ಕಲಬುರಗಿ: ನೋಂದಾಯಿತ ಕಟ್ಟಡ ಕಾರ್ಮಿಕ ಮತ್ತು ಅವರ ಅವಲಂಬಿತರ ಆರೋಗ್ಯ ಸೇವೆಗಾಗಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು ಆರಂಭಿಸಿರುವ ಸಂಚಾರಿ ಆರೋಗ್ಯ ಕ್ಲಿನಿಕ್ನ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ನಗರದ ಕಲ್ಯಾಣ ಕರ್ನಾಟಕ ಪ್ರದೇಶಿಕ ಅಭಿವೃದ್ಧಿ ಮಂಡಳಿ ಆವರಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ಬೆಂಗಳೂರಿನಿಂದ ಬಂದಿರುವ ಶ್ರಮಿಕ ಸಂಜೀವಿನಿ ಸಂಚಾರಿ ಆರೋಗ್ಯ ಕ್ಲಿನಿಕ್ ಸೇವಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಟ್ಟಡ ಕಾರ್ಮಿಕರ ಜೀವನ ಸುಧಾರಣೆಗಾಗಿ ಕಾರ್ಮಿಕ ಇಲಾಖೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಕಟ್ಟಡ ಕಾರ್ಮಿಕರು ಕೆಲಸದಲ್ಲಿರುವ ಹಾಗೂ ಅವರು ವಾಸಿಸುವ ಸ್ಥಳಗಳಿಗೆ ಚಿಕಿತ್ಸಾಲಯದೊಂದಿಗೆ ತೆರಳಿ ಉಚಿತ ಸೇವೆ ನೀಡಲಿದೆಯೆಂದು, ಕಟ್ಟಡ ಕಾರ್ಮಿಕರು ಇದರ ಸೇವೆ ಪಡೆದುಕೊಳ್ಳಬೇಕು ಎಂದರು.
ಸಂಚಾರಿ ಆರೋಗ್ಯ ಕ್ಲಿನಿಕ್ನ ಡಾ. ರವಿ ಸಿರಸಗಿ ಮಾತನಾಡಿ ಸೋಮವಾರದಿಂದ ಶನಿವಾರದ ವರೆಗೆ ಕಲಬುರಗಿ ನಗರದ ಕಟ್ಟಡ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಸ್ಥಳಗಳಲ್ಲಿ ಸಂಚಾರಿ ಕ್ಲಿನಿಕ್ ವಾಹನವು ತೆರಳಲಿದ್ದು, ಬಿ.ಪಿ, ಶುಗರ್ ಮೊದಲಾದ ಟೆಸ್ಟ್ಗಳು ಹಾಗೂ ಇ.ಸಿ.ಜಿ ಪರೀಕ್ಷೆಯನ್ನು ಕೂಡಾ ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಬೇರೆ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದರು.
ಸೋಮವಾರ ರಾಮಜಿನಗರ ಮತ್ತು ತಾರಫೈಲ್ (ಮಧ್ಯಾಹ್ನ), ಮಂಗಳವಾರ ಬ್ರಹ್ಮಪೂರ ಮತ್ತು ಬಸವನಗರ ( ಮಧ್ಯಾಹ್ನ ), ಬುಧುವಾರ ಗಂಗಾನಗರ ಮತ್ತು ರಾಜಾಪೂರ ( ಮಧ್ಯಾಹ್ನ), ಗುರುವಾರ ಶರಣಸಿರಸಗಿ, ಜಂಬಗಿ ಮತ್ತು ಅಷ್ಟಗಿ (ಮಧ್ಯಾಹ್ನ), ಶುಕ್ರವಾರ ಊದನೂರ ಮತ್ತು ಹಿರಾಪೂರ (ಮಧ್ಯಾಹ್ನ), ಶನಿವಾರ ಆದರ್ಶನಗರ ಮತ್ತು ಸಿ.ಬಿ.ಐ ಕಾಲೋನಿಗಳಲ್ಲಿ (ಮಧ್ಯಾಹ್ನ) ವಾಹನವು ಸಂಚರಿಸಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದರು.
ಶಾಸಕರು ಸ್ಥಳದಲ್ಲಿಯೇ ಬಿ.ಪಿ ಚೆಕ್ ಮಾಡಿಸಿಕೊಂಡರು. ವಿವಿಧ ಕಟ್ಟಡ ಕಾರ್ಮಿಕರು ಸಹ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಪ್ರಾದೇಶಿಕ ಉಪಕಾರ್ಮಿಕ ಆಯುಕ್ತ ಡಿ.ಜಿ ನಾಗೇಶ, ಹಾಯಕ ಕಾರ್ಮಿಕ ಆಯುಕ್ತ ಡಾ. ಅವಿನಾಶ ನಾಯ್ಕ, ಕಾರ್ಮಿಕ ಅಧಿಕಾರಿ ರಮೇಶ ಎಸ್. ಸುಂಬಡ್ ಹಿರಿಯ ಕಾರ್ಮಿಕ ನಿರೀಕ್ಷಕರು ಹಾಗೂ ಕಟ್ಟಡ ಕಾರ್ಮಿಕರು ಇದ್ದರು.