ಕಲಬುರಗಿ: ಶಹಾಬಾದ ನಗರಸಭೆಯಲ್ಲಿ ಗುರುವಾರ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷತೆಯಲ್ಲಿ ವಿಶೇಷ ತುರ್ತು ಸಭೆ ನಡೆಯಿತು.
ನಗರಸಭೆಯ ಪೌರಾಯುಕ್ತ ಬಸವರಾಕ ಹೆಬ್ಬಾಳ ಅವರು ಇದೇ ಫೆಬ್ರವರಿ 27 ರಂದು ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ ಅಶ್ವಾರೂಢ ಮೂರ್ತಿ ಅನವಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸರ್ವ ಸದಸ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂದು ಕೋರಿದರು.ಅದಕ್ಕೆ ನಗರಸಭೆಯ ಸದಸ್ಯ ನಾಗರಾಜ ಕರಣಿಕ್ ಮಾತನಾಡಿ, ಇಷ್ಟೊಂದು ತರಾತುರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದರೇ ಹೇಗೆ? ಕೇವಲ ನಾಲ್ಕು ದಿನಗಳು ಉಳಿದಿವೆ.ಆದ್ದರಿಂದ ಮಾರ್ಚನಲ್ಲಿ ಕಾರ್ಯಕ್ರಮವನ್ನು ಮಾಡಿದರೆ ಚೆನ್ನಾಗಿರುತ್ತದೆ..ಅಲ್ಲದೇ ಶಿಷ್ಟಾಚಾರದ ಪಾಲನೆಯ ಜತೆಗೆ ಈ ಭಾಗದ ನೇತಾರ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ.ಆದ್ದರಿಂದ ಅವರನ್ನು ಆಹ್ವಾನ ನೀಡಬೇಕು. ಹಾಗಾಗಿ ಕಾರ್ಯಕ್ರಮವನ್ನು ಮಾರ್ಚನಲ್ಲಿ ಆಯೋಜಿಸಿ ಎಂದರು.
ಈಗಾಗಲೇ ಕಾರ್ಯಕ್ರಮವನ್ನು ಫೆಬ್ರವರಿ 27ರಂದು ಆಯೋಜಿಸಲು ನಿರ್ಧರಿಸಲಾಗಿದೆ. ಈಗಾಗಲೇ ಬಹಳಷ್ಟು ತಡವಾಗಿದೆ ಎಂದರು.ಅದಕ್ಕೆ ಸಭೆಯಲ್ಲಿದ್ದ ಸದಸ್ಯರು ಫೆಬ್ರವರಿ 27ರಂದು ಶಿಷ್ಟಾಚಾರದ ಮೂಲಕ ಯಾವುದೇ ತೊಂದರೆಯಾಗದಂತೆ ಆಚರಿಸಲು ಒಪ್ಪಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ, ಎಇಇ ಶರಣು ಪೂಜಾರಿ ಸೇರಿದಂತೆ ನಗರಸಭೆಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಸಾಯಿಬಣ್ಣ ಸುಂಗಲಕರ್ ನಿರೂಪಿಸಿ,ವಂದಿಸಿದರು.