ಶಹಾಬಾದ: ಸಂವಿಧಾನದ ಆಶೋತ್ತರಗಳು, ಮೌಲ್ಯಗಳನ್ನು ಅರಿತು ಅದರಂತೆ ಎಲ್ಲರೂ ನಡೆಯಬೇಕಿದೆ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ಅವರು ಶುಕ್ರವಾರ ನಗರಸಭೆಯಿಂದ ಆಯೋಜಿಸಲಾದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು.
ಭಾರತದ ಸಂವಿಧಾನದ ಮೂಲ ತತ್ವ ವಿವಿಧತೆಯಲ್ಲಿ ಏಕತೆಯಾಗಿದೆ.ಸಂವಿಧಾನ ನಮ್ಮ ಧರ್ಮಗ್ರಂಥವಿದ್ಧಂತೆ.ನಮ್ಮ ಸಂವಿಧಾನದ ಆಶಯ ಆಶೋತ್ತರಗಳು ಜಗತ್ತಿನ ಹಲವು ಯಶಸ್ವಿ ಪ್ರಜಾಪ್ರಭುತ್ವ ದೇಶಗಳ ಸಂವಿಧಾನದಲ್ಲೂ ಅಳವಡಿಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಉತ್ತಮ ಸಂವಿಧಾನ ಎಂದು ಹೇಳಿದರು.
ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ ಮಾತನಾಡಿ, ಈ ಸಂವಿಧಾನ ರಚನೆಯ ಹಿಂದೆ ಅನೇಕ ಮಹಾನ್ ವ್ಯಕ್ತಿಗಳ ಶ್ರಮವಿದೆ. ಆ ಮಹಾನ್ ಪುರುಷರು ಸಂಕಷ್ಟಗಳನ್ನು ಎದುರಿಸಿ ನಮಗೆ ಬದುಕು ಹಕ್ಕನ್ನು ಕಲ್ಪಿಸಿದ್ದಾರೆ.ಅದರಲ್ಲೂ ಡಾ.ಅಂಬೇಡ್ಕರ್ ಸಾಕಷ್ಟು ಅಪಮಾನಕ್ಕೆ ಗುರಿಯಾಗಿದ್ದರೂ ದೇಶಕ್ಕೆ ಒಂದು ಉತ್ತಮ ಕೊಡುಗೆ ನೀಡಿದ್ದಾರೆ. ಆ ಸಂವಿಧಾನ ನಮಗೆ ದಾರಿದೀಪವಾಗಿದೆ.ನಾವು ಕೂಡ ಸಂವಿಧಾನದ ಹಾದಿಯಲ್ಲಿ ನಡೆಯಬೇಕಿದೆ ಎಂದು ಹೇಳಿದರು.
ನಗರಸಭೆಯ ಸದಸ್ಯ ನಾಗರಾಜ ಕರಣಿಕ್, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಸಮುದಾಯ ಸಂಘಟಕ ಅಧಿಕಾರಿ ರಘುನಾಥ ನರಸಾಳೆ, ಸಂಜುಕುಮಾರ ಭಾವಿಕಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.