ಕಲಬುರಗಿ: ಆಯುಕ್ತರ ನಡೆ-ವಾರ್ಡ್ ಕಡೆ ಅಂಗವಾಗಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಅವರು ಸೋಮವಾರ ಕಲಬುರಗಿ ನಗರದ ವಾರ್ಡ್ ಸಂಖ್ಯೆ-54 (ಗಾಬರೇ ಲೇಔಟ್ ಪ್ರದೇಶ)ದಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆ ಆಲಿಸಿದರು.
ಆಯುಕ್ತರಿಗೆ ಕಾರ್ಪೋರೇಟರ್ ನಿಂಗಮ್ಮ ಕಟ್ಟಿಮನಿ ಸಾಥ್ ನೀಡಿದರು. ಪಾಲಿಕೆ ಆಯುಕ್ತರನ್ನು ಕಂಡ ಸ್ಥಳೀಯ ನಿವಾಸಿಗಳು ವಾರ್ಡ್ನಲ್ಲಿನ ರಸ್ತೆ, ಒಳಚರಂಡಿ, ಬೀದಿ ದೀಪ, ಕುಡಿಯುವ ನೀರಿನ ಸಮಸ್ಯೆಗಳು ಬಗೆಹರಿಸಲು ಕೋರಿದರು. ಚರಂಡಿಯಲ್ಲಿ ಕಸ ತುಂಬಿ ಮುಚ್ಚಿಕೊಂಡಿದ್ದರಿಂದ ರೊಚ್ಚು ನೀರು ಹೋಗಲು ದಾರಿ ಇಲ್ಲದಂತಾಗಿದೆ. ಇದಲ್ಲದೆ ವಾರ್ಡ್ನಲ್ಲಿನ ಉದ್ಯಾನವನ ಒತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಮುಕ್ತವಾಗಿಸುವಂತೆ ಕೇಳಿಕೊಂಡರು.
ಸಾರ್ವಜನಿಕರು ಸಮಸ್ಯೆ ಆಲಿಸಿದ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಅವರು ಪ್ರತಿಯೊಂದು ಸಮಸ್ಯೆಗಳನ್ನು ಬಗೆಹರಿಸಲಾಗುವುದು. ನಿವಾಸಿಗಳ ಸಮಸ್ಯೆ ಅರಿಯಲೆಂದೇ ಆಯುಕ್ತರ ನಡೆ-ವಾರ್ಡ್ ಕಡೆ ಕಾರ್ಯಕ್ರಮ ಆಯೋಜಿಸಿದೆ ಎಂದ ಅವರು ನಗರದ ಸ್ವಚ್ಛತೆಗೆ ಪಾಲಿಕೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದರು.
ಈ ಸಂದರ್ಭದಲ್ಲಿ ಪಾಲಿಕೆಯ ಉಪ ಆಯುಕ್ತ(ಅಭಿವೃದ್ಧಿ) ಆರ್.ಪಿ.ಜಾಧವ, ಕಾರ್ಯನಿರ್ವಾಹಕ ಅಭಿಯಂತ ಶಿವಣಗೌಡ ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ(ಪರಿಸರ) ಮುನಾಫ್ ಪಟೇಲ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.