ಕಲಬುರಗಿ: ಅಯ್ಯಪ್ಪ ರಾಮತೀರ್ಥ ಎನ್ನುವ ಗ್ರಾಮಪಂಚಾಯತ ಸದಸ್ಯನನ್ನು ದಲಿತ ಸಮಾಜದ ಮಹಿಳೆಯರ ಬಗ್ಗೆ ಅಸಭ್ಯವಾಗಿ ಹಾಗೂ ಎರಡು ಜಾತಿಗಳ ನಡುವೆ ಸಂಘರ್ಷವನ್ನು ಉಂಟುಮಾಡುವ ಮಾತುಗಳನ್ನಾಡಿದ್ದಕ್ಕೆ ಅರೆಸ್ಟ್ ಮಾಡಲಾಗಿದೆ ಹೊರತು ನನ್ನ ಬಗ್ಗೆ ಅವಾಚ್ಯ ಶಬ್ಧಗಳಿಂದ ಬೈದಿರುವುದಕ್ಕೆ ಅವರನ್ನ ಅರೆಸ್ಟ್ ಮಾಡಿಲ್ಲ ಎಂದು ಮಾಜಿಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ಕಲಬುರಗಿ ಯ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡುತ್ತಿದ್ದರು.
ಪೊಲೀಸರು ಅರೆಸ್ಟ್ ಮಾಡಿದಾಗ ಮಣಿಕಂಠ ರಾಠೋಡ್ ಎನ್ನುವ ಬಿಜೆಪಿ ಪಕ್ಷದ ವ್ಯಕ್ತಿ ಸೇರಿದಂತೆ ನೂರಾರು ಪೊಲೀಸ್ ಠಾಣೆಗೆ ಹೋಗಿ ಅವರನ್ನ ಬಿಡುವಂತೆ ಒತ್ತಡ ಹಾಕಿದ್ದಾರೆ. ಬಿಜೆಪಿ ಎಂಪಿಗೆ ಹಾಗೂ ಶಾಸಕರಿಗೆ ಫೋನ್ ಮಾಡಿ ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತಾರೆ. ಮಹಿಳೆಯರ ಬಗ್ಗೆ ಗೌರವ ಕೊಡುವುದನ್ನು ಬಿಜೆಪಿ ಪಕ್ಷದವರು ಹೇಳಿಕೊಟ್ಟಿಲ್ಲವೇ? ಹಿಂದುತ್ವ ಹಿಂದೂ ಸಮಾಜ ಎಂದು ಹೇಳುವವರು ಮಹಿಳೆಯರ ಬಗ್ಗೆ ಹೇಗೆ ಮಾತನಾಡಬೇಕು ಎಂದು ಹೇಳಿಲ್ಲವೇ? ಹೋಗಲಿ ಅಂದು ಹೋದವರಲ್ಲಿ ಮಣಿಕಂಠ ರಾರೋಠ್ ಮೇಲೆ ಹಾಗೂ ಅವನ ತಂದ ನರೇಂದ್ರ ರಾಠೋಡ್ ಮೇಲೆ ಅಕ್ರಮ ಅಕ್ಕಿ ಮಾರಾಟ ಮಾಡಿದ ಆರೋಪದ ಮೇಲೆ ಯಾದಗಿರಿ, ರಾಯಚೂರು, ಮಹಾರಾಷ್ಟ್ರ ದಲ್ಲಿ ಸುಮಾರು 40 ಕ್ಕೂ ಅಧಿಕ ಕೇಸ್ ಗಳಿಗೆ, ರೌಡಿ ಶೀಟ್ ಓಪನ್ ಆಗಿದೆ. ಅವರ ಮೇಲೆಕ್ರಮ ಯಾಕೆ ಕ್ರಮ ಕೈಗೊಂಡಿಲ್ಲ ? ರಾಮತೀರ್ಥನ ತಾಯಿಯೇ ತಮ್ಮ ಮಗನ ತಪ್ಪಾಗಿದೆ ಎಂದು ಒಪ್ಪಿಕೊಂಡಾಗ ಕ್ರಮ ಕೈಗೊಳ್ಳಬಾರದೆ ? ಇವರು ಅಕ್ರಮ ಅಕ್ಕಿ ಸಾಗಾಣಿಕೆ ಮಾಡಿದರೆ, ಮರುಳು ಸಾಗಾಣಿಕೆ ಮಾಡಿದರೆ ಅದನ್ನು ನಮ್ಮ ಕಾರ್ಯಕರ್ತರು ತಡೆದಿದ್ದಕ್ಕೆ ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇದನ್ನು ನಾನು ಸಹಿಸಲ್ಲ ಎಂದರು.
ಮಣಿಕಂಠ ರಾಠೋಡ್ ಬಿಜೆಪಿಯವನೇ ಅಲ್ಲ ಎಂದು ಗೃಹ ಸಚಿವರು ಹೇಳಬಹುದು ಹಾಗಾಗಿ ಅವನು ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಸಿಸಿ ಪಾಟೀಲ್, ಸಂತೋಷ್ ಜೀ, ಶ್ರೀ ರಾಮುಲು, ಮುರುಗೇಶ್ ನಿರಾಣಿ, ಸುನೀಲ್ ಅವರೊಂದಿಗೆ ಇರುವ ಭಾವಚಿತ್ರಗಳನ್ನು ಖರ್ಗೆ ಪ್ರದರ್ಶಿಸಿದರು.
ಕಲಬುರಗಿ ನಗರದ ಹೊಟೇಲೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿವಿಡಿಯೋ ಒಂದು ಹರಿದಾಡುತ್ತಿದೆ ಎಂದು ಆರೋಪಿಸಿದ ಖರ್ಗೆ ಅವರು ಈ ಕುರಿತು ನಗರ ಕಮೀಷನರ್ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.
ಬಿಜೆಪಿಯವರ ಅಕ್ರಮ ಚಟುವಟಿಕೆ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಪ್ರಶ್ನಿಸಿದ್ದಕ್ಕೆ ಅವರನ್ನು ಹೆದರಿಸುವ ಬೆದರಿಸುವ ಕೆಲಸವಾಗುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ನಾಯಕರ ಮೇಲೆ ದೌರ್ಜನ್ಯ ನಡೆಸಲು ಪ್ರಯತ್ನಿಸಿದರೆ ನಾನು ಸುಮ್ಮನಿರಲ್ಲ ಶಾಸಕ ಎನ್ನುವುದನ್ನೇ ಮರೆತು ಅವರಂತೆ ನಾನು ವರ್ತಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಜೊತೆಗೆ ಬಿಜೆಪಿಯವರು ಎಂತವರಿಗೆ ಬೆಂಬಲಿಸುತ್ತಿದ್ದಾರೆ ಎಂದು ಕಲಬುರಗಿಯ ಜನರಿಗೆ ಉತ್ತರಿಸಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷ ರಿಜೆಕ್ಟೆಡ್ ಪಕ್ಷ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ ಎಂದು ಕೇಳಿದಾಗ ಉತ್ತರಿಸಿದ ಪ್ರಿಯಾಂಕ್ ಖರ್ಗೆ ಅವರು, ಸ್ವತಃ ಈಶ್ವರಪ್ಪನವರೇ ರಿಜೆಕ್ಟೆಡ್ ಆಗಿದ್ದಾರೆ. ಗುತ್ತಿಗೆದಾರರ ಕಮೀಷನ್ ಕೇಸಲ್ಲಿ ಏನೂ ನಡೆದೇ ಇಲ್ಲ ಅಂದಿದ್ದ ಅವರೇ ರಾಜೀನಾಮೆ ನೀಡಿದರಲ್ಲ ಎಂದು ಕುಟುಕಿದರು. ಮಹಾರಾಷ್ಟ್ರ ಸೇರಿದಂತೆ ಬಹುತೇಕ ಕಡೆ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಶಾಸಕರನ್ನೇ ಖರೀದಿ ಮಾಡಿ ಸರ್ಕಾರ ರಚನೆ ಮಾಡಿದ್ದಾರೆ ಎಂದರು.