ಶಹಾಬಾದ: ಚಿತ್ತಾಪೂರ ಮತಕ್ಷೇತ್ರದ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ದಿಗೆ ನಾನು ಸದಾ ಸಿದ್ಧ ಎಂದು ಚಿತ್ತಾಪೂರ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಅವರು ಗುರುವಾರ ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ಕಾರ್ಯಕ್ರಮವನ್ನು ನೆರವೇರಿಸಿ ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿದರು.
ಇದನ್ನೂ ಓದಿ: ಕಲಬುರಗಿಯಲ್ಲಿ ಸಿಎಂ ವಾಹನಕ್ಕೆ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಾಕರ್ತರ ಬಂಧನ
ಈಗಾಗಲೇ ಹೊನಗುಂಟಾ ಗ್ರಾಮದಲ್ಲಿ ರೂ 63.75 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ನಾಲ್ಕು ಶಾಲೆ ಕೋಣೆ ಹಾಗೂ ಶೌಚಾಲಯ ಉದ್ಘಾಟನೆ, ಶಹಾಬಾದದಿಂದ ವಡ್ಡರವಾಡದವರೆಗೆ ರೂ 200 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು, ವಡ್ಡರವಾಡದಿಂದ ಹೊನಗುಂಟಾವರೆಗೆ ರೂ 100 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗೆ ಅಡಿಗಲ್ಲು ಹಾಗೂ ಹೊನಗುಂಟಾ ಗ್ರಾಮದಲ್ಲಿ ರೂ 24 ವೆಚ್ಚದಲ್ಲಿ ನಿರ್ಮಾಣವಾಗಿರುವ ಉರ್ದು ಶಾಲೆಗೆ 2 ಕೋಣೆಗಳ ಉದ್ಘಾಟನೆ ಮಾಡಲಾಗಿದೆ.ನಿಮ್ಮೆಲ್ಲರ ಋಣ ನನ್ನ ಮೇಲಿದೆ. ಅದನ್ನು ತೀರಿಸಲು ನಾನು ಅಭಿವೃದ್ದಿ ಕೆಲಸ ಮಾಡುತ್ತಿದ್ದೇನೆ. ಇದು ನನ್ನ ಕರ್ತವ್ಯ.
ದೇಶದಲ್ಲಿ ಪ್ರಸ್ತುತ ವಾತಾವರಣ ಸರಿಯಿಲ್ಲ. ಕೆಲವರು ಸಂವಿಧಾನ ವಿರೋಧಿಗಳಾಗಿದ್ದು. ಸಂವಿಧಾನ ಬದಲಾವಣೆಗೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ ಖರ್ಗೆ ಡಾ ಅಂಬೇಡ್ಕರ ಅವರ ಪ್ರಕಾರ, ಜಾತಿಜಾತಿಗಳನಡುವೆ ಧರ್ಮಗಳ ಮಧ್ಯ ಅಸೂಯೆ ಉಂಟು ಮಾಡಿವವರೇ ನಿಜವಾದ ದೇಶದ್ರೋಹಿಗಳು ಎಂದರು. ಬಿಜೆಪಿಯವರು ಇಲ್ಲಿ ಬಂದಾಗ ಹನುಮಾನ್ ಚಾಲೀಸ್ ಹೇಳಲು ಹೇಳಿ. ಅದು ಕೂಡಾ ಅವರಿಗೆ ಹೇಳಲು ಬರುವುದಿಲ್ಲ. ಅಂತದರಲ್ಲಿ ಜನರಿಗೆ ಧರ್ಮ ಹಾಗೂ ದೇವರು ಎಂದು ವಾತಾವರಣವನ್ನು ಕಲುಷಿತಗೊಳಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಎಸ್ ಡಿಎ ಮತ್ತು ಎಫ್ ಡಿಎ ಪಟ್ಟಿ ಬಿಡುಗಡೆಗೆ ಆಗ್ರಹಿಸಿ ಸಿಎಂಗೆ ಕನ್ನಡ ಭೂಮಿ ಮನವಿ
ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಕೊಡಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು. ಅಸಲಿ ವಿಷಯಗಳನ್ನು ಮರೆಮಾಚುತ್ತಾ ರಾಜ್ಯ ಸರ್ಕಾರ ಜಟ್ಕಾ ಕಟ್, ಹಲಾಲ್ ಕಟ್,ಅಜಾನ್, ಮುಂತಾದ ವಿಷಯಗಳನ್ನು ಜನರ ನಡುವೆ ಹರಿಬಿಡುತ್ತಿವೆ ಎಂದು ದೂರಿದ ಶಾಸಕರು ಈ ಸರ್ಕಾರ ಕಮಿಷನ್ ಹೊಡೆಯುವುದರಲ್ಲೇ ಮಗ್ನವಾಗಿದೆ. ರಾಜ್ಯದ ಜನರ ದುಡಿದ ದುಡ್ಡು ನಿಮಗೆ ಸದ್ಭಳಕೆಯಾಗುತ್ತಿಲ್ಲ ಎಂದು ಆರೋಪಿಸಿದರು.
