ಕಲಬುರಗಿ: ನಿರ್ಮಾಣ ಹಂತದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ ಫೆ,2024ರ ಅಂತ್ಯಕ್ಕೆ ಪೂರ್ಣಗೊಳ್ಳಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.
ಮಂಗಳವಾರ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಕೆಆರ್ಡಿಬಿಯ 40 ಕೋಟಿ ರೂ. ಅನುದಾನ ಹಾಗೂ ಸಂಸ್ಥೆಯ 16 ಕೋಟಿ ರೂ. ಸೇರಿದಂತೆ ಒಟ್ಟು 56 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಲುತ್ತಿರುವ ಈ ಆಸ್ಪತ್ರೆಯಲ್ಲಿ 3 ಕ್ಯಾಥ್ಲ್ಯಾಬ್, 3 ಶಸ್ತ್ರಚಿಕಿತ್ಸಾ ವಿಭಾಗ ಇರಲಿವೆ. ಟ್ರಾಮಾ ಸೆಂಟರ್ ಕೆಲಸ ಕೂಡ ಪ್ರಗತಿಯಲ್ಲಿದೆ ಎಂದರು.
ಮುಂಬರುವ ದಿನಗಳಲ್ಲಿ ಕಲಬುರಗಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 50 ಹಾಸಿಗೆಯ ಕ್ರಿಟಿಕಲ್ ಕೇರ್, ತಾಯಿ ಮಕ್ಕಳ ಆಸ್ಪತ್ರೆ ಕೂಡ ನಿರ್ಮಾಣವಾಗಲಿವೆ. ಇದರಲ್ಲಿನ ಕೆಲವು ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಕೂಡ ಸಿಕ್ಕಿದೆ. ಇನ್ನು ಕೆಲವು ಕಾಮಗಾರಿ ಕ್ಯಾಬಿನೆಟ್ನಲ್ಲಿ ಅಪ್ರೂವಲ್ ಹಾಗೂ ಬಜೆಟ್ನಲ್ಲಿ ಅನೌನ್ಸ್ ಆಗಬೇಕಿದೆ ಎಂದು ಅವರು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಕುಸಿದು ಬಿದ್ದಿದ್ದ ಆಸ್ಪತ್ರೆಯ ಕಾಂಪೌಂಡ್ ಕಾಮಗಾರಿ ವೀಕ್ಷಿಸಿದ ಸಚಿವರು, ಚೆಂಗನೆ ಕಾಂಪೌಂಡ್ ಗೋಡೆ ಹತ್ತುವ ಮೂಲಕ ಅಚ್ಚರಿ ಮೂಡಿಸಿದರು. ನಂತರ ಕಾಮಗಾರಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಗುಣಮಟ್ಟದ ಕಾಮಗಾರಿ ಬಗ್ಗೆ ತಾಕೀತು ಮಾಡಿದರು.
ಪಕ್ಷದ ಪ್ರಮುಖ ಗ್ಯಾರಂಟಿಗಳಲ್ಲೊಂದಾದ ಯುವನಿಧಿ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ರಾಜ್ಯದಾದ್ಯಂತ ಸದ್ಯ 5,29,000 ಅರ್ಹ ಫಲಾನುಭವಿಗಳಿದ್ದಾರೆ. ಮುಂದಿನ ವರ್ಷ 11 ಲಕ್ಷ ಫಲಾನುಭವಿಗಳಿರುತ್ತಾರೆ. ಇವರಿಗೆ ಪ್ರತಿ ತಿಂಗಳು 2,000 ರೂ. ಕೊಡುವುದಲ್ಲದೆ ಅವರಿಗೆ ಕೌಶಲ ತರಬೇತಿ ಸಹ ನೀಡಲಾಗುವುದು ಎಂದು ಸರ್ಕಾರದ ಆಡಳಿತವನ್ನು ಸಮರ್ಥಿಸಿಕೊಂಡರು. ಎರಡು ವರ್ಷ ಮುಂಚೆ ಪದವಿ ಪಡೆದವರಿಗೂ ಕೌಶಲ ತರಬೇತಿ ನೀಡುವ ಬಗ್ಗೆ ಸಿಎಂ ಜೊತೆ ಮಾತನಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕನ್ನಡಿಗರ ಹೆಮ್ಮೆ ಖರ್ಗೆ: ಇಂಡಿಯಾ ಒಕ್ಕೂಟದ ಅಧ್ಯಕ್ಷರಾಗಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರ. ಖರ್ಗೆಯವರನ್ನು ಬಲಿಪಶು ಮಾಡಲು ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎನ್ನುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅನಂತಕುಮಾರ ಹೆಗಡೆ ಆ ರೀತಿ ಮಾತನಾಡಿರುವುದು ಅವರ ಸಂಸ್ಕøತಿ ತೋರಿಸುತ್ತದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಿಂದ ಸ್ಪರ್ಧಿಸುತ್ತಾರೆಯೇ? ಎನ್ನುವ ಪ್ರಶ್ನೆಗೆ ಯಾರು ಎಲ್ಲಿಂದ ಸ್ಪರ್ಧೆ ಮಾಡಬೇಕು ಎನ್ನುವುದನ್ನು ಪಕ್ಷ ನಿರ್ಣಯಿಸುತ್ತದೆ. ಜನಾಭಿಪ್ರಾಯ ಆಧರಿಸಿ ವೀಕ್ಷಕರು ಪಕ್ಷಕ್ಕೆ ವರದಿ ನೀಡುತ್ತಾರೆ. ಆ ವರದಿ ಆಧರಿಸಿ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಟಿಕೆಟ್ ನೀಡಲಾಗುತ್ತದೆ ಎಂದು ಉತ್ತರಿಸಿದರು.