- ಆಹಾರ ನಾಗರಿಕ ಸರಬರಾಜು ನಿಮಗದ ಜಿಲ್ಲಾ ವ್ಯವಸ್ಥಾಪಕರ ಭೇಟಿ ನೀಡಿ ಪರಿಶೀಲನೆ
ಸುರಪುರ:ನಗರದ ವಿವಿಧ ಕಡೆಗಳಲ್ಲಿರುವ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿದ್ದ ಪಡಿತರ ಧಾನ್ಯಗಳ ಚೀಲಗಳ ಸರಬರಾಜಿನಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪದಲ್ಲಿ ವ್ಯವಸ್ಥಾಪಕನ ಮಾನತ್ತು ಪ್ರಕರಣಕ್ಕೆ ಸಂಬಂಧಿಸಿ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರು ಉಗ್ರಾಣಗಳಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದರು.
ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದ ಬಳಿಯಲ್ಲಿನ ಎಪಿಎಮ್ಸಿ ಆವರಣದಲ್ಲಿನ ಉಗ್ರಾಣ ಹಾಗೂ ಕುಂಬಾರಪೇಟ ಎಪಿಎಮ್ಸಿ ಆವರಣದಲ್ಲಿನ ಎರಡು ಗೋದಾಮುಗಳಿಗೆ ಭೇಟಿ ನೀಡಿ ದಾಸ್ತಾನು ಇರುವ ಚೀಲಗಳ ಎಣಿಕೆಯನ್ನು ನಡೆಸಿದರು.ಈಗಾಗಲೇ ಗೋದಾಮುಗಳಲ್ಲಿನ 612 ಕ್ವಿಂಟಾಲ್ ಅಕ್ಕಿ,53 ಕ್ವಿಂಟಾಲ್ ಗೋಧಿ,17 ಕ್ವಿಂಟಾಲ್ ತೊಗರಿ ಬೇಳೆ ವ್ಯತ್ಯಾಸ ಕಂಡುಬಂದಿದೆ ಎಂದು ವ್ಯವಸ್ಥಾಪಕ ಸಿದ್ದಣ್ಣ ಎನ್ನುವವರನ್ನು ಜಿಲ್ಲಾಧಿಕಾರಿಗಳು ಅಮಾನತ್ತುಗೊಳಿಸಿದ್ದರಿಂದ ಜಿಲ್ಲಾ ವ್ಯವಸ್ಥಾಪಕರಾದ ಶಿಲ್ಪಾ ಹಾಗೂ ಇತರೆ ಸಿಬ್ಬಂದಿಗಳು ಮತ್ತು ತಹಸೀಲ್ದಾರ್ ಕಚೇರಿಯ ಆಹಾರ ಸಿರಸ್ತೆದಾರ ಶ್ರೀಶೈಲ ಸೇರಿದಂತೆ ಅನೇಕರಿದ್ದರು ಗೋದಾಮಿನಲ್ಲಿಯ ಚೀಲಗಳ ಎಣಿಕೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವ್ಯವಸ್ಥಾಪಕರಾದ ಶಿಲ್ಪಾ ಅವರು,ಮೂರು ಉಗ್ರಾಣಗಳಲ್ಲಿನ ದಾಸ್ತಾನು ಎಣಿಕೆ ಮಾಡಿ ನಂತರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಮತ್ತು ಡಿಡಿ ಅವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ಈಗಾಗಲೇ 612 ಕ್ವಿಂಟಾಲ್ ಅಕ್ಕಿ ಇತರೆ ಪಡಿತರ ಚೀಲಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು ಇನ್ನು ಹೆಚ್ಚು ಅಥವಾ ಕಡಿಮೆಯ ಕುರಿತು ಪರಿಶೀಲನೆ ಮಾಡಲಾಗುತ್ತಿದೆ ಎಂದರು.ಅಲ್ಲದೆ ಮಾರ್ಚ್ ತಿಂಗಳ ಪಡಿತರ ಧಾನ್ಯಗಳ ಸರಬರಾಜಿನ ಜವಬ್ದಾರಿಯನ್ನು ಬೇರೊಬ್ಬ ವ್ಯವಸ್ಥಾಪಕರಿಗೆ ವಹಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ ಕಚೇರಿಯ ಆಹಾರ ವಿಭಾಗದ ಸಿರಸ್ತೆದಾರ ಶ್ರೀಶೈಲ,ಅಮಾನತ್ತುಗೊಂಡಿರುವ ವ್ಯವಸ್ಥಾಪಕ ಸಿದ್ದಣ್ಣ ಸೇರಿದಂತೆ ಇತರೆ ಸಿಬ್ಬಂದಿಗಳು ಹಾಜರಿದ್ದರು.