ಮಾಜಿ ಜಿಪಂ ಸದಸ್ಯ ಶಿವಾನಂದ ಪಾಟೀಲ, ಮಾಜಿ ಜಿಪಂ ಸದಸ್ಯ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿದರು. ವೇದಿಕೆಯ ಮೇಲೆ, ಹೊನಗುಂಟಾ ಗ್ರಾಮಪಂಚಾಯತ ಅಧ್ಯಕ್ಷರಾದ ಭೀಮಬಾಯಿ, ಮಾಜಿ ಜಿಪಂ ಸದಸ್ಯ ಶಿವಾನಂದ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಹೆಬೂಬ್ ಸಾಹೇಬ, ಭೀಮುಗೌಡ ಖೇಣಿ, ರಮೇಶ ಮರಗೋಳ, ದೇವೆಂದ್ರ ಕಾರೊಳ್ಳಿ, ಸಿದ್ದು ಪಾಟೀಲ, ಸುಭಾಷ ಯಾಮಾರ, ಮುಕ್ರುಂ ಪಟೇಲ್,ಮೆಹಮೂದ ಸಾಹೇಬ, ಸುನೀಲ ದೊಡ್ಡಮನಿ,ಗಿರೀಶ ಕಂಬಾನೂರ,ಸುರೇಶ ಮೆಂಗನ, ಮುಜಾಹಿದ್ ಹುಸೇನ್,ತಹಸೀಲ್ದಾರ ಸುರೇಶ ವರ್ಮಾ, ಅಜಿತಕುಮಾರ ಪಾಟೀಲ, ತರನಳ್ಳಿ ಅಪ್ಪುಗೌಡ, ಕಿರಣ ಚವ್ಹಾಣ, ನಾಗೇಂದ್ರ ನಾಟೇಕಾರ,ತಾಪಂ ಇಓ ಬಸಲಿಂಗಪ್ಪ ಡಿಗ್ಗಿ, ಪಶು ವೈದ್ಯರಾದ ಡಾ.ನೀಲಪ್ಪ ಪಾಟೀಲ ಸೇರಿದಂತೆ ಅನೇಕರು ಇದ್ದರು.
ಪೀರಪಾಶಾ ನಿರೂಪಿಸಿದರು, ಭೀಮುಗೌಡ ಖೇಣಿ ಪ್ರಾಸ್ತಾವಿ ನುಡಿದರು, ಮಲ್ಕಪ್ಪ ಮುದ್ದಾ ಸ್ವಾಗತಿಸಿದರು, ಶಿವಕುಮಾರ ಕಾರೊಳ್ಳಿ ವಂದಿಸಿದರು.
ಇದನ್ನೂ ಓದಿ: ಪಿ.ಎಸ್.ಐ.ನೇಮಕಾತಿ ಅಕ್ರಮ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿ.ಎಂ