ಕಲಬುರಗಿ: ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳಲ್ಲಿ ಒಂದಾದ “ಅನ್ನಭಾಗ್ಯ” ಯೋಜನೆ ಪ್ರಕಾರ ಉಚಿತವಾಗಿ 10ಕೆ.ಜಿ ಅಕ್ಕಿ ವಿತರಿಸಲು ಈಗ ಅಕ್ಕಿ ಸಿಗುತ್ತಿಲ್ಲ. ಎಂದರೆ ಬಿಡಿ, ಬರಿ ಅಕ್ಕಿ ತಿಂದರೆ ಹೊಟ್ಟೆ ಉಬ್ಬಿ ಬೊಜ್ಜು ಬೆಳೆಯುತ್ತದೆ. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ, ಮೇಲಾಗಿ ಸಿಗುತ್ತಿಲ್ಲ. ಹಾಗಾಗಿ ರೊಟ್ಟಿ ಉಂಡರೆ ದೇಹ ಗಟ್ಟಿ ಅಂತಾರೆ ಹಿರಿಯರು. ಆ ಕಾರಣಕ್ಕಾಗಿ “ರೊಟ್ಟಿ ಸಾಂಬಾರ” ಹೊಸ ಯೋಜನೆ ಜಾರಿಗೊಳಿಸಬೇಕೆಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಸದಸ್ಯರಾದ ಶಿವರಾಜ ಅಂಡಗಿ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸದರಿ ಮನವಿ ಪತ್ರದಲ್ಲಿ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲೊಂದಾದ ಕಲಬುರಗಿ ತೊಗರಿ ನಾಡು ಎಂದೇ ಪ್ರಖ್ಯಾತಿ ಪಡೆದ ನಾಡಾಗಿದೆ ಇಲ್ಲಿ ಜೋಳ, ತೊಗರಿ, ಕಡಲೆ, ಸಜ್ಜೆ ಸಮೃದ್ದವಾಗಿ ಬೆಳೆಯುವ ನಾಡಾಗಿದೆ. ಹಾಗಾಗಿ ಸರಕಾರ ಅಕ್ಕಿ ಬದಲಿಗೆ ಪಡಿತರಿಗೆ ಜೋಳ, ತೊಗರಿ ಬೇಳೆ, ಸಜ್ಜೆ, ಕಡಲೆ ಬೇಳೆ, ನೀಡುವ ಮೂಲಕ ಆಯಾ ಭಾಗದ ರೈತರಿಗೆ ಪ್ರೊತ್ಸಾಹಿಸಿದಂತಾಗುತ್ತದೆ.
ಏಕೆಂದರೆ ಜೋಳಕ್ಕೆ ಬೆಲೆ ಇರದೆ ಇರುವ ಕಾರಣಕ್ಕೆ ರೈತರು ತಮ್ಮ ಜೀವನಾವಶಕ್ಕಾಗಿ ಮಾತ್ರ ಜೋಳದ ಬೆಳೆ ಬೆಳೆಯುತ್ತಿದ್ದಾರೆ. ಇದರಿಂದ ಜಾನುವಾರುಗಳಿಗೆ ಮೇವು ಸಿಗದಂತಹ ಪರಿಸ್ಥಿತಿ ಎದುರಾಗಿದೆ ಅದನ್ನು ಸರಿಪಡಿಸಲು ಮಾನ್ಯ ಮುಖ್ಯಮಂತ್ರಿಗಳು ಸದರಿ ಹೊಸ ಯೋಜನೆ ವಿಷಯವನ್ನು ಗಂಬೀರವಾಗಿ ಪರಿಗಣಿಸಿ “ರೊಟ್ಟಿ ಸಾಂಬಾರ” ಭಾಗ್ಯ ಜಾರಿಗೊಳಿಸಿ ಜೋಳ, ತೊಗರಿ, ಕಡಲೆ ಮತ್ತು ಸಜ್ಜ ಬೆಳೆಯುವ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.