ಶಹಾಬಾದ: ತಾಲೂಕಿನ ಭಂಕೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಸೇರಿ ಮಕ್ಕಳನ್ನು ಸ್ವಾಗತಿಸಿ ಸಂತಸ ಸಂಭ್ರಮದಿಂದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಿ, ಸಿಹಿ ಹಂಚಿ ಮಕ್ಕಳನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಖ್ಯಗುರು ಶಂಕರ ಜಾಧವ ಮಾತನಾಡಿ, ಶಾಲೆಗಳು ಪ್ರಾರಂಭವಾಗಿದ್ದು, ಮಕ್ಕಳು ದಿನನಿತ್ಯ ಶಾಲೆಗೆ ಬರಬೇಕು.ಅಲ್ಲದೇ ಮನೆಯಲ್ಲಿ ಕುಳಿತ ನಿಮ್ಮ ಗೆಳೆಯರನ್ನು ಶಾಲೆಗೆ ಬರುವಂತೆ ಪ್ರೇರೇಪಿಸಬೇಕು. ೧೪ ದಿನಗಳ ಮಳೆ ಬಿಲ್ಲು ಕಾರ್ಯಕ್ರಮಗಳು ೮ ಮತ್ತು ೯ನೇ ತರಗತಿಗಳಿಗೆ ಈ ವರ್ಷ ನಡೆಯಲಿದೆ.ಶಾಲೆಗೆ ದಿನನಿತ್ಯ ಬರುವುದರಿಂದ ಎಲ್ಲಾ ಶಿಕ್ಷಕರು ಹೇಳಿದ ಪಾಠ ಸರಿಯಾಗಿ ತಿಳಿದುಕೊಳ್ಳಲು ಸಹಾಯಕವಾಗುತ್ತದೆ.ಆದ್ದರಿಂದ ಮಕ್ಕಳು ಸರಿಯಾಗಿ ಅಭ್ಯಾಸ ಮಾಡುವುದರ ಮೂಲಕ ಕಲಿತ ಶಾಲೆಗೆ, ಹೆತ್ತ ತಂದೆ-ತಾಯಿಗೆ ಹಾಗೂ ಗುರುಗಳಿಗೆ ಕೀರ್ತಿ ತರುವಂಥ ಕೆಲಸ ಮಾಡಬೇಕೆಂದು ಹೇಳಿದರು.
ಇದನ್ನೂ ಓದಿ:ತಳಿರು, ತೋರಣಗಳನ್ನು ಕಟ್ಟಿ ಶಾಲಾ ಮಕ್ಕಳಿಗೆ ಬರಮಾಡಿಕೊಂಡ ಶಿಕ್ಷಕ ವರ್ಗ
ಶಿಕ್ಷಕ ವಿಷ್ಣುತೀರ್ಥ ಆಲೂರ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಸರಕಾರಿ ಶಾಲೆಗಳಿಗೆ ಹೆಚ್ಚಿನ ಮಹತ್ವ ಹಾಗೂ ದಾಖಲಾತಿ ಹೆಚ್ಚಿದೆ. ಶಿಕ್ಷಣ ವ್ಯವಸ್ಥೆಗೆ ಸರಕಾರ ಕೋಟಿಗಟ್ಟಲೇ ಹಣವನ್ನು ಖರ್ಚು ಮಾಡುತ್ತಿದೆ.ಅಗತ್ಯ ಸೌಲಭ್ಯಗಳನ್ನು ನೀಡುತ್ತಿದೆ.ಆದ್ದರಿಂದ ಮಕ್ಕಳು ಹೆಚ್ಚು ಕ್ರೀಯಾಶೀಲರಾಗಿ ಕಲಿಯಬೇಕು.ಅಲ್ಲದೇ ಶಿಕ್ಷಕರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸರಿಯಾದ ಶಿಕ್ಷಣ ನೀಡುವಲ್ಲಿ ಮುಂದಾಗಬೇಕು.ಪ್ರಸಕ್ತ ವರ್ಷ ೮ನೇ ಮತ್ತು ೯ನೇ ತರಗತಿ ಮಕ್ಕಳಿಗೆ ಕಲಿಕಾ ಚೇತರಿಗೆ ಶೈಕ್ಷಣಿಕ ವರ್ಷವಾಗಿ ಸರಕಾರ ಘೋಷಣೆ ಮಾಡುವ ಮೂಲಕ ಅವರಲ್ಲಿ ಶೈಕ್ಷಣಿಕ ಬುನಾದಿ ಹಾಕಲು ಮುಂದಾಗಿದೆ ಎಂದು ಹೇಳಿದರು.
ಇದೇ ಈ ಸಂದರ್ಭದಲ್ಲಿ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಎಸ್.ಡಿ.ಎಮ್.ಸಿ ಅಧ್ಯಕ್ಷೆ ಭೀಮಬಾಯಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ನಾಗೇಂದ್ರ, ಶಿಕ್ಷಕರಾದ ಎನ್.ಡಿ.ಜಕಾತೆ, ಈರಣ್ಣ ಕೆಂಭಾವಿ, ದತ್ತಪ್ಪ ಕೋಟನೂರ್, ಶಾಂತಮಲ್ಲ ಶಿವಭೋ, ಅನೀಲಕುಮಾರ, ಸೀತಮ್ಮ.ಎನ್,ಶಶಿಕಲಾ, ಸಯ್ಯದ್ ಯುನೂಸ್, ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಪಾಲಕರು ಇದ್ದರು.
ಇದನ್ನೂ ಓದಿ: ಮಕ್ಕಳಿಗೆ ಸರಿಯಾದ ಹಾಕಬೇಕಾಗಿರುವುದು ಶಿಕ್ಷಕರ ಕರ್ತವ್ಯ: ಕರಣಿಕ್