ಕಲಬುರಗಿ: ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿಯು ಶನಿವಾರದಂದು ಕಲಬುರಗಿ ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಮ್ಯಾರಾಥಾನ್ ಓಟವನ್ನು ಹಮ್ಮಿಕೊಳ್ಳುವ ಮೂಲಕ ಮತದಾನದ ಜಾಗೃತಿ ಮೂಡಿಸಿತು.
ಮ್ಯಾರಾಥಾನ್ ಓಟದಲ್ಲಿ ಮಕ್ಕಳು, ಹಿರಿಯರು ಸೇರಿದಂತೆ ಸುಮಾರು ೪೦೦ಕ್ಕೂ ಹೆಚ್ಚು ನಾಗರಿಕರು ಪಾಲ್ಗೊಂಡಿದ್ದರು. ನಗರೇಶ್ವರ ಶಾಲೆಯಿಂದ ಪ್ರಾರಂಭವಾದ ಮ್ಯಾರಾಥಾನ್ ಓಟವು ಬಾಂಡೆ ಬಜಾರ, ಸುಪರ ಮಾರ್ಕೇಟ್, ಜಗತ್ ವೃತ್ತದ ಮೂಲಕವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಕ್ತಾಯಗೊಂಡಿತು.
ಮ್ಯಾರಾಥಾನ್ ಓಟದ ಸ್ಪರ್ಧೆಯಲ್ಲಿ ಪುರುಷರು, ಮಹಿಳೆಯರು ಹಾಗೂ ೧೫ ವರ್ಷದೊಳಗಿನ ಮಕ್ಕಳ ವಿಭಾಗಗಳೆಂದು ವಿಂಗಡಿಸಲಾಗಿತ್ತು. ಈ ಮೂರು ಪ್ರತ್ಯೇಕ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ೩೦೦೦ರೂ. ನಗದು, ದ್ವಿತೀಯ ಸ್ಥಾನ ಪಡೆದವರಿಗೆ ೨೦೦೦ರೂ. ಗಳ ನಗದು ಮತ್ತು ತೃತೀಯ ಸ್ಥಾನ ಪಡೆದವರಿಗೆ ೧೦೦೦ರೂ.ಗಳ ನಗದು ಬಹುಮಾನ ಹಾಗೂ ಪ್ರತಿ ವಿಭಾಗಗಳಲ್ಲಿ ಹತ್ತು ಸ್ಪರ್ಧಾಳುಗಳಿಗೆ ೫೦೦ ರೂ.ಗಳ ಸಮಾಧಾನಕರ ನಗದು ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಪಿ. ರಾಜಾ ಅವರು ನಗರೇಶ್ವರ ಶಾಲೆಯ ಹತ್ತಿರ ಮ್ಯಾರಾಥಾನ ಓಟಕ್ಕೆ ಚಾಲನೆ ನೀಡಿದರು ಹಾಗೂ ಬಹುಮಾನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಹೋಂಗಾರ್ಡ್ ಕಮಾಂಡೆಂಟ್ ಸಂತೋಷ ಪಾಟೀಲ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭೀಮರಾವ ನಾಂದ್ರೆ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
For latest news you have to visit web and on world-wide-web I found
this web site as a best site for latest updates.