದಿನಗಳಲ್ಲಿ ನಗರಸಭೆಗೆ ದಾಖಲೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಅಧಿಕಾರಿಗಳಾದ ವೆಂಕಟೇಶ ಕಲಬುರಗಿಕರ್,ಶ್ವೇತಾ,ಕರವಸೂಲಿಗಾರ ಮಕ್ಸೂರ್ ಬುಖಾರಿ,ವಿಎ ಮಲ್ಲಮ್ಮ,ಭೂಮಾಕರಾದ ಶಿವಾನಂದ ಗೋಗಿ,ಚನ್ನಬಸವ,ಶವಶರಣಪ್ಪ ಸಜ್ಜನ್,ಮಲ್ಲಪ್ಪ ರತ್ತಾಳ,ಮಾಣಿಕ್,ಮಂಜುನಾಥ ಸೇರಿದಂತೆ ಅನೇಕರಿದ್ದರು.