ಕಲಬುರಗಿ: ಕೆಕೆಆರ್ಡಿಬಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಅವರು ಆ. 11 ರ ಶುಕ್ರವಾರ ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಹೂ ಗುಚ್ಛ ನೀಡಿ ಅಭಿನಂದಿಸಿದರು.
ತಮ್ಮ ಅಪಾರ ಬೆಂಬಲಿಗರೊಂದಿಗೆ ಸಿಎಂ ನಿವಾಸಕ್ಕೆ ತೆರಳಿದ್ದ ಡಾ. ಅಜಯ್ ಸಿಂಗ್ ಅವರು ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿ ತಮ್ಮ ಮೇಲೆ ಬಹು ದೊಡ್ಡದಾದಂತಹ ಜವಾಬ್ದಾರಿ ನೀಡಿದ್ದೀರಿ, ಅದನ್ನು ತಮ್ಮ ವಿಶ್ವಾಸ, ನಿರೀಕ್ಷೆಗೆ ತಕ್ಕಂತೆ ಸಮರ್ಥವಾಗಿ ನಿಭಾಯಿಸೋದಾಗಿಯೂ ಡಾ. ಅಜಯ್ ಸಿಂಗ್ ಸಿಎಂ ಸಿದ್ದರಾಮಯ್ಯನವರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರು ಕೆಕೆಆರ್ಡಿಬಿಗಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಾ. ಅಜಯ್ ಸಿಂಗ್ ಅವರಿಗೆ ಬೆನ್ನು ತಟ್ಟಿ ಶುಭಾಷಯ ತಿಳಿಸುತ್ತ ಮಂಡಳಿಯನ್ನು ಸಮರ್ಥವಾಗಿ ಮುನ್ನಡೆಸುವಂತೆ ಸಲಹೆ ನೀಡಿದ್ದಾರೆ.
ಕೆಕೆಆರ್ಡಿಬಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಾ. ಅಜಯ್ ಸಿಂಗ್ ಆ. 14 ರ ಸೋಮವಾರ ಕಲಬುರಗಿಯಲ್ಲಿರುವ ಮಂಡಳಿಯ ಪ್ರಧಾನ ಕಚೇರಿ ಅಭಿವೃದ್ಧಿ ಭವನದಲ್ಲಿ ಅಂದು ಬೆಳಗಿನ 11 ಗಂಟೆಗೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರು, ಅಪಾರ ಅಭಿಮಾನಿಗಳು, ಜೇವರ್ಗಿ ಸೇರಿದಂತೆ ಜಿಲ್ಲೆಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ.