ವಾಡಿ: ಹಾಲು ಉತ್ಪನ್ನಗಳ ಮೇಲೆ ಕೇಂದ್ರ ಜಿಎಸ್ಟಿ ಮಂಡಳಿ ಶೇ.೫ ರಷ್ಟು ತೆರಿಗೆ ವಿಧಿಸಿದ ಕ್ರಮವನ್ನು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷ ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಸ್ಯುಸಿಐ (ಸಿ) ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣ ಹಾಕದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ಕಿ, ಜೋಳ, ರಾಗಿ ಸೇರಿದಂತೆ ಇತರ ಆಹಾರ ಧಾನ್ಯಗಳ ಮೇಲೆ ತೆರಿಗೆ ವಿಧಿಸುವ ಜತೆಗೆ ಮೊಸರಿನಂತಹ ಡೈರಿ ಉತ್ಪನ್ನಗಳ ಮೇಲೆ ಜಿಎಸ್ಟಿ ಹೊಡೆತ ಬಿದ್ದಿದೆ. ಹಣದುಬ್ಬರದಿಂದ ಜನತೆ ತತ್ತರಿಸಿದ್ದಾರೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಬೆಲೆ ಏರಿಕೆಯ ಪ್ರಮಾಣದಲ್ಲಿ ಜನಸಾಮಾನ್ಯರ ಆದಾಯ ಹೆಚ್ಚಳವಾಗಿಲ್ಲ. ಈಗ ತಿನ್ನುವ ಅನ್ನದ ಮೇಲೂ ತೆರಿಗೆ ವಿಧಿಸುವ ಮೂಲಕ ಕ್ರೂರ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ದೂರಿದ್ದಾರೆ.
ಹೆಚ್ಚಿಸಲಾದ ತೆರಿಗೆ ಆದಾಯ ಜು.೧೮ ರಿಂದ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಇದರಿಂದ ಕಿಲೋ ಅಕ್ಕಿಗೆ ರೂ.೩ ರಿಂದ ೪ಕ್ಕೆ ಏರಿಕೆಯಾಗಲಿದೆ. ಪ್ರತಿ ಲೀಟರ್ ಮೊಸರಿಗೆ ರೂ.೨ ರಿಂದ ರೂ.೩ಕ್ಕೆ ಏರಿಕೆಯಾಗಲಿದೆ. ಇದರಿಂದ ರೈತರು ಮತ್ತು ಗ್ರಾಹಕರು ತೊಂದರೆ ಅನುಭವಿಸಬೇಕಾಗುತ್ತದೆ. ಆಹಾರ ಪದಾರ್ಥಗಳ ವ್ಯಾಪಾರದಲ್ಲೂ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡುವುದಕ್ಕಾಗಿ ಈ ತೀರ್ಮಾನ ಕೈಗೊಂಡು ಜನರಿಗೆ ದ್ರೋಹ ಬಗೆಯಲಾಗಿದೆ ಎಂದು ನೇರವಾಗಿ ಆಪಾದಿಸಿರುವ ಕಾಮ್ರೇಡ್ ವೀರಭದ್ರಪ್ಪ, ಜೀವನಾವಶ್ಯಕ ವಸ್ತುಗಳ ಮೇಲಿನ ಈ ತೆರಿಗೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